ಪ್ರತಿ ವರ್ಷ ಏಪ್ರಿಲ್ 1 ಬಂದಾಗ ಹಲವರು ಇದನ್ನು “ಮೂರ್ಖರ ದಿನ” ಎಂದು ಆಚರಿಸುತ್ತಾರೆ. ಸ್ನೇಹಿತರಿಗೆ ಹಾಸ್ಯ, ತಮಾಷೆ, ಮೋಸ ಮಾಡುವುದೇ ಈ ದಿನದ ಮುಖ್ಯ ಅರ್ಥವೆಂದು ಕೆಲವರು ಭಾವಿಸುತ್ತಾರೆ. ಆದರೆ ಈ ದಿನದ ಇತಿಹಾಸ ಮಹತ್ವವನ್ನು ತಿಳಿದವರಿಗೆ ಇದು ಮೂರ್ಖರ ದಿನವಲ್ಲ – ಇದು ಜ್ಞಾನದ ದಿನ
ಡಾ. ಬಿ.ಆರ್. ಅಂಬೇಡ್ಕರ್ ಅವರು ಕೇವಲ ಸಂವಿಧಾನ ಶಿಲ್ಪಿ ಮಾತ್ರವಲ್ಲ, ಮಹಾನ್ ಅರ್ಥಶಾಸ್ತ್ರಜ್ಞರಾಗಿದ್ದರು. ಭಾರತ ದೇಶದ ಆರ್ಥಿಕ ವ್ಯವಸ್ಥೆ ಬಲವಾಗಿರಬೇಕೆಂದರೆ ಸ್ವತಂತ್ರ ಕೇಂದ್ರ ಬ್ಯಾಂಕ್ ಅಗತ್ಯವೆಂದು ಅವರು ಬಹಳ ಹಿಂದೆಯೇ ಅಧ್ಯಯನ ಮಾಡಿದ್ದರು. ಅವರ “The Problem of the Rupee – Its Origin and Its Solution” ಎಂಬ ಪ್ರಬಂಧವು ಭಾರತದ ಹಣಕಾಸು ವ್ಯವಸ್ಥೆಯ ಮೇಲೆ ಮಹತ್ವದ ಪರಿಣಾಮ ಬೀರಿತು.

ಈ ಪ್ರಬಂಧದ ಆಧಾರದ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಸ್ಥಾಪನೆಗೆ ದಾರಿ ತೆರೆದಿತು. ಬಳಿಕ 1935ರ ಏಪ್ರಿಲ್ 1ರಂದು RBI ಕಾರ್ಯಾರಂಭ ಮಾಡಿತು. ಅಂದರೆ ಏಪ್ರಿಲ್ 1 ದಿನಾಂಕವು ಭಾರತೀಯ ಆರ್ಥಿಕ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನವಾಗಿದೆ. ಇದು ಕೇವಲ ಹಾಸ್ಯ ಮಾಡುವ ದಿನವಲ್ಲ, ಬಾಬಾಸಾಹೇಬರ ಆರ್ಥಿಕ ಜ್ಞಾನವನ್ನು ನೆನಪಿಸಿಕೊಳ್ಳುವ ದಿನವೂ ಆಗಿದ.
ಡಾ. ಅಂಬೇಡ್ಕರ್ ಅವರ ವಿಚಾರಗಳನ್ನು ತಿಳಿದವರಿಗೆ ಈ ದಿನದ ಮಹತ್ವ ಸ್ಪಷ್ಟವಾಗುತ್ತದೆ. ಆದರೆ ಈ ಇತಿಹಾಸವನ್ನು ಅರಿಯದೇ ಕೇವಲ “ಮೂರ್ಖರ ದಿನ” ಎಂದು ಮಾತ್ರ ಆಚರಿಸುವವರು ನಿಜವಾದ ಅರ್ಥವನ್ನು ತಪ್ಪಿಸುತ್ತಿದ್ದಾರೆ. ಜ್ಞಾನವನ್ನು ಅರಿತುಕೊಳ್ಳುವುದು, ಇತಿಹಾಸವನ್ನು ತಿಳಿದುಕೊಳ್ಳುವುದು – ಅದೇ ನಿಜವಾದ ಗೌರವ.
ಆದ್ದರಿಂದ ಏಪ್ರಿಲ್ 1 ಅನ್ನು ಮೂರ್ಖರ ದಿನವೆಂದು ನೋಡದೇ, ಡಾ. ಬಿ.ಆರ್. ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳನ್ನು ನೆನಪಿಸುವ ಜ್ಞಾನದ ದಿನವೆಂದು ಆಚರಿಸೋಣ. ಬಾಬಾಸಾಹೇಬರ ವಿಚಾರಗಳನ್ನು ತಿಳಿದುಕೊಳ್ಳೋಣ, ಸಮಾಜದಲ್ಲಿ ಜ್ಞಾನವನ್ನು ಹಂಚಿಕೊಳ್ಳೋಣ.
ಏಕೆಂದರೆ ಜ್ಞಾನವಿದ್ದವರಿಗೆ ಇದು ಜ್ಞಾನದ ದಿನ.
ಜ್ಞಾನವಿಲ್ಲದವರಿಗೆ ಮಾತ್ರ ಇದು ಮೂರ್ಖರ ದಿನ.