ಔರಾದ:ತಾಲ್ಲೂಕಿನ ಗುಡಪಳ್ಳಿ ಗ್ರಾಮದ ಪಿ.ಎಂ.ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 77ನೇ ಗಣರಾಜ್ಯೋತ್ಸವವನ್ನು ಸರಳವಾಗಿ ಹಾಗೂ ಅಧೂರಿಯಾಗಿ ಆಚರಿಸಲಾಯಿತು. ಶಾಲೆಯ ಮುಖ್ಯಗುರುಗಳಾದ ವಿಜಯಕುಮಾರ ನಿಟ್ಟೂರೆ ಅವರು ಶಾಲಾ ಮಕ್ಕಳಿಗೆ ಭಾರತದ ಸಂವಿಧಾನದ ಮಹತ್ವದ ಕುರಿತು ಮಾಹಿತಿ ನೀಡಿದರು
ಭಾರತದ ಸಂವಿಧಾನವನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದ ಕರಡು ಸಮಿತಿಯು ಸಂವಿಧಾನ ಸಭೆಯ 11 ಅಧಿವೇಶನಗಳ ಮೂಲಕ 2 ವರ್ಷ, 11 ತಿಂಗಳು ಮತ್ತು 17 ದಿನಗಳಲ್ಲಿ (1946–1950) ರಚಿಸಿದೆ. ನವೆಂಬರ್ 26, 1949ರಂದು ಅಂಗೀಕರಿಸಲ್ಪಟ್ಟ ಈ ಸಂವಿಧಾನವು ಜನವರಿ 26, 1950ರಂದು ಜಾರಿಗೆ ಬಂದಿತು. ಪ್ರಾರಂಭದಲ್ಲಿ ಸಂವಿಧಾನವು 395 ವಿಧಿಗಳು, 22 ಭಾಗಗಳು ಹಾಗೂ 8 ಅನುಸೂಚಿಗಳನ್ನು ಹೊಂದಿತ್ತು ಎಂದು ಅವರು ತಿಳಿಸಿದರು.
ಭಾರತದ ಸಂವಿಧಾನವು ದೇಶದ ಸರ್ವೋಚ್ಚ ಕಾನೂನಾಗಿದ್ದು, ದೇಶದ ರಾಜಕೀಯ ವ್ಯವಸ್ಥೆಗೆ ಚೌಕಟ್ಟು ನೀಡುತ್ತದೆ. ಸರ್ಕಾರದ ರಚನೆ ಮತ್ತು ಕಾರ್ಯನಿರ್ವಹಣೆಯನ್ನು ಮಾರ್ಗದರ್ಶಿಸುತ್ತದೆ. ನಾಗರಿಕರ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ಖಚಿತಪಡಿಸುವ ಜೊತೆಗೆ ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ್ಯದ ಮೌಲ್ಯಗಳನ್ನು ಎತ್ತಿಹಿಡಿಯುವ ಮೂಲಕ ದೇಶದ ಏಕತೆ ಹಾಗೂ ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಒದಗಿಸಿದೆ. ಇದು ದೇಶದ ಆಡಳಿತ ಮತ್ತು ಪ್ರಗತಿಗೆ ಅತ್ಯಗತ್ಯವಾಗಿದೆ ಎಂದು ವಿಜಯಕುಮಾರ ನಿಟ್ಟೂರೆ ಅವರು ತಿಳಿಸಿದರು.
ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರಾದ ಅಂಕುಶ ಪಾಟೀಲ ಅವರು ಮಕ್ಕಳ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ತಮ್ಮ ಸ್ವಂತ ಖರ್ಚಿನಲ್ಲಿ ಬರಹ ಪುಸ್ತಕ, ಪೆನ್ನು ಹಾಗೂ ಮೈಕ್ ಸೆಟ್ಗಳನ್ನು ಬಹುಮಾನ ರೂಪದಲ್ಲಿ ನೀಡಿದ್ದು, ಗ್ರಾಮಸ್ಥರ ಪ್ರಶಂಸೆಗೆ ಹಾಗೂ ಮಕ್ಕಳ ಪ್ರೀತಿಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಶಾಲೆಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ದೇಶಭಕ್ತಿ ಗೀತೆ, ನೃತ್ಯ, ನಾಟಕ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಮಕ್ಕಳು ಅತ್ಯಂತ ಉತ್ಸಾಹದಿಂದ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಕುಂತಲಾ ರವೀಂದ್ರರೆಡ್ಡಿ, ಉಪಾಧ್ಯಕ್ಷರಾದ ಪಿಂಕುಬಾಯಿ ಗೆಟಿಕರ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಸುರೇಖಾ ಶಿಲವಂತ, ಸದಸ್ಯರಾದ ವೆಂಕಟರೆಡ್ಡಿ ಕವಳಾಸೆ, ರಾಜೇಶ್ವರಿ ಕೆಂಚಾ, ನಿರ್ಮಲಾ ಪರಶುರಾಮ, ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ತುಳಸಿರಾಮ ಪಾಂಚಾಳ, ಉಪಾಧ್ಯಕ್ಷರಾದ ಮಹಮ್ಮದ್ ರಸೀದಸಾಬ, ಸದಸ್ಯರಾದ ಅಂಕುಶ ಪಾಟೀಲ, ಅಂಕುಶ ಚರಟೆ, ಮನೋಹರ ಖಂಡೆ, ಶಿವರಾಜ, ಶಾಲೆಯ ಮುಖ್ಯಗುರು ವಿಜಯಕುಮಾರ ನಿಟ್ಟೂರೆ, ಶಿಕ್ಷಕರಾದ ಸಮೃದ್ಧ ಸೂರ್ಯವಂಶಿ, ಕಲ್ಯಾಣರಾವ್, ಜಗದೀಶ ಮೇದಾ, ಆಸ್ಮಾ ಹಾಗೂ ಶಾಲೆಯ ಮುದ್ದು ಮಕ್ಕಳು ಭಾಗವಹಿಸಿದ್ದರು.
ವರದಿ: ಅರವಿಂದ ಮಲ್ಲಿಗೆ