ಬೆಂಗಳೂರು: ಎರಡು ವರ್ಷಗಳ ಹಿಂದೆ ತೆರೆಕಂಡ ಡಿ ಬಾಸ್ ದರ್ಶನ್ ಅವರ ವೃತ್ತಿಜೀವನದ ಮಹತ್ವದ ಚಿತ್ರ ಕಾಟೇರ ಬಾಕ್ಸ್ ಆಫೀಸ್ನಲ್ಲಿ ದಾಖಲೆ ಬರೆದಿತ್ತು. ಅದೇ ಛಾಯೆಯಲ್ಲಿ ನಿರ್ಮಾಣಗೊಂಡ ಲ್ಯಾಂಡ್ ಲಾರ್ಡ್ ಚಿತ್ರಕ್ಕೆ ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿತ ಯಶಸ್ಸು ಸಿಗುತ್ತಿಲ್ಲ.
ಚಿತ್ರಕ್ಕೆ ವಿಮರ್ಶಕರಿಂದ ಹಾಗೂ ಚಿತ್ರರಂಗದಿಂದ ಬಹುಪಾಲು ಪ್ರಶಂಸೆಯ ಸುರಿಮಳೆ ಬಂದಿದ್ದರೂ, ಪ್ರೇಕ್ಷಕರು ಮಾತ್ರ ಚಿತ್ರಮಂದಿರದತ್ತ ಮುಖ ಮಾಡುತ್ತಿಲ್ಲ. ಇದಕ್ಕೆ ಹಲವು ಕಾರಣಗಳು ಚರ್ಚೆಗೆ ಗ್ರಾಸವಾಗಿವೆ.
ಕಾಟೇರ ಚಿತ್ರದಲ್ಲಿ ದರ್ಶನ್ ಅವರ ಜೊತೆಗೆ ನಿರ್ದೇಶಕ ತರುಣ್ ಸುಧೀರ್ ಅವರ ಬಲಿಷ್ಠ ಹಿಡಿತ ಚಿತ್ರಕ್ಕೆ ದೊಡ್ಡ ಶಕ್ತಿ ನೀಡಿತ್ತು. ಅದೇ ತಂಡದ ಬಳಗದಲ್ಲೇ ಬೆಳೆದ ಜಡೇಶ್ ಅವರ ನಿರ್ದೇಶನದ ಲ್ಯಾಂಡ್ ಲಾರ್ಡ್ ಚಿತ್ರದಲ್ಲಿ ನಾಯಕನಾಗಿ ವಿಜಯ್ ಕಾಣಿಸಿಕೊಂಡಿದ್ದಾರೆ. ವಿಜಯ್ ತಮ್ಮ ಕಳೆದ ಎರಡು ಚಿತ್ರಗಳಲ್ಲಿ ರೌಡಿಸಂ ಕಥಾಹಂದರದ ಮೂಲಕ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಸಾಧನೆ ಮಾಡಿದ್ದರು.
ಆದರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ಭೀಮ ಚಿತ್ರದ ಮೊದಲ ದಿನದ ಗಳಿಕೆಯನ್ನು ಟಚ್ ಮಾಡಲು ಲ್ಯಾಂಡ್ ಲಾರ್ಡ್ಗೆ ನಾಲ್ಕು ದಿನಗಳ ಸಮಯ ಬೇಕಾಯಿತು. ಚಿತ್ರದ ಸಾಧಾರಣ ಪ್ರದರ್ಶನಕ್ಕೆ ಕಥಾಹಂದರವೂ ಒಂದು ಪ್ರಮುಖ ಕಾರಣ ಎನ್ನಲಾಗುತ್ತಿದೆ. ಕೆಲ ಪ್ರೇಕ್ಷಕರಿಗೆ ಕಥೆಯ ಅತಿರೇಕ ಅಸಮಾಧಾನ ಉಂಟುಮಾಡಿದೆ. ಇದೇ ರೀತಿಯ ಟೀಕೆಗಳು ಕಾಟೇರ ಚಿತ್ರಕ್ಕೂ ಬಂದಿದ್ದರೂ, ದರ್ಶನ್ ಅವರ ಸ್ಟಾರ್ಡಮ್ ಮುಂದೆ ಅವೆಲ್ಲ ಅಷ್ಟಾಗಿ ಪ್ರಭಾವ ಬೀರುವಂತಿರಲಿಲ್ಲ.
ಇದಕ್ಕೆ ಜೊತೆಗೆ ಜೈದ್ ಖಾನ್ ಅವರ ಕಲ್ಟ್ ಚಿತ್ರ ಕೂಡ ಒಂದೇ ಸಮಯದಲ್ಲಿ ಬಿಡುಗಡೆಯಾಗಿದ್ದು, ಪ್ರೇಕ್ಷಕರು ಯಾವ ಚಿತ್ರವನ್ನು ಆಯ್ಕೆ ಮಾಡಬೇಕು ಎಂಬ ಗೊಂದಲದಲ್ಲಿದ್ದಾರೆ.
ಗಮನಾರ್ಹ ಸಂಗತಿ ಎಂದರೆ, ಕಾಟೇರ ಬಿಡುಗಡೆಯ ಸಮಯದಲ್ಲಿ ಶಾರುಖ್ ಖಾನ್ ಅವರ ಡಂಕಿ ಮತ್ತು ಪ್ರಭಾಸ್ ಅವರ ಸಲಾರ್ ಚಿತ್ರಗಳು ಕರ್ನಾಟಕದಲ್ಲಿ ಕನ್ನಡದ ಕಾಟೇರ ಎದುರು ಮಗ್ಗುಚಾಚಿದ್ದವು. ಆದರೆ ಈ ಬಾರಿ ಚಿತ್ರರಂಗದ ಸಮೀಕರಣವೇ ಉಲ್ಟಾ ಪಲ್ಟಾ ಆಗಿದೆ.
ಸಾರಥಿ ಚಿತ್ರದ ಮೂಲಕ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಮೊತ್ತ ಕಂಡಿದ್ದ ನಿರ್ಮಾಪಕರಿಗೆ ಲ್ಯಾಂಡ್ ಲಾರ್ಡ್ ನಿರಾಸೆ ಮೂಡಿಸಿದೆ.
ಆದರೂ ಲ್ಯಾಂಡ್ ಲಾರ್ಡ್ನಂತಹ ಪ್ರಯೋಗಾತ್ಮಕ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಗೆಲ್ಲಬೇಕಾದ ಅಗತ್ಯವಿದೆ. ಆಗಲೇ ಜಡೇಶ್ ಅವರಂತಹ ಪ್ರತಿಭಾವಂತ ನಿರ್ದೇಶಕರಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೂಮ್ಮಸ್ಸು ಹಾಗೂ ಅವಕಾಶಗಳು ದೊರೆಯಲಿವೆ.
ಲೇಖನ : ರಿಯಾಜ್ ಮೊಕಾಶಿ