ಬೀದರ್ ಜಿಲ್ಲೆ | ಔರಾದ ತಾಲೂಕು : ಔರಾದ ತಾಲೂಕಿನ ಜೆಜೆಎಂ (ಜಲ ಜೀವನ್ ಮಿಷನ್) ಯೋಜನೆಯ ಕಾಮಗಾರಿ ಕಳಪೆ ಮಟ್ಟದಲ್ಲಿ ನಡೆಯಲು ಸ್ಥಳೀಯ ಶಾಸಕ ಪ್ರಭು ಚೌಹಾಣ್ ಅವರೇ ನೇರ ಕಾರಣರಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಸುಧಾಕರ್ ಕೊಳ್ಳುರ ಗಂಭೀರ ಆರೋಪ ಮಾಡಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿದ ಅವರು, ಜೆಜೆಎಂ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ಬಹುತೇಕ ಗುತ್ತಿಗೆದಾರರು ಶಾಸಕರ ಆಪ್ತರು ಹಾಗೂ ಕಾರ್ಯಕರ್ತರೇ ಆಗಿದ್ದಾರೆ ಎಂದು ಆರೋಪಿಸಿದರು. ಕಾಮಗಾರಿ ಆರಂಭಿಸುವ ಸಂದರ್ಭದಲ್ಲಿ ಪೂಜೆ ನೆರವೇರಿಸಿದವರು ಶಾಸಕರೇ ಆಗಿದ್ದಾರೆ, ನಂತರ ಕಾಮಗಾರಿ ಪ್ರಗತಿ ವೀಕ್ಷಣೆ ಮಾಡಿದವರು ಕೂಡ ಶಾಸರೇ. ಆದರೆ ಇದೀಗ ಕಾಮಗಾರಿ ಸರಿಯಾಗಿ ಆಗಿಲ್ಲ, ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಳಪೆ ಕೆಲಸ ಮಾಡಿದ್ದಾರೆ ಎಂದು ಆರೋಪಿಸುವುದು ಶಾಸಕರೇ ಆಗಿರುವುದು ಅಸಂಗತ ಎಂದು ಸುಧಾಕರ್ ಕೊಳ್ಳುರ ಕಿಡಿಕಾರಿದರು. ಹಾಗಾದರೆ ಶಾಸಕರು ಕಾಮಗಾರಿ ವೀಕ್ಷಿಸಿದ್ದು ಯಾವ ಉದ್ದೇಶಕ್ಕಾಗಿ? ಎಂದು ಪ್ರಶ್ನಿಸಿದರು.
ಈ ಕಾಮಗಾರಿ ವಿಫಲಗೊಳ್ಳಲು ಶಾಸಕರು ಕೂಡ ನೇರವಾಗಿ ಹೊಣೆಗಾರರು. ಈ ಭ್ರಷ್ಟಾಚಾರದಲ್ಲಿ ಶಾಸಕ ಪ್ರಭು ಚೌಹಾಣ್ ಅವರ ಪಾತ್ರ ಪ್ರಮುಖವಾಗಿದೆ ಎಂದು ಆರೋಪಿಸಿದರು. ಸುಮಾರು 200 ಕೋಟಿ ರೂಪಾಯಿ ಅನುದಾನ ಖರ್ಚಾದರೂ ತಾಲೂಕಿನ ಜನರಿಗೆ ಹನಿ ನೀರು ಕೂಡ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜನರು ಶಾಸಕರ ಮತ್ತು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಎಂಬಂತೆ ಸರ್ಕಾರ ಎಷ್ಟೇ ಅನುದಾನ ನೀಡಿದರೂ ಸ್ಥಳೀಯ ಶಾಸಕರು ಮತ್ತು ಅಧಿಕಾರಿಗಳು ಸೇರಿಕೊಂಡು ಯೋಜನೆಯನ್ನು ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದರು.
ಇಂತಹ ಭ್ರಷ್ಟಾಚಾರದ ಪರಿಣಾಮವಾಗಿ ತಾಲೂಕಿನ ಜನರು ಬಲಿಯಾಗುತ್ತಿದ್ದಾರೆ. ಶಾಸಕರ ಒತ್ತಡಕ್ಕೆ ತಕ್ಕಂತೆ ನಡೆದುಕೊಂಡ ಅಧಿಕಾರಿಗಳು ಬಲಿ ಪಶುಗಳಾಗುತ್ತಿದ್ದಾರೆ ಎಂದು ಸುಧಾಕರ್ ಕೊಳ್ಳುರ ಆರೋಪಿಸಿದರು.
ಶಾಸಕರಿಗೆ ನಿಜವಾಗಿಯೂ ಜನರ ಬಗ್ಗೆ ಕಳಕಳಿ ಇದ್ದರೆ, ಆಗಿರುವ ತಪ್ಪುಗಳನ್ನು ಸರಿಪಡಿಸಿ ತಕ್ಷಣ ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಬೇಕು. ಅದನ್ನು ಬಿಟ್ಟು ಹೇಳಿಕೆಗಳ ಮೂಲಕ ಪ್ರಚಾರ ಗಿಟ್ಟಿಸಿಕೊಂಡರೆ ಮಾಡಿದ ತಪ್ಪುಗಳು ಮುಚ್ಚಿಹೋಗುವುದಿಲ್ಲ ಎಂದು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವರದಿ: ಅರವಿಂದ ಮಲ್ಲೀಗೆ