ಬೆಳ್ತಂಗಡಿ: ತಾಲೂಕಿನ ಗೇರುಕಟ್ಟೆ ಪ್ರದೇಶದಲ್ಲಿ ಸಂಭವಿಸಿದ ಸುಮಂತ್ (15) ಎಂಬ ಬಾಲಕನ ನಾಪತ್ತೆ ಹಾಗೂ ನಂತರ ಕೆರೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ಇಡೀ ಪ್ರದೇಶದಲ್ಲಿ ಆತಂಕ ಮತ್ತು ಕುತೂಹಲಕ್ಕೆ ಕಾರಣವಾಗಿದೆ. ಆರಂಭದಲ್ಲಿ ಚಿರತೆ ದಾಳಿ, ನಂತರ ಕೊಲೆ ಎಂಬ ಅನುಮಾನಗಳು ವ್ಯಕ್ತವಾಗಿದ್ದರೂ, ಇದೀಗ ಶವಪರೀಕ್ಷೆಯ ಪ್ರಾಥಮಿಕ ವರದಿ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಮೃತ ಸುಮಂತ್ನ ತಂದೆ–ತಾಯಿ ನೀಡಿದ ಮಾಹಿತಿ ಪ್ರಕಾರ, ಧನು ಪೂಜೆಯ ದಿನ ಬೆಳಿಗ್ಗೆ ದೇವಸ್ಥಾನಕ್ಕೆ ಹೋಗುವುದಾಗಿ ಸುಮಂತ್ ತಿಳಿಸಿದ್ದ. ಸದಾ ಕೀಟಲೆ ಮಾಡುವ ಸ್ವಭಾವದವನಾಗಿದ್ದ ಅವನು, ಆ ರಾತ್ರಿ ತಾಯಿಯ ಜೊತೆ ಆಟವಾಡುತ್ತಾ ನಿದ್ದೆಗೆ ಜಾರಿದ್ದ. ಬೆಳಿಗ್ಗೆ ಬೇಗ ದೇವಸ್ಥಾನಕ್ಕೆ ಹೋಗಬೇಕೆಂಬ ಕಾರಣಕ್ಕೆ ತಾಯಿ ಅವನ ಬಟ್ಟೆಯನ್ನು ರಾತ್ರಿಯೇ ಸಿದ್ಧಪಡಿಸಿ ಮನೆಯ ಹೊರಭಾಗದಲ್ಲಿ ಇಟ್ಟುಕೊಂಡಿದ್ದರು. ಸಾಮಾನ್ಯವಾಗಿ ಸುಮಂತ್ ಬೆಳಿಗ್ಗೆ 4.30ರ ಹೊತ್ತಿಗೆ ಎದ್ದು ಸ್ನಾನ ಮುಗಿಸಿ ದೇವಸ್ಥಾನಕ್ಕೆ ಹೊರಡುತ್ತಿದ್ದ.
ಬೆಳಿಗ್ಗೆ 6ಕ್ಕೆ ಬಂದ ಕರೆ… ಆರಂಭವಾದ ಆತಂಕ

ಆದರೆ ಬೆಳಿಗ್ಗೆ 6.00 ಗಂಟೆಯ ವೇಳೆಗೆ ಸುಮಂತ್ನ ಗೆಳೆಯನೊಬ್ಬ ತಾಯಿಗೆ ಕರೆ ಮಾಡಿ,“ಸುಮಂತ್ ದೇವಸ್ಥಾನಕ್ಕೆ ಇನ್ನೂ ಬಂದಿಲ್ಲ” ಎಂದು ಹೇಳಿದ್ದಾನೆ. ಈ ಕರೆ ಬಂದ ತಕ್ಷಣ ಮನೆಯೊಳಗೆ ಆತಂಕ ಮನೆ ಮಾಡಿತು. ಸುಮಂತ್ ಮನೆಯಲ್ಲೂ ಇರಲಿಲ್ಲ. ತಂದೆ ತಕ್ಷಣವೇ ಗೇರುಕಟ್ಟೆ ಕಡೆಗೆ ಹುಡುಕಾಟಕ್ಕೆ ತೆರಳಿದರು. ಆದರೆ ಅಲ್ಲಿ ಕೂಡ ಸುಮಂತ್ ಪತ್ತೆಯಾಗಲಿಲ್ಲ. ಬಳಿಕ ಎದುರಾದ ಗೆಳೆಯರೂ “ಅವನು ಇಲ್ಲಿ ಬಂದಿಲ್ಲ” ಎಂದು ಹೇಳಿದಾಗ, ಸುಮಂತ್ ಎಲ್ಲಿ ಹೋದ? ಎಂಬ ಗಾಬರಿ ಎಲ್ಲರನ್ನೂ ಕಾಡತೊಡಗಿತು.
ಹುಡುಕಾಟದ ವೇಳೆ ಮೊದಲಿಗೆ ಗಮನಕ್ಕೆ ಬರದಿದ್ದರೂ, ವಾಪಸ್ಸು ಬರುವಾಗ ಸುಮಂತ್ನ ಸೈಕಲ್ ತೋಟದ ಹಾದಿಯಲ್ಲಿ ನಿಂತಿರುವುದು ಕಂಡುಬಂದಿತು. ಸುಮಂತ್ ಮನೆದಿಂದ ಸುಮಾರು 500 ಮೀಟರ್ ದೂರದಲ್ಲಿ, ತೋಟದ ಕಿರಿದಾದ ದಾರಿಯಲ್ಲಿ ಕಂಪೌಂಡ್ಗೆ ಒರಗಿಸಿ ಸೈಕಲ್ ಇಟ್ಟಿದ್ದ. ಆದರೆ ಇಲ್ಲಿ ಗಮನಾರ್ಹ ಅಂಶವೆಂದರೆ ” ಸೈಕಲ್ ಕೀ ಮನೆಯಲ್ಲೇ ಇತ್ತು”. ಇದರಿಂದ ಸುಮಂತ್ ಸೈಕಲ್ ತೆಗೆದುಕೊಂಡು ಹೋಗುವ ಮೊದಲೆ ದುರ್ಘಟನೆ ನಡೆದದ್ದು ಸ್ಪಷ್ಟವಾಗುತ್ತದೆ. ಸ್ಥಳೀಯರು ಹುಡುಕಾಟ ನಡೆಸಿದಾಗ, ಸೈಕಲ್ ನಿಂತಿದ್ದ ಸ್ಥಳದಿಂದ ಸುಮಾರು 100 ಮೀಟರ್ ಮೊದಲೆ ರಕ್ತದ ಕಲೆಗಳು ಕಂಡುಬಂದವು. ರಕ್ತದ ಹನಿಗಳು ನಿಧಾನವಾಗಿ ಕೆರೆಯ ದಿಕ್ಕಿಗೆ ಸಾಗುತ್ತಿರುವುದು ಗಮನಕ್ಕೆ ಬಂದಿದೆ.
ಕೆರೆಯಲ್ಲಿ ಶವ ಪತ್ತೆ

ಪೋಲೀಸರು ಸ್ಥಳಕ್ಕೆ ಆಗಮಿಸಿ ಕೆರೆಯನ್ನು ಪರಿಶೀಲಿಸಿದಾಗ, ಸುಮಂತ್ನ ಶವ ಕೆರೆಯಲ್ಲಿ ಪತ್ತೆಯಾಯಿತು. ಆರಂಭದಲ್ಲಿ ಚಿರತೆ ದಾಳಿ ಎಂಬ ವದಂತಿಗಳು ಹರಡಿದ್ದರೂ, ನಂತರದ ತನಿಖೆಯಲ್ಲಿ ಆ ಅನುಮಾನವನ್ನು ತಳ್ಳಿ ಹಾಕಲಾಯಿತು. ಪೋಲೀಸರು ಅಸಹಜ ಸಾವು ಪ್ರಕರಣವನ್ನು ಮತ್ತೆ ಕೊಲೆ ಎಂದು ಪರಿವರ್ತಿಸಿದರು, ಸುಮಂತ್ ನ ಶವ ಪರೀಕ್ಷೆಯ ನಂತರ ಲಭ್ಯವಾದ ಪ್ರಾಥಮಿಕ ಪೋಸ್ಟ್ಮಾರ್ಟಂ ವರದಿ ಪ್ರಕಾರ, ಬಾಲಕ ಕೆರೆಯಲ್ಲಿ ಮುಳುಗುವ ಸಮಯದಲ್ಲಿ ಜೀವಂತನಾಗಿದ್ದ ,ತಕ್ಷಣದ ಸಾವಿನ ಕಾರಣ: ಮುಳುಗು ಸಾವು (Drowning), ತಲೆಗೆ ಗಾಯವಾಗಿದ್ದರು ಯಾವುದೇ ಚೂಪಾದ ಅಥವಾ ತೀಕ್ಷ್ಣ ಆಯುಧದಿಂದ ಆದದಲ್ಲ, ತಲೆಗೆ ಉಂಟಾದ ಗಾಯವು ಮಧ್ಯಮ ಬಲದಿಂದ ಉಂಟಾದ ಉಮಟು (blunt force injury) ಎಂದು ವರದಿ ತಿಳಿಸಿದೆ.

ಆಗಿದ್ದೇನು?
ಈ ಎಲ್ಲ ಮಾಹಿತಿಗಳು ಪ್ರಕರಣವನ್ನು ಇನ್ನಷ್ಟು ನಿಗೂಢವಾಗಿಸಿದೆ. ಸುಮಂತ್ ಮನೆಯವರು ಸುತ್ತುಮುತ್ತಲ ಜನರ ನಡುವೆ ಉತ್ತಮ ಸಂಬಂಧವನ್ನೆ ಹೊಂದಿದ್ದರು, ಸರಕಾರಿ ಶಾಲೆಯಲ್ಲಿ ಓದುತ್ತಿದ್ದ ಸುಮಂತ್ ಕೂಡ ಪ್ರತಿಭಾವಂತ ವಿದ್ಯಾರ್ಥಿ, ನದಿಯಿಂದ ಪ್ಲಾಸ್ಟಿಕ್ ಹೊರೆತೆಗೆಯುವ ಪ್ರೋಜೆಕ್ಟ್ ಅನ್ನು ಅವಿಷ್ಕಾರ ಮಾಡಿದ್ದ ಅದನ್ನು ಮಂಡಿಸಲು ಗುಜರಾತ್ ಗೆ ತೆರಳುವ ಅವಕಾಶವನ್ನೂ ಪಡೆದುಕೊಂಡಿದ್ದ. ನಡುವೆ ಈ ಘಟನೆ ಹೆತ್ತವರಿಗೆ ಆಘಾತವನ್ನು ನೀಡಿದೆ. ಇದು ಬೆಳಗ್ಗಿನ ಹೊತ್ತು ನಡೆದ ಘಟನೆಯಾದರಿಂದ ಇದರ ಹಿಂದೆ ಸ್ಥಳಿಯ ಕಳ್ಳರು ಇರಬಹುದ? ಇದ್ದರು ಈ ಘಟನೆ ಸುಮಂತ್ ಮನೆಯಿಂದ ಸೈಕಲ್ ಕಡೆಗೆ ಹೋಗುವಾಗಲೇ ಈ ಘಟನೆ ನಡೆದಿತ್ತಾ? ಅಥವಾ ಸೈಕಲ್ ಕೀ ಮರೆತು ಮನೆಗೆ ಹಿಂದಿರುಗುವಾಗ ಏನಾದರೂ ಅನಾಹುತ ಸಂಭವಿಸಿತ್ತಾ? ಸೈಕಲ್ ಕೀ ಏಕೆ ಮನೆಯಲ್ಲೆ ಮೆರೆತ ? ತಲೆಗೆ ಗಾಯಗೊಂಡ ಬಳಿಕ ಆತ ಸ್ವತಃ ಕೆರೆಯತ್ತ ನಡೆದನಾ? ಅಥವಾ ಯಾರಾದರೂ ಅವನನ್ನು ಎತ್ತಿಕೊಂಡು ಅಥವಾ ಎಳೆದೊಯ್ದರಾ? ಇವೆಲವೂ ತನಿಖೆಯ ನಂತರವೇ ತಿಳಿಯ ಬೇಕಿದೆ. ಸದ್ಯ ಪೋಲೀಸ್ ತನಿಖೆ ತೀವೃಗೊಂಡಿದ್ದು ಈ ಪ್ರಕರಣದ ನಿಗೂಢತೆ ಇನ್ನೂ ಹಲವು ಪ್ರಶ್ನೆಗಳೊಂದಿಗೆ ಮುಂದುವರಿದಿದೆ.