ಬಂಟ್ವಾಳ: ನೆಲಮೂಲ ಸೊಗಡಿನ ತುಳುನಾಡಿನ ಹೆಮ್ಮೆಯ ಕವಿ, ಬರಹಗಾರ, ಕತೆಗಾರ, ರಂಗಕಲಾವಿದ, ರಂಗನಿರ್ದೇಶಕ, ಯಕ್ಷಗಾನ ಪ್ರಸಂಗಕರ್ತೃ, ಬಹುಜನ ಚಿಂತಕ ಹಾಗೂ ಬಹುಜನ ಸಾಹಿತಿಯಾಗಿ ಗುರುತಿಸಿಕೊಂಡಿರುವ ಬಹುಮುಖ ಪ್ರತಿಭಾನ್ವಿತ ಸನ್ಮಾನ್ಯ ಸತೀಶ್ ಕಕ್ಕೆಪದವು ಅವರಿಗೆ 2026ರ “ಕವಿ ವಿಭೂಷಣ” ರಾಷ್ಟ್ರಮಟ್ಟದ ಗೌರವ ಪ್ರಶಸ್ತಿಯನ್ನು ಪ್ರದಾನಿಸಲಾಗುತ್ತಿದೆ.
ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಆಚರಿಸಲಾಗುವ ರಾಷ್ಟ್ರೀಯ ಯುವ ದಿನಾಚರಣೆಯ ಸಂದರ್ಭದಲ್ಲಿ, ಬೆಳಗಾವಿ ಜಿಲ್ಲೆಯ ಕವಿತ್ತ ಕರ್ಮಮಣಿ ಪೌಂಡೇಷನ್ (ರಿ), ನಾಗರಮುನ್ನೊಳಿಯು ಈ ಪ್ರಶಸ್ತಿಯನ್ನು ನೀಡಿ ಗೌರವಿಸಲು ನಿರ್ಧರಿಸಿದೆ.
ಸನ್ಮಾನ್ಯ ಸತೀಶ್ ಕಕ್ಕೆಪದವು ಅವರು ತಮ್ಮ ಗಣನೀಯ ಕಲಾತ್ಮಕ ಸಾಹಿತ್ಯ ಸೇವೆ, ನೆಲ–ಜಲ–ಪರಿಸರ ಹಾಗೂ ಜೀವನ ಪ್ರೀತಿಯನ್ನು ಪ್ರತಿಬಿಂಬಿಸುವ ಜಾನಪದೀಯ ಸಾಧನೆಯ ನಡಿಗೆಯ ಮೂಲಕ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಕವಿತೆ, ಕಥೆ, ನಾಟಕ, ಯಕ್ಷಗಾನ ಪ್ರಸಂಗ ರಚನೆ ಸೇರಿದಂತೆ ವಿವಿಧ ಸಾಹಿತ್ಯ ಹಾಗೂ ರಂಗಭೂಮಿ ಕ್ಷೇತ್ರಗಳಲ್ಲಿ ಅವರ ಕೊಡುಗೆ ಅಪಾರವಾಗಿದೆ.
ಇದನ್ನು ಓದಿ : 15 ಜನವರಿ 1913, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಇಂದಿನ ಐತಿಹಾಸಿಕ ಮಹತ್ವ
ಬಹುಜನ ಚಿಂತನೆಯ ಮೌಲ್ಯಗಳನ್ನು ಪ್ರತಿಬಿಂಬಿಸುವ ಅವರ ಬರಹಗಳು ಸಮಾಜದ ನೆಲಮೂಲ ಸೊಗಡನ್ನು ಸಾರ್ಥಕವಾಗಿ ಹೊರಹಾಕುತ್ತಿದ್ದು, ಜನಸಾಮಾನ್ಯರ ಬದುಕು, ಪರಿಸರ ಮತ್ತು ಸಂಸ್ಕೃತಿಯ ಪ್ರೀತಿಯನ್ನು ಸಾರುತ್ತವೆ. ಈ ಕಾರಣದಿಂದಲೇ ಅವರ ಸಾಹಿತ್ಯದ ಪ್ರಾಮಾಣಿಕ ನಡಿಗೆಗೆ “ಕವಿ ವಿಭೂಷಣ” ಎಂಬ ರಾಷ್ಟ್ರಮಟ್ಟದ ಗೌರವ ಲಭಿಸಿರುವುದು ಅತ್ಯಂತ ಅಭಿನಂದನೀಯವಾಗಿದ್ದು, ಅವರ ಸುದೀರ್ಘ ಸಾಹಿತ್ಯಿಕ ಸೇವೆಗೆ ಸಂದ ಅತ್ಯುತ್ತಮ ಫಲಿತಾಂಶವೆಂದು ಪರಿಗಣಿಸಲಾಗಿದೆ.
ಸನ್ಮಾನ್ಯ ಸತೀಶ್ ಕಕ್ಕೆಪದವು ಅವರ ಸಾಹಿತ್ಯ ಸೇವೆಯನ್ನು ಪ್ರಭುದ್ಧ ಭಾರತ ಇನ್ನಷ್ಟು ವ್ಯಾಪಕವಾಗಿ ಗುರುತಿಸಲಿ ಎಂಬುದು ಅಭಿಮಾನಿಗಳು ಹಾಗೂ ಸಾಹಿತ್ಯಾಸಕ್ತರ ಆಶಯವಾಗಿದೆ. ಈ ಗೌರವವು ಮುಂದಿನ ಪೀಳಿಗೆಗೆ ಪ್ರೇರಣೆಯಾಗಿ ನಿಲ್ಲಲಿದೆ ಎಂಬ ವಿಶ್ವಾಸವೂ ವ್ಯಕ್ತವಾಗುತ್ತಿದೆ.