ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಚಿಟಗುಪ್ಪಾ ಹೋಬಳಿಯ ಬೆಳಕೇರಾ ಗ್ರಾಮದಲ್ಲಿ ಕಳೆದ ಆರು ತಿಂಗಳಿಂದ ನರೇಗಾ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ) ಅಡಿಯಲ್ಲಿ ಕೂಲಿ ಕೆಲಸ ನೀಡಲಾಗುತ್ತಿಲ್ಲ ಎಂದು ಆರೋಪಿಸಿ, ಅಲ್ಲಿನ ಮಹಿಳೆಯರಿಗೆ ತಕ್ಷಣವೇ ಕೆಲಸ ಒದಗಿಸಬೇಕೆಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ಆಗ್ರಹಿಸಲಾಯಿತು.
ಗುರುವಾರ ಬೆಳಕೇರಾ ಗ್ರಾಮ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಸಂಘಟನೆಯ ಮುಖಂಡರು ಮತ್ತು ಸದಸ್ಯರು ಸೇರಿ ಪ್ರತಿಭಟನೆ ನಡೆಸಿದರು. ಗ್ರಾಮದಲ್ಲಿನ ಮಹಿಳೆಯರು ಜೀವನ ನಿರ್ವಹಣೆಗೆ ನರೇಗಾ ಕೂಲಿ ಕೆಲಸವೇ ಮುಖ್ಯ ಆಧಾರವಾಗಿದ್ದು, ಹಲವು ತಿಂಗಳಿಂದ ಕೆಲಸ ಇಲ್ಲದ ಕಾರಣ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಬೆಳಕೇರಾ ಗ್ರಾಮದ ಮಹಿಳೆಯರು ಸಂಘಟನೆಯ ಬಳಿ ತಮ್ಮ ಅಳಲನ್ನು ತೋಡಿಕೊಂಡಿರುವುದರಿಂದ, ಗ್ರಾಮ ಪಂಚಾಯತ್ಗೆ ಬಂದು ಕೆಲಸ ನೀಡುವಂತೆ ಒತ್ತಾಯಿಸುತ್ತಿದ್ದೇವೆ. ಮಹಿಳೆಯರಿಗೆ ಯಾವುದೇ ವಿಳಂಬವಿಲ್ಲದೆ ನರೇಗಾ ಅಡಿಯಲ್ಲಿ ಕೂಲಿ ಕೆಲಸ ಒದಗಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯ ಮುಖಂಡರು ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲೂಕು ಸಂಚಾಲಕ ರಾಹುಲ್ ಉದ್ದಾ, ಕಾರ್ಮಿಕ ಸಂಘದ ಅಧ್ಯಕ್ಷ ಶಶಿಕಾಂತ್ ಡಾಂಗೆ, ಸುರೇಶ್ ಘಾಂಗ್ರೆ, ಶಿವಾನಂದ್ ಕಟ್ಟಿಮನಿ, ಶ್ರೀನಿವಾಸ್ ಕಟ್ಟಿಮನಿ, ಸಂತೋಷ್ ಅತಿವಾಳ್, ಶರಣಪ್ಪ ಮೇತ್ರೆ, ಶಿವರಾಜ್ ಸಿಂಧನಕೇರಾ ಸೇರಿದಂತೆ ಹಲವು ಕಾರ್ಯಕರ್ತರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.