ಬೆಳ್ತಂಗಡಿ: ತಾಲೂಕಿನ ದಲಿತರ ಶಿಕ್ಷಣ ಮತ್ತು ಭೂಹಕ್ಕೊತ್ತಾಯ ಸಮಿತಿಯ ಆಶ್ರಯದಲ್ಲಿ ನಾಗರಿಕ ಸೇವಾ ಟ್ರಸ್ಟ್ ಗುರುವಾಯನಕೆರೆ ಸಹಭಾಗಿತ್ವದಲ್ಲಿ ತಾಲೂಕು ಮಟ್ಟದ ಹಕ್ಕೊತ್ತಾಯ ಜಾಥಾ ಹಾಗೂ ಸಮಾವೇಶ ನಡೆಯಿತು. ಬೆಳ್ತಂಗಡಿ ಸಂತೆಕಟ್ಟೆ ಅಯ್ಯಪ್ಪ ಮಂದಿರದ ಬಳಿಯಿಂದ ಮೆರವಣಿಗೆಗೆ ಚಾಲನೆ ನೀಡಲಾಗಿದ್ದು ಅಯ್ಯಪ್ಪಗುಡಿಯ ಬಳಿಯಿಂದ ಆರಂಭವಾದ ಜಾಥಾ ಮುಖ್ಯ ರಸ್ತೆಯ ಮೂಲಕ ಸಾಗಿತು. ನಮ್ಮ ಭೂಮಿ ನಮ್ಮ ಹಕ್ಕು ಎಂಬ ಘೋಷಣೆಗಳೊಂದಿಗೆ ಜಾಥಾ ಸಿ ವಿ ಸಿ ಹಾಲ್ ತಲುಪಿತು.

ಸಮಾವೇಶದಲ್ಲಿ ಭೂಮಿಗೆ ಸಂಬಂಧಿಸಿದ ಹನ್ನೊಂದು ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ಮೂರು ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ದಲಿತರ ಶಿಕ್ಷಣ ಮತ್ತು ಭೂಹಕ್ಕೊತ್ತಾಯ ಸಮಿತಿಯ ಸಂಚಾಲಕ ಎಂ ಬಿ ಕರಿಯ ಪ್ರಸ್ತಾವನೆ ಮಂಡಿಸಿದರು. ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ ಸೋಮನಾಥ ನಾಯಕ್ ಸಮಾವೇಶದ ಉದ್ದೇಶ ಮತ್ತು ಹಿನ್ನೆಲೆಯನ್ನು ವಿವರಿಸಿದರು.
ಸಭೆಯಲ್ಲಿ ಭೀಮ್ ಆರ್ಮಿ ರಾಜ್ಯಾಧ್ಯಕ್ಷ ರಾಜಗೋಪಾಲ್ ಚಿಂತಕ ಸಾಹಿತಿ ಲಕ್ಷ್ಮೀಶ ತೋಳ್ವಾಡಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಸಂಚಾಲಕ ರಮೇಶ್ ಆರ್ ಸೇರಿದಂತೆ ಸದಾಶಿವ ಹೆಗ್ಡೆ ಬಾಬಿ ಮಾಲಾಡಿ ಸಹ ಸಂಚಾಲಕರಾದ ಬಾಬು ಎ ನಾರಾಯಣ ಕಿಲಂಗೋಡಿ ಸುಕೇಶ್ ಮಾಲಾಡಿ ಉಪಸ್ಥಿತರಿದ್ದರು.
