ಮಂಗಳೂರು, ಮಾ.21: ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಪ್ರಾಚೀನ ಧಾರ್ಮಿಕ ಸಂಪ್ರದಾಯವಾದ “ಪ್ರಸಾದ ಎಸಳು” ಕುರಿತು ವಿವರಣಾತ್ಮಕ ಚರ್ಚಾ ಗೋಷ್ಠಿ ಶನಿವಾರ ನಡೆಯಿತು. ಗೋವಾದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಈ ಸಂಪ್ರದಾಯದಲ್ಲಿ ಭಕ್ತನು ಪುರೋಹಿತರ ಮೂಲಕ ದೇವರಲ್ಲಿ ಪ್ರಾರ್ಥಿಸಿದ ಬಳಿಕ ಮೂರ್ತಿ ಅಥವಾ ಪೀಠದಲ್ಲಿ ಹಚ್ಚಿದ ಹೂವಿನ ಎಸಳು ಕೆಳಗೆ ಬೀಳುವ ಮೂಲಕ ದೈವಿಕ ಸಂಕೇತವನ್ನು ಅರ್ಥೈಸಲಾಗುತ್ತದೆ ಎಂದು ತಿಳಿಸಲಾಯಿತು.
ಮಾನವಿಕಾ ಶಾಸ್ತ್ರದ ಹಿನ್ನಲೆಯಲ್ಲಿ ‘ಪ್ರಸಾದ ಎಸಳು’ (ಪ್ರಸಾದ ಪಾಕಳಿ) ದೈವಿಕ ಪರಿಕಲ್ಪನೆ ಕುರಿತು ಸಂಶೋಧನೆ ನಡೆಸುತ್ತಿರುವ ಗೋವಾದ ಡಾ. ಬಾಲಾಜಿ ಶೆಣೈ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವಿವಿಧ ದೇವಾಲಯಗಳಲ್ಲಿ ಹೂವಿನ ಎಸಳುಗಳನ್ನು ಹಚ್ಚುವ ವಿಧಾನ, ಅದರ ವಿನ್ಯಾಸ ಹಾಗೂ ಅರ್ಥಗಳ ಬಗ್ಗೆ ವಿವರಿಸಿದರು. ಧಾರ್ಮಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸಭಿಕರು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿ.ಎ. ನಂದಗೋಪಾಲ ಶೆಣೈ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪಯ್ಯನೂರು ರಮೇಶ ಪೈ, ಸಿ.ಎ. ಜಯಂತ ಶೆಣೈ ನಗರ್, ಎಂ. ಗಣೇಶ್ ಭಟ್, ವಸಂತ ಶೆಣೈ, ಸಿ.ಎ. ಎಂ.ಎನ್. ಪೈ, ಪ್ರೊ. ಪ್ರಕಾಶ ಮಲ್ಯ ಹಾಗೂ ಮಂಗಳೂರು ಭಾಗದ ಸ್ಥಳೀಯ ದೇವಸ್ಥಾನಗಳ ಪ್ರತಿನಿಧಿಗಳು, ಗಣ್ಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸುಚಿತ್ರಾ ಎಸ್. ಶೆಣೈ ಕಾರ್ಯಕ್ರಮ ನಿರೂಪಿಸಿ ಸಂಶೋಧನಾ ಅಧ್ಯಯನದ ಪರಿಚಯ ನೀಡಿದರು. ಕೇಂದ್ರದ ಸಿ.ಎ.ಒ. ಡಾ. ಬಿ. ದೇವದಾಸ ಪೈ ವಂದಿಸಿದರು. ಈ ಸಂದರ್ಭ ಸಂಶೋಧಕ ಡಾ. ಬಾಲಾಜಿ ಶೆಣೈ ಅವರನ್ನು ಸನ್ಮಾನಿಸಲಾಯಿತು.