ಮಂಗಳೂರು: ಮಾಜಿ ಪತ್ರಕರ್ತ ಶ್ರೀನಿವಾಸ ನಂದಗೋಪಾಲ್ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ದ್ವಿಚಕ್ರ ವಾಹನ ಶೈಕ್ಷಣಿಕ ಅಭಿಯಾನ ‘ಡ್ರೀಮ್ಸ್ ಆನ್ ವೀಲ್ಸ್’ ಶುಕ್ರವಾರ ಮಂಗಳೂರಿನಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು. ರಾಜ್ಯಾದ್ಯಂತ ಸಂಚರಿಸಿ ರಾಜಕುಶಾಲನಗರದಿಂದ ಮಂಗಳೂರಿಗೆ ಆಗಮಿಸುವ ಮೂಲಕ ಅವರು 6,493 ಕಿಲೋಮೀಟರ್ಗಳ ಸುದೀರ್ಘ ಪ್ರಯಾಣವನ್ನು ಪೂರ್ಣಗೊಳಿಸಿದರು.
ಕಳೆದ ವರ್ಷ ನವೆಂಬರ್ 24ರಂದು ಆರಂಭವಾದ ಈ ಅಭಿಯಾನದಲ್ಲಿ ನಂದಗೋಪಾಲ್ ಅವರು ತಮ್ಮ ಹೋಂಡಾ ಸಿಬಿ350 ಮೋಟಾರ್ ಬೈಕ್ ಮೂಲಕ 31 ಜಿಲ್ಲೆಗಳಲ್ಲಿ ಸಂಚರಿಸಿ, ಗ್ರಾಮೀಣ ಭಾಗದ 46 ಸರ್ಕಾರಿ ಶಾಲೆಗಳ ಸುಮಾರು 5 ಸಾವಿರ ವಿದ್ಯಾರ್ಥಿಗಳನ್ನು ತಲುಪಿದರು. ವಿಶೇಷವಾಗಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ, ವೃತ್ತಿಜೀವನದ ಮಾರ್ಗದರ್ಶನ ಹಾಗೂ ಗುರಿ ಸಾಧನೆ ಕುರಿತು ಸಂವಾದ ನಡೆಸಿದರು.


ಅಭಿಯಾನದ ಅವಲೋಕನ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸುವುದಾಗಿ ನಂದಗೋಪಾಲ್ ತಿಳಿಸಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ನೀಡುವ ಮೂಲಕ ಆತ್ಮವಿಶ್ವಾಸ ಮತ್ತು ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಈ ವರದಿ ಪೂರಕವಾಗಲಿದೆ ಎಂದು ಅವರು ಹೇಳಿದರು.
“ಈ ಪ್ರಯಾಣವು ಕೇವಲ ಸಂಚಾರವಲ್ಲ, ಇದೊಂದು ಮಿಷನ್. ಹಿಂದುಳಿದ ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಹಿಡಿದು ದಕ್ಷಿಣದ ಬುಡಕಟ್ಟು ಪ್ರದೇಶಗಳವರೆಗೆ ನೆಲಮಟ್ಟದ ಶೈಕ್ಷಣಿಕ ವಾಸ್ತವಗಳನ್ನು ಅರಿಯುವುದು ನನ್ನ ಉದ್ದೇಶವಾಗಿತ್ತು. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸ್ಥಳೀಯರೊಂದಿಗೆ ನಡೆಸಿದ ಮಾತುಕತೆಯಿಂದ ಕಲಿಕೆಯ ಸವಾಲುಗಳು, ಮೂಲಸೌಕರ್ಯಗಳ ಕೊರತೆ ಮತ್ತು ವೃತ್ತಿಜೀವನ ಮಾರ್ಗದರ್ಶನದ ಅಗತ್ಯತೆ ಸ್ಪಷ್ಟವಾಗಿದೆ,” ಎಂದು ನಂದಗೋಪಾಲ್ ಅಭಿಪ್ರಾಯಪಟ್ಟರು.