ಬಂಟ್ವಾಳ, :ತುಳುನಾಡಿನ ಮಣ್ಣಿನಲ್ಲಿ ಪೀಳಿಗೆಯಿಂದ ಪೀಳಿಗೆ ನಡೆದುಕೊಂಡು ಬಂದಿರುವ ಧಾರ್ಮಿಕ ಹಾಗೂ ಮತೀಯ ಸೌಹಾರ್ದತೆ ಮತ್ತೊಮ್ಮೆ ಸಜಿಪ ಮಾಗಣೆಯಲ್ಲಿ ಸ್ಪಷ್ಟವಾಗಿ ಕಾಣಿಸಿಕೊಂಡಿದೆ. ಸಜಿಪಮುನ್ನೂರು ಗ್ರಾಮದ ನಂದಾವರದಲ್ಲಿ ನಡೆದ ವಿಶಿಷ್ಟ ಸಂಪ್ರದಾಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಿಂದ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ನಾಲ್ಕೈತ್ತಾಯ ದೈವದ ನೇಮೋತ್ಸವದ ಅಂಗವಾಗಿ, ದೈವದ ಭಂಡಾರವನ್ನು ನಂದಾವರ ಜುಮಾ ಮಸೀದಿಗೆ ಕರೆದೊಯ್ಯುವ ಸಂಪ್ರದಾಯ ಇಂದಿಗೂ ಜೀವಂತವಾಗಿದೆ. ಈ ಬಾರಿಯೂ ಸೋಮವಾರ ಈ ಸಂಪ್ರದಾಯ ವಿಧಿ ವಿಧಾನಗಳೊಂದಿಗೆ ನೆರವೇರಿತು.
ಮೆರವಣಿಗೆ ಮೂಲಕ ದೈವದ ಭಂಡಾರವನ್ನು ಮಸೀದಿಗೆ ತರಲಾಗುತ್ತದೆ. ಅಲ್ಲಿಗೆ ತಲುಪಿದ ಬಳಿಕ, ಮಸೀದಿಯ ಮೂರು ಮೆಟ್ಟಿಲುಗಳನ್ನು ಏರಿ, ಸಂಪ್ರದಾಯದಂತೆ ಸೀಯಾಳ ಇಟ್ಟು ದೈವ ನುಡಿ ನೀಡುವ ವಿಧಿ ನೆರವೇರಿಸಲಾಗುತ್ತದೆ. ನಂತರ ಮೆರವಣಿಗೆ ಮರಳಿ ತನ್ನ ಸ್ಥಳಕ್ಕೆ ತೆರಳುತ್ತದೆ.
ಈ ಅಪರೂಪದ ಸಂಪ್ರದಾಯಕ್ಕೆ ಸಾಕ್ಷಿಯಾಗಲು ನೂರಾರು ಸಂಖ್ಯೆಯಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಜನರು ಒಂದಾಗಿ ಸೇರುವುದೇ ಈ ಭಾಗದ ವಿಶೇಷತೆ. ಧರ್ಮ ಬೇರೆ ಆದರೂ, ಪರಸ್ಪರ ಗೌರವ ಹಾಗೂ ಒಗ್ಗಟ್ಟು ಇಲ್ಲಿನ ಜನಜೀವನದ ಭಾಗವಾಗಿದೆ ಎಂಬುದನ್ನು ಇದು ತೋರಿಸುತ್ತದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಘಟನೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, “ತುಳುನಾಡಿನ ಸೌಹಾರ್ದತೆಯನ್ನು ಯಾರಿಂದಲೂ ಅಳಿಸಲಾಗದು” ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಸಂಪ್ರದಾಯಗಳು ಸಮಾಜದಲ್ಲಿ ಶಾಂತಿ ಮತ್ತು ಸಹಬಾಳ್ವೆಯನ್ನು ಬಲಪಡಿಸುವುದಾಗಿ ಅವರು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೆಲವೆಡೆ ಮತೀಯ ಭೇದಭಾವದ ಘಟನೆಗಳು ಕೇಳಿಬರುತ್ತಿರುವ ಸಂದರ್ಭದಲ್ಲೂ, ಸಜಿಪ ಮಾಗಣೆಯಂತಹ ಸ್ಥಳಗಳು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತಿವೆ. ಈ ಸಂಪ್ರದಾಯವು ತುಳುನಾಡಿನ ಸಂಸ್ಕೃತಿ, ಸಹಿಷ್ಣುತೆ ಮತ್ತು ಒಗ್ಗಟ್ಟಿನ ಪ್ರತೀಕವಾಗಿ ಗುರುತಿಸಿಕೊಂಡಿದೆ.