ಬೆಳ್ತಂಗಡಿ: ಕನ್ನಡ ಮಾಧ್ಯಮದ ಪ್ರತಿಭಾವಂತ ವಿದ್ಯಾರ್ಥಿ, ರಾಷ್ಟ್ರೀಯ ಮಟ್ಟದ ವಿಜ್ಞಾನ ಪ್ರದರ್ಶನಕ್ಕೆ ಆಯ್ಕೆಯಾಗಿದ್ದ ಬೆಳ್ತಂಗಡಿ ತಾಲೂಕಿನ ಬಾಲಕ ಸುಮಂತ್ ಹತ್ಯೆಯಾಗಿ ಹದಿನೈದು ದಿನಗಳು ಕಳೆದರೂ ಪ್ರಕರಣ ಇನ್ನೂ ನಿಗೂಢವಾಗಿಯೇ ಉಳಿದಿದೆ. ಫೆಬ್ರವರಿ 6ರಂದು ವಿಮಾನದ ಮೂಲಕ ಅಹಮದಾಬಾದಿಗೆ ತೆರಳಬೇಕಿದ್ದ ಸುಮಂತ್, ರಾಜ್ಯಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದಿದ್ದ ಭರವಸೆಯ ಪ್ರತಿಭೆ. ಸುಮಂತ್ ನಾಪತ್ತೆಯಾದ ಬಳಿಕ ಶವವಾಗಿ ಪತ್ತೆಯಾಗಿದ್ದು, ಆರಂಭದಿಂದಲೇ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಪೊಲೀಸರು ನಡೆಸಿದ ತನಿಖೆಯಲ್ಲಿ ಸ್ಪಷ್ಟವಾದ ಸುಳಿವುಗಳು ಸಿಗದೆ, ಇದೀಗ ಎರಡು ಪ್ರಮುಖ ಥಿಯರಿಗಳ ಮೇಲೆ ತನಿಖೆ ಕೇಂದ್ರೀಕೃತಗೊಂಡಿದೆ.
ಹಗುರ ಭಾರದ ವಸ್ತುವಿನಿಂದ ತಲೆಗೆ ಹಲ್ಲೆ?
ಪೋಲೀಸ್ ಮೂಲಗಳ ಪ್ರಕಾರ, ಸುಮಂತನ ತಲೆಗೆ ಹಗುರ ಭಾರದ ವಸ್ತುವಿನಿಂದ ಹಲ್ಲೆ ಮಾಡಿರುವ ಸಾಧ್ಯತೆ ಇದೆ. ಆತ ತೆರಳಿದ ಮಾರ್ಗದಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದು, ನಂತರ ಆತನನ್ನು ಕೆರೆಯ ಸಮೀಪಕ್ಕೆ ಎತ್ತಿಕೊಂಡು ತರಲಾಗಿದೆ. ಅಲ್ಲಿನ ಕಲ್ಲಿನಲ್ಲಿ ಕೂರಿಸಿ ನಂತರ ಕೆರೆಗೆ ತಳ್ಳಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಕೆರೆಯ ದಂಡೆಯಲ್ಲಿರುವ ಕಲ್ಲಿನ ಮೇಲೆ ರಕ್ತದ ಗುರುತುಗಳು ಪತ್ತೆಯಾಗಿವೆ. ಆದರೆ ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯವಾಗಬಹುದಾದ ಆರೆ ಅಥವಾ ಪಿಕ್ಕಾಸಿನ ಹಿಡಿಯಂತಹ ವಸ್ತು ಇಂದಿಗೂ ಪತ್ತೆಯಾಗಿಲ್ಲ. ಸಾಮಾನ್ಯವಾಗಿ ಕೃಷಿಕರ ಮನೆಯಲ್ಲಿ ಕಂಡುಬರುವ ಈ ವಸ್ತು ಪತ್ತೆಯಾಗದಿರುವುದು ಪ್ರಕರಣದ ನಿಗೂಢತೆಯನ್ನು ಹೆಚ್ಚಿಸಿದೆ. ಸುಮಂತ್ ಜೊತೆ ಧನು ಪೂಜೆಗೆ ಹೋಗಬೇಕಾಗಿದ್ದ ಮೂವರು ಬಾಲಕರು – ಅವರಲ್ಲಿ ಇಬ್ಬರು ಕಿರಿಯರು ಮತ್ತು ಒಬ್ಬ ಸಮವಯಸ್ಕ – ಆ ಸ್ಥಳಕ್ಕೆ ಬಂದಿದ್ದು, ಸುಮಾರು 15 ನಿಮಿಷ ಕಾದು ನಂತರ ಹಿಂತಿರುಗಿರುವುದು ಸಿಸಿಟಿವಿ ದೃಶ್ಯಗಳಲ್ಲಿ ದಾಖಲಾಗಿದೆ. ಬಾಲಕರು ನೀಡಿದ ಹೇಳಿಕೆಗಳು ಮತ್ತು ಸಿಸಿಟಿವಿ ಫುಟೇಜ್ಗಳು ಪರಸ್ಪರ ಹೊಂದಿಕೆಯಾಗಿದ್ದು, ಅವರ ಮೇಲೆ ಪೊಲೀಸರಿಗೆ ಯಾವುದೇ ಸಂಶಯವಿಲ್ಲ.
ಶ್ವಾನದಳದ ವರದಿ ಏನು ಹೇಳುತ್ತದೆ?
ಶವ ಪತ್ತೆಯಾದ ತಕ್ಷಣ ಶ್ವಾನದಳವನ್ನು ಕರೆಸಲಾಗಿತ್ತು. ಘಟನಾ ಸ್ಥಳದಲ್ಲಿ ವಾಸನೆ ಗ್ರಹಿಸಲು ಯಾವುದೇ ವಸ್ತು ಸಿಗದ ಕಾರಣ, ಶ್ವಾನವನ್ನು ಸುಮಂತನ ಮನೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಆತನ ಚಡ್ಡಿಯ ವಾಸನೆಯನ್ನು ಗ್ರಹಿಸಿದ ಶ್ವಾನ, ಸುಮಂತ್ ತೆರಳಿದ ಮಾರ್ಗವನ್ನೇ ಅನುಸರಿಸಿ, ಹಲ್ಲೆ ನಡೆದ ಸ್ಥಳ, ರಕ್ತದ ಕಲೆಗಳು ಕಂಡ ಸ್ಥಳ ಮತ್ತು ಅಂತಿಮವಾಗಿ ಕೆರೆಯ ದಂಡೆಯವರೆಗೆ ಹೋಗಿದೆ. ನಂತರ ಶ್ವಾನ ಮತ್ತೆ ನೇರವಾಗಿ ಮನೆಗೆ ಮರಳಿರುವುದು ಹಲವು ಅನುಮಾನಗಳಿಗೆ ಕಾರಣವಾಯಿತು.
ಸಹೋದರನ ಮೇಲೆ ಮೂಡಿದ ಅನುಮಾನ
ಪ್ರಕರಣದಲ್ಲಿ ಇದೀಗ ಸಂಶಯದ ಬಾಣ ಸುಮಂತನ ಅಣ್ಣನತ್ತ ತಿರುಗಿದೆ. ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸುಮಂತನ ಅಣ್ಣನ ವಯಸ್ಸು ಸುಮಾರು 19-20 ವರ್ಷ. ಆತನು ದೇಹಬಲ ಹೊಂದಿದ್ದರೂ, ಕೆರೆಯ ದಡದಿಂದ ನೇರವಾಗಿ ತಳ್ಳುವಷ್ಟು ಶಕ್ತಿ ಇರಲಿಲ್ಲ ಎನ್ನಲಾಗುತ್ತಿದೆ. ಆದ್ದರಿಂದ ಕಲ್ಲಿನ ಮೇಲೆ ಕೂರಿಸಿ ನಂತರ ಕೆರೆಗೆ ತಳ್ಳಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮನೆಯಲ್ಲಿದ್ದ ವ್ಯವಸ್ಥೆಯ ಪ್ರಕಾರ, ಸುಮಂತ್ ಮತ್ತು ಆತನ ಅಣ್ಣ ಒಟ್ಟಿಗೆ ಮಲಗುತ್ತಿದ್ದರು. ಸುಮಂತ್ ಮುಂಜಾನೆ ಧನು ಪೂಜೆಗೆ ಹೊರಟ ವಿಚಾರ ಅಣ್ಣನಿಗೆ ಮಾತ್ರ ತಿಳಿದಿತ್ತು. ಇದೇ ವಿಚಾರ ತನಿಖೆಯಲ್ಲಿ ಮಹತ್ವ ಪಡೆದುಕೊಂಡಿದೆ. ಪೊಲೀಸರು ಸುಮಂತನ ಅಣ್ಣನ ಮೊಬೈಲ್ ಅನ್ನು ವಶಕ್ಕೆ ಪಡೆದುಕೊಂಡಿದ್ದು, ಅದರಲ್ಲಿನ ಬಹುತೇಕ ಡೇಟಾವನ್ನು ರಿಟ್ರೀವ್ ಮಾಡಿದ್ದಾರೆ. ಸುಮಂತ್ ನಾಪತ್ತೆಯಾದ ರಾತ್ರಿ, ಅಣ್ಣನ ಮೊಬೈಲ್ ಸುಮಾರು 2.30ರವರೆಗೆ ಸಕ್ರಿಯವಾಗಿದ್ದು, ಆನ್ಲೈನ್ನಲ್ಲಿ ವಿಡಿಯೋ ವೀಕ್ಷಿಸುತ್ತಿದ್ದ ಹಾಗೂ ಬೆಳ್ತಂಗಡಿಯ ಯುವತಿಯೊಂದಿಗಿನ ನಿರಂತರ ವಿಡಿಯೋ ಕಾಲ್ ಸಂಪರ್ಕದಲ್ಲಿದ್ದುದಕ್ಕೆ ದಾಖಲೆಗಳು ದೊರೆತಿವೆ. ಈ ಲವ್ ವಿಚಾರ ಸುಮಂತನಿಗೆ ಗೊತ್ತಾಗಿದ್ದು, ಆತ ಇದನ್ನು ಮನೆಯವರಿಗೆ ತಿಳಿಸಬಹುದೆಂಬ ಭೀತಿ ಅಣ್ಣನಿಗೆ ಇತ್ತು ಎನ್ನುವ ಶಂಕೆ ಪೊಲೀಸರನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಯುವತಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಆ ರಾತ್ರಿ ನಡೆದ ಸಂಭಾಷಣೆಗಳ ಬಗ್ಗೆ ತನಿಖೆ ನಡೆಯುತ್ತಿದೆ.
ಪೊಲೀಸರು ಏನು ಹೇಳುತ್ತಾರೆ?
ಬೆಳ್ತಂಗಡಿ ಇನ್ಸ್ಪೆಕ್ಟರ್ ಸುಬ್ಬಪ್ಪ ಉರ್ಮಾಟ್, ಸರ್ಕಲ್ ಇನ್ಸ್ಪೆಕ್ಟರ್, ಡಿಎಸ್ಪಿ ಸಿ.ಕೆ. ರೋಹಿಣಿ ಹಾಗೂ ಅವರ ತಂಡ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ವಿಕ್ಟಿಮ್ ಫ್ಯಾಮಿಲಿ ಎಂಬ ಕಾರಣದಿಂದ ಸುಮಂತನ ಕುಟುಂಬದವರ ಮೇಲೆ ಪ್ರಾರಂಭದಲ್ಲಿ ಯಾವುದೇ ಒತ್ತಡ ಹೇರಲಾಗಿರಲಿಲ್ಲ. ಆದರೆ ಎಲ್ಲರ ಹೇಳಿಕೆಗಳು ಆರಂಭದಿಂದಲೂ ಒಂದೇ ರೀತಿಯಲ್ಲಿರುವುದು ಪೊಲೀಸರಿಗೆ ಗಮನಾರ್ಹ ಅಂಶವಾಗಿದೆ. ಪ್ರಕರಣ ಅತ್ಯಂತ ಸೂಕ್ಷ್ಮವಾಗಿರುವುದರಿಂದ ಪೊಲೀಸರು ಪ್ರತಿಯೊಂದು ಸಾಕ್ಷ್ಯವನ್ನೂ ನಿಖರವಾಗಿ ಪರಿಶೀಲಿಸುತ್ತಿದ್ದಾರೆ. ಸುಮಂತನ ಮೊಬೈಲ್ ಮತ್ತು ಆತನ ಸಹೋದರನ ಮೊಬೈಲ್ ಈ ಪ್ರಕರಣಕ್ಕೆ ಉತ್ತರ ನೀಡಲಿದೆ ಎಂಬ ವಿಶ್ವಾಸ ಪೊಲೀಸರಿಗೆ ಇದೆ. ಆರೋಪಿಯ ಬಂಧನ ಮಾತ್ರ ಬಾಕಿ ಉಳಿದಿದ್ದು, ಸತ್ಯ ಶೀಘ್ರದಲ್ಲೇ ಹೊರಬರಲಿದೆ.