ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವದೆಹಲಿಯ ರಾಯ್ ಪಿತ್ತೋರಾ ಕಲ್ಚರಲ್ ಕಾಂಪ್ಲೆಕ್ಸ್ನಲ್ಲಿ ಭಗವಾನ್ ಗೌತಮ ಬುದ್ಧರ ಪವಿತ್ರ ಪಿಪ್ರಹ್ವಾ ಅವಶೇಷಗಳಿಗೆ ಸಂಬಂಧಿಸಿದ ಗ್ರ್ಯಾಂಡ್ ಅಂತಾರಾಷ್ಟ್ರೀಯ ಪ್ರದರ್ಶನವನ್ನು ಅಧಿಕೃತವಾಗಿ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ,
“ಇದು ನನ್ನ ಪಾಲಿಗೆ ಅತ್ಯಂತ ವಿಶೇಷ ಸೌಭಾಗ್ಯ. 2026ರಲ್ಲಿ ನನ್ನ ಮೊದಲ ಸಾರ್ವಜನಿಕ ಕಾರ್ಯಕ್ರಮವೇ ಭಗವಾನ್ ಬುದ್ಧರ ಪಾದಗಳ ಬಳಿ ಆರಂಭವಾಗುತ್ತಿದೆ. ಭಗವಾನ್ ಬುದ್ಧರೊಂದಿಗೆ ನನಗೆ ಅತ್ಯಂತ ಆಳವಾದ ಸಂಬಂಧವಿದೆ. ನಾನು ನನ್ನನ್ನು ಧನ್ಯನೆಂದು ಭಾವಿಸುತ್ತೇನೆ” ಎಂದು ಹೇಳಿದರು.
ತಮ್ಮ ಜೀವನ ಮತ್ತು ಬೌದ್ಧ ಪರಂಪರೆಯ ನಡುವಿನ ನಂಟನ್ನು ವಿವರಿಸಿದ ಪ್ರಧಾನಿ,
ತಮ್ಮ ಜನ್ಮಸ್ಥಳವಾದ ಗುಜರಾತ್ನ ವಡ್ನಗರ ಬೌದ್ಧ ಶಿಕ್ಷಣದ ಪ್ರಮುಖ ಕೇಂದ್ರವಾಗಿದ್ದುದನ್ನು ಸ್ಮರಿಸಿದರು. ಜೊತೆಗೆ, ಭಗವಾನ್ ಬುದ್ಧರು ಮೊದಲ ಉಪದೇಶ ನೀಡಿದ ಸಾರನಾಥ್ ಇಂದು ತಮ್ಮ ಕರ್ಮಭೂಮಿಯಾಗಿರುವುದು ತಮ್ಮ ಜೀವನದ ವಿಶೇಷ ಸಂಯೋಗ ಎಂದು ಹೇಳಿದರು. ಪ್ರಧಾನಮಂತ್ರಿಯಾಗುವ ಮೊದಲು ಕೂಡ ಯಾತ್ರಿಕನಾಗಿ ಬೌದ್ಧ ತೀರ್ಥ ಸ್ಥಳಗಳನ್ನು ಸಂದರ್ಶಿಸಿದ್ದೆನೆಂದ ಅವರು, ಪ್ರಧಾನಮಂತ್ರಿಯಾಗಿ ವಿಶ್ವದ ಅನೇಕ ಬೌದ್ಧ ತೀರ್ಥಗಳಿಗೆ ಭೇಟಿ ನೀಡುವ ಅವಕಾಶ ಲಭಿಸಿರುವುದನ್ನು ಭಾಗ್ಯವೆಂದು ವರ್ಣಿಸಿದರು.
ಭಗವಾನ್ ಗೌತಮ ಬುದ್ಧರ ಪವಿತ್ರ ಪಿಪ್ರಹ್ವಾ ಅವಶೇಷಗಳಿಗೆ ಸಂಬಂಧಿಸಿದ ಈ ಗ್ರ್ಯಾಂಡ್ ಅಂತಾರಾಷ್ಟ್ರೀಯ ಪ್ರದರ್ಶನಕ್ಕೆ
“ದಿ ಲೈಟ್ & ದಿ ಲೋಟಸ್: ರಿಲಿಕ್ಸ್ ಆಫ್ ದಿ ಅವೇಕೆನ್ಡ್ ಒನ್”
ಎಂಬ ಶೀರ್ಷಿಕೆ ನೀಡಲಾಗಿದೆ.
ಈ ಪ್ರದರ್ಶನವು ಅಪರೂಪದ ಐತಿಹಾಸಿಕ ಮಹತ್ವವನ್ನು ಹೊಂದಿದ್ದು, ನೂರು ವರ್ಷಕ್ಕಿಂತ ಹೆಚ್ಚು ಕಾಲದ ನಂತರ ಭಾರತಕ್ಕೆ ಮರಳಿದ ಪಿಪ್ರಹ್ವಾ ಅವಶೇಷಗಳನ್ನು ಮೊದಲ ಬಾರಿಗೆ ನವದೆಹಲಿಯಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸಲಾಗುತ್ತಿದೆ. ಜೊತೆಗೆ, ಪಿಪ್ರಹ್ವಾ ಪ್ರದೇಶದಲ್ಲಿ ನಡೆದ ಉತ್ಖನನಗಳಲ್ಲಿ ಪತ್ತೆಯಾದ ಮತ್ತು ನವದೆಹಲಿಯ ರಾಷ್ಟ್ರೀಯ ಮ್ಯೂಸಿಯಂ ಹಾಗೂ ಕೋಲ್ಕತ್ತಾದ ಇಂಡಿಯನ್ ಮ್ಯೂಸಿಯಂಗಳಲ್ಲಿ ಸಂರಕ್ಷಿತವಾಗಿರುವ ನೈಜ ಪುರಾತತ್ವ ವಸ್ತುಗಳು ಹಾಗೂ ಪವಿತ್ರ ಅವಶೇಷಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಲಾಗಿದೆ.
1898ರಲ್ಲಿ ಪತ್ತೆಯಾದ ಪಿಪ್ರಹ್ವಾ ಅವಶೇಷಗಳು ಪ್ರಾಚೀನ ಬೌದ್ಧ ಧರ್ಮದ ಪುರಾತತ್ವ ಅಧ್ಯಯನದಲ್ಲಿ ಅತ್ಯಂತ ಪ್ರಮುಖ ಸ್ಥಾನವನ್ನು ಹೊಂದಿದ್ದು, ಭಗವಾನ್ ಗೌತಮ ಬುದ್ಧರೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ಅತ್ಯಂತ ಹಳೆಯ ಮತ್ತು ಐತಿಹಾಸಿಕ ಮಹತ್ವದ ಅವಶೇಷಗಳಲ್ಲೊಂದಾಗಿ ಪರಿಗಣಿಸಲಾಗುತ್ತಿದೆ.