ಬೆಂಗಳೂರು: ಅಲೇರಿ ಮೂಲಕ್ಷೇತ್ರದ ಜೀರ್ಣೋದ್ದಾರ ಮತ್ತು ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡುವಂತೆ ಮೂಡಬಿದಿರೆ ಶಾಸಕ ಉಮನಾಥ ಕೋಟ್ಯಾನ್ ಅವರು ವಿಧಾನಸಭೆಯಲ್ಲಿ ಇಂದು ಪ್ರಸ್ತಾಪಿಸಿದರು.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ಅಲೇರಿ ಮೂಲ ಸ್ಥಾನ ಕರ್ನಾಟಕದ ಮಿಜಾರ್ ಎಂಬಲ್ಲಿ ದೀರ್ಘಕಾಲ ನಿರ್ಜೀವ ಸ್ಥಿತಿಯಲ್ಲಿ ಉಳಿದಿತ್ತು. ಬಳಿಕ ಸಮಾಜದ ಮುಖಂಡರು ಒಗ್ಗೂಡಿ ರಾಜ್ಯದ ವಿವಿಧ ಭಾಗಗಳಲ್ಲಿ ಚದುರಿರುವ ಸಮುದಾಯಕ್ಕೆ ಒಂದು ಕೇಂದ್ರ ಸ್ಥಾನ ನಿರ್ಮಾಣ ಮಾಡುವ ಉದ್ದೇಶದಿಂದ ಅಲೇರಿಯಲ್ಲಿ ಜಾಗವನ್ನು ಗುರುತಿಸಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ ಎಂದು ತಿಳಿಸಿದರು.
ಸಮಾಜದವರು ಆದಿ ದ್ರಾವಿಡ ಎಂಬ ಗುರುತಿಗಿಂತ “ಸತ್ಯಸಾರಮಣಿ ಸಮಾಜ” ಎಂಬ ಹೆಸರಿನಲ್ಲಿ ಜಾತಿ ದಾಖಲೆಗಳಲ್ಲಿ ಗುರುತಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮೂಲಕ್ಷೇತ್ರ ನಿರ್ಮಾಣಕ್ಕೆ ಸುಮಾರು 10–15 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಪ್ರಸ್ತುತ ಜಾಗವನ್ನು ಪಡೆದುಕೊಳ್ಳಲು ಸಮಾಜದವರು ಒಟ್ಟಾಗಿ ಸುಮಾರು ಒಂದು ಕೋಟಿ ರೂಪಾಯಿ ಸಂಗ್ರಹಿಸಿ ಶಂಕುಸ್ಥಾಪನೆ ಮಾಡಿದ್ದಾರೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರು ಹಾಗೂ ವಿಧಾನಸಭಾ ಸದಸ್ಯರು ಭಾಗವಹಿಸಿದ್ದರು. ನಂತರ ಸಮಾಜದ ಪ್ರತಿನಿಧಿಗಳು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮೂಲಕ್ಷೇತ್ರ ಅಭಿವೃದ್ಧಿಗೆ ಹತ್ತು ಕೋಟಿ ರೂಪಾಯಿ ಅನುದಾನ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಮುಖ್ಯಮಂತ್ರಿಗಳು ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಉಮನಾಥ ಕೋಟ್ಯಾನ್ ಹೇಳಿದರು.
ರಾಜ್ಯದ ವಿವಿಧ ಭಾಗಗಳಲ್ಲಿ ಚದುರಿರುವ ಬ್ರಹ್ಮಮುನಿಯರ ಸತ್ಯಸಾರಮಣಿ ಸಮಾಜಕ್ಕೆ ಮೂಲ ಸ್ಥಾನ ನಿರ್ಮಾಣವಾಗುವುದು ಅಗತ್ಯವಾಗಿದೆ. ಈ ಸಮುದಾಯ ಆರ್ಥಿಕವಾಗಿ ಹಿಂದುಳಿದಿದ್ದು, ಸರ್ಕಾರ ಮಾನವೀಯತೆ ದೃಷ್ಟಿಯಿಂದ ಅನುದಾನ ನೀಡಿದರೆ ತಳಮಟ್ಟದ ಸಮುದಾಯವನ್ನು ಎತ್ತಿ ಹಿಡಿದಂತಾಗುತ್ತದೆ ಎಂದು ಅವರು ಹೇಳಿದರು.
ಅಲೇರಿ ಮೂಲಕ್ಷೇತ್ರದ ಜೀರ್ಣೋದ್ದಾರ ಮತ್ತು ಅಭಿವೃದ್ಧಿಗೆ ಸರ್ಕಾರದಿಂದ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಅವರು ಸರ್ಕಾರವನ್ನು ಆಗ್ರಹಿಸಿದರು.