ಧನು ಪೂಜೆಗೆ ಹೊರಟ ಯುವಕ ಸೈಕಲ್ಗೂ ತಲುಪದೇ ಶವವಾಗಿ ಪತ್ತೆ – ಪೊಲೀಸರಿಗೆ ದೊಡ್ಡ ಸವಾಲಾದ ತನಿಖೆ
ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯಲ್ಲಿ ನಡೆದ ಯುವಕ ಸುಮಂತ್ ನಾಪತ್ತೆ ಹಾಗೂ ಶವ ಪತ್ತೆ ಪ್ರಕರಣ ಇದೀಗ ಹಲವು ಹೊಸ ತಿರುವುಗಳನ್ನು ಪಡೆದುಕೊಂಡಿದ್ದು, ಪ್ರಕರಣದ ತನಿಖೆ ಮತ್ತಷ್ಟು ಕಠಿಣವಾಗುತ್ತಿದೆ. ಧನು ಪೂಜೆಗೆ ಹೊರಟಿದ್ದ ಸುಮಂತ್ ತನ್ನ ಸೈಕಲ್ವರೆಗೂ ತಲುಪದೇ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವುದು ಹಲವು ಪ್ರಶ್ನೆಗಳನ್ನು ಎಬ್ಬಿಸಿದೆ.
ಯುವಕ ನಾಪತ್ತೆಯಾದ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ವ್ಯಾಪಕವಾಗಿ ಹುಡುಕಾಟ ನಡೆಸಿದ್ದರು. ಈ ವೇಳೆ ಕೆರೆಯ ಸಮೀಪ ರಕ್ತದ ಕಲೆಗಳು ಪತ್ತೆಯಾಗಿದ್ದು, ಅದೇ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ಓಡಾಡಿರುವುದರಿಂದ ಮಹತ್ವದ ಸಾಕ್ಷಿಗಳು ನಾಶವಾಗಿರುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.
ಘಟನಾ ಸ್ಥಳದ ಇನ್ನೊಂದು ಭಾಗ ತೋಟದ ದಾರಿಯಾಗಿದ್ದು, ಬೆಳಗಿನ ಜಾವ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಆದರೆ ಘಟನೆ ನಡೆದ ಕ್ಷಣವನ್ನು ಯಾರೂ ಕಣ್ಣಾರೆ ಕಂಡಿಲ್ಲ. ಅಲ್ಲದೆ, ಆ ಪ್ರದೇಶದಲ್ಲಿ ಯಾವುದೇ ಸಿಸಿ ಕ್ಯಾಮರಗಳಿಲ್ಲದಿರುವುದು ತನಿಖೆಗೆ ದೊಡ್ಡ ಅಡ್ಡಿಯಾಗಿದೆ.
ಇನ್ನು ತೋಟದ ದಾರಿ ಮುಗಿದ ನಂತರ ಇರುವ ಮನೆಯೊಂದರಲ್ಲಿ ಸಿಸಿ ಕ್ಯಾಮರ ಇದ್ದರೂ, ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಇದರಿಂದ ಆರೋಪಿಯನ್ನು ಗುರುತಿಸಲು ಬೇಕಾದ ದೃಶ್ಯ ಸಾಕ್ಷಿ ಪೊಲೀಸರಿಗೆ ಸಿಗದಂತಾಗಿದೆ.
ಪ್ರಕರಣದಲ್ಲಿ ಇದುವರೆಗೂ ಲಭ್ಯವಾಗಿರುವ ಪ್ರಮುಖ ಸುಳಿವುಗಳನ್ನು ಗಮನಿಸಿದರೆ, ಹಂತಕ ಸ್ಥಳೀಯ ವ್ಯಕ್ತಿಯಾಗಿರಬೇಕು ಹಾಗೂ ಘಟನೆ ನಡೆದ ಸ್ಥಳದಿಂದ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ವ್ಯಕ್ತಿಯೇ ಆಗಿರಬಹುದು ಎಂಬ ಅನುಮಾನ ಇದೀಗ ಬಲವಾಗುತ್ತಿದೆ. ಈ ಹಿನ್ನೆಲೆ ಪೊಲೀಸರು ಕೆಲವು ವ್ಯಕ್ತಿಗಳ ಮೇಲೆ ಅನುಮಾನವಿಟ್ಟು ವಿಚಾರಣೆ ನಡೆಸುತ್ತಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಾಕ್ಷ್ಯ ಸಂಗ್ರಹವೇ ಈ ಪ್ರಕರಣದ ಮುಖ್ಯ ಕೀಲಿಕೈ ಆಗಿದ್ದು, ಬಲವಾದ ಪುರಾವೆಗಳಿಲ್ಲದೆ ಹಂತಕ ಕಾನೂನು ಕೈಗೆ ಸಿಗದೆ ತಪ್ಪಿಸಿಕೊಳ್ಳುವ ಭೀತಿ ಕೂಡ ಇದೆ. ಆದ್ದರಿಂದ ಮುಂದಿನ ಎರಡು ದಿನಗಳಲ್ಲಿ ಪೊಲೀಸರು ಆರೋಪಿಯನ್ನು ಪತ್ತೆಹಚ್ಚುವಾರೇ? ಅಥವಾ ತನಿಖೆ ಮತ್ತಷ್ಟು ಸಂಕೀರ್ಣವಾಗುತ್ತದೆಯೇ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.