ಬೆಂಗಳೂರು: ಭಾರತಿ ಟೀಚರ್ 7th ಸ್ಟ್ಯಾಂಡರ್ಡ್ ಸಿನಿಮಾ ವಿಮರ್ಶೆ. ಶಿಕ್ಷಣ, ಶಿಕ್ಷಕರ ತ್ಯಾಗ ಮತ್ತು ಸಮಾಜಮುಖಿ ಸಂದೇಶ ಹೇಳುವ ಹೃದಯಸ್ಪರ್ಶಿ ಕನ್ನಡ ಚಿತ್ರ.ಇತ್ತೀಚಿನ ಕನ್ನಡ ಚಿತ್ರರಂಗದಲ್ಲಿ ಸಮಾಜದ ನೆಲದ ಸತ್ಯಗಳನ್ನು ಸ್ಪರ್ಶಿಸುವ ಚಿತ್ರಗಳು ವಿರಳ. ಆ ಸಾಲಿನಲ್ಲಿ ಗಮನ ಸೆಳೆಯುವ ಪ್ರಯತ್ನ ಮಾಡಿರುವ ಚಿತ್ರವೇ ಭಾರತಿ ಟೀಚರ್ : 7th ಸ್ಟ್ಯಾಂಡರ್ಡ್. ಶಿಕ್ಷಣದ ಮಹತ್ವ, ಶಿಕ್ಷಕರ ತ್ಯಾಗ ಮತ್ತು ಮಕ್ಕಳ ಭವಿಷ್ಯದ ಕುರಿತಾದ ಜವಾಬ್ದಾರಿಯನ್ನು ಮನಮುಟ್ಟುವ ರೀತಿಯಲ್ಲಿ ಈ ಚಿತ್ರ ತೆರೆದಿಡುತ್ತದೆ.
ಚಿತ್ರವು ಭಾರತಿ ಎಂಬ ಸರ್ಕಾರಿ ಶಾಲೆಯ ಶಿಕ್ಷಕಿಯ ಬದುಕಿನ ಸುತ್ತ ತಿರುಗುತ್ತದೆ. ಗ್ರಾಮೀಣ ಹಿನ್ನೆಲೆಯ ಶಾಲೆಯಲ್ಲಿ ಮಕ್ಕಳನ್ನು ಓದಿಗೆ ಆಕರ್ಷಿಸುವುದು, ಪೋಷಕರ ನಿರ್ಲಕ್ಷ್ಯ, ವ್ಯವಸ್ಥೆಯ ಅಡಚಣೆಗಳು – ಇವೆಲ್ಲವನ್ನು ಎದುರಿಸುತ್ತಾ ಭಾರತಿ ತನ್ನ ವಿದ್ಯಾರ್ಥಿಗಳ ಬದುಕನ್ನು ರೂಪಿಸಲು ಹೋರಾಡುತ್ತಾಳೆ. ಶಿಕ್ಷಣವೆಂದರೆ ಕೇವಲ ಪಠ್ಯವಲ್ಲ, ಅದು ಜೀವನದ ದಾರಿ ಎಂಬ ಸಂದೇಶವನ್ನು ಚಿತ್ರ ಸ್ಪಷ್ಟವಾಗಿ ಸಾರುತ್ತದೆ.
ನಾಯಕಿ ಯಶಿಕಾ ಚೈರಾ ಭಾರತಿ ಪಾತ್ರದಲ್ಲಿ ಅತ್ಯಂತ ಸಹಜ ಅಭಿನಯ ನೀಡಿದ್ದಾರೆ. ಅವರ ಅಭಿನಯದಲ್ಲಿ ಅತಿರೇಕವಿಲ್ಲ, ಆದರೆ ಆಂತರಿಕ ನೋವು, ಹಠ ಮತ್ತು ಮಾನವೀಯತೆ ಸ್ಪಷ್ಟವಾಗಿ ಗೋಚರಿಸುತ್ತದೆ. ಹಿರಿಯ ನಟ ಸಿಹಿ-ಕಹಿ ಚಂದ್ರು ಅವರ ಪಾತ್ರ ಚಿತ್ರಕ್ಕೆ ಭಾರ ನೀಡುತ್ತದೆ. ಮಕ್ಕಳ ಪಾತ್ರಗಳಲ್ಲಿ ಅಭಿನಯಿಸಿರುವ ಕಲಾವಿದರು ಕಥೆಗೆ ಜೀವ ತುಂಬಿದ್ದಾರೆ.
ನಿರ್ದೇಶಕ ಎಂ.ಎಲ್. ಪ್ರಸನ್ನ ಅವರ ನಿರೂಪಣೆ ವಾಸ್ತವಿಕವಾಗಿದೆ. ಉಪದೇಶದ ಸ್ವರ ತಪ್ಪಿಸಿ, ಕಥೆಯೊಳಗೇ ಸಂದೇಶವನ್ನು ನಯವಾಗಿ ಹೇರಿರುವುದು ಚಿತ್ರದ ಪ್ಲಸ್ ಪಾಯಿಂಟ್. ಕೆಲವೆಡೆ ಕಥನ ನಿಧಾನಗತಿಯಾಗಿದರೂ, ಚಿತ್ರದ ಉದ್ದೇಶವನ್ನು ಗಮನಿಸಿದರೆ ಅದು ಸಹಜವೆನಿಸುತ್ತದೆ.
ಸಿನೆಮಾಟೋಗ್ರಫಿ ಗ್ರಾಮೀಣ ವಾತಾವರಣವನ್ನು ನೈಜವಾಗಿ ಹಿಡಿದಿಟ್ಟಿದೆ. ಹಿನ್ನೆಲೆ ಸಂಗೀತ ಭಾವನಾತ್ಮಕ ದೃಶ್ಯಗಳಿಗೆ ಸೂಕ್ತ ಬೆಂಬಲ ನೀಡುತ್ತದೆ. “ಬಾ ಬಾ ಕನ್ನಡಿಗ” ಸೇರಿದಂತೆ ಕೆಲವು ಹಾಡುಗಳು ಗಮನ ಸೆಳೆಯುತ್ತವೆ.
ಒಟ್ಟಾರೆ, ಭಾರತಿ ಟೀಚರ್ ಮನರಂಜನೆಯ ಜೊತೆಗೆ ಚಿಂತನೆಗೆ ದಾರಿ ಮಾಡಿಕೊಡುವ ಚಿತ್ರ. ಇದು ಕಮರ್ಷಿಯಲ್ ಅಂಶಗಳಿಗಿಂತ ವಿಷಯಕ್ಕೆ ಹೆಚ್ಚಿನ ಒತ್ತು ನೀಡುವ ಸಿನಿಮಾ. ಶಿಕ್ಷಕರು, ಪೋಷಕರು ಹಾಗೂ ಅರ್ಥಪೂರ್ಣ ಚಿತ್ರಗಳನ್ನು ಇಷ್ಟಪಡುವ ಪ್ರೇಕ್ಷಕರಿಗೆ ಇದು ನೋಡಲೇಬೇಕಾದ ಚಿತ್ರ ಅನ್ನೊದೇ ಫಿಲ್ಮೀಮಾತು