, “ನಮ್ಮ ಪಾವಗಡ” ಎಂದು ಎದೆತಟ್ಟಿ ಹೇಳುವ ಜನರ ಬದುಕಿನಲ್ಲಿ ಮೂಲಸೌಕರ್ಯಗಳ ಕೊರತೆ ಗಂಭೀರವಾಗಿದೆ.
ಪಾವಗಡ: ಭಾರತೀಯ ಪರಿವರ್ತನ ಸಂಘ (BPS) ಸಂವಿಧಾನ ದಿನಾಚರಣೆ – ‘ಸದೃಢ ಪಾವಗಡಕ್ಕಾಗಿ ನಮ್ಮ ಸಂಕಲ್ಪ’
ಪಾವಗಡದಲ್ಲಿ ಭಾರತೀಯ ಪರಿವರ್ತನ ಸಂಘ (ಬಿಪಿಎಸ್) ವತಿಯಿಂದ “ಸಂವಿಧಾನ ಆಶಯ ಮತ್ತು ನಮ್ಮ ಜವಾಬ್ದಾರಿ – ಸದೃಢ ಪಾವಗಡಕ್ಕಾಗಿ ನಮ್ಮ ಸಂಕಲ್ಪ” ಎಂಬ ಘೋಷವಾಕ್ಯದೊಂದಿಗೆ ಸಂವಿಧಾನ ದಿನಾಚರಣೆ ಕಾರ್ಯಕ್ರಮವು ಇಂದು ತುಮಕೂರು ರಸ್ತೆಯ ಅಂಬೇಡ್ಕರ್ ಭವನದಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಬಿಪಿಎಸ್ನ ರಾಜ್ಯಾಧ್ಯಕ್ಷರಾದ ಹರಿರಾಮ್ ಎ. ಅವರು ಉದ್ಘಾಟಿಸಿದರು. ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಅವರು, “ನಮ್ಮ ಪಾವಗಡ” ಎಂದು ಎದೆತಟ್ಟಿ ಹೇಳುವ ಜನರ ಬದುಕಿನಲ್ಲಿ ಮೂಲಸೌಕರ್ಯಗಳ ಕೊರತೆ ಗಂಭೀರವಾಗಿದೆ. ಕೈತುಂಬ ಸಂಬಳ ಸಿಗುವ ಉದ್ಯೋಗಗಳಿಲ್ಲ, ಸರಿಯಾದ ಆಸ್ಪತ್ರೆಗಳಿಲ್ಲ; ಇದ್ದರೂ ವೈದ್ಯರಿಲ್ಲ. ಕುಡಿಯುವ ನೀರು, ಉತ್ತಮ ರಸ್ತೆಗಳು, ಕೃಷಿಗೆ ಅಗತ್ಯವಾದ ಭೂಮಿಯ ಕೊರತೆ ಇದೆ. ಇಷ್ಟೆಲ್ಲ ಸಮಸ್ಯೆಗಳ ನಡುವೆಯೂ ನಾವು ‘ನಮ್ಮ ಪಾವಗಡ’ ಎಂದು ಹೇಳುತ್ತೇವೆ. ಸಂವಿಧಾನದ ಆಶಯದಂತೆ ಜನರು ತಮ್ಮ ಸಮಸ್ಯೆಗಳನ್ನು ಪ್ರಶ್ನಿಸಿ ಪರಿಹಾರ ಪಡೆಯಲು ಬಿಪಿಎಸ್ ನಿಮ್ಮೊಂದಿಗೆ ಕೈಜೋಡಿಸುತ್ತದೆ. ಇದಕ್ಕಾಗಿ ನಿಮ್ಮ ಸಹಕಾರ ಅಗತ್ಯ” ಎಂದು ಕರೆ ನೀಡಿದರು.
ಜಿಲ್ಲಾಧ್ಯಕ್ಷರಾದ ಹೆಚ್. ಕೆಂಚರಾಯ ಅವರು ಪ್ರಸ್ತಾವಿಕ ಭಾಷಣದಲ್ಲಿ ಕಾರ್ಯಕ್ರಮದ ಉದ್ದೇಶ ಮತ್ತು ಸಂಘದ ಚಟುವಟಿಕೆಗಳ ಕುರಿತು ವಿವರಿಸಿದರು.
ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ನವೀನ್ ಕಿಲಾರ್ಲಹಳ್ಳಿ, ತಿಪ್ಪೇಸ್ವಾಮಿ ಬಿ. (ನಿವೃತ್ತ ಹಿರಿಯ ಮೋಟಾರ್ ವಾಹನ ನಿರೀಕ್ಷಕರು), ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಿತೀಶ್ ಬಾಬು ಹೆಚ್, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಗಂಗಾಧರ ಬಿ.ಎನ್ (ಎಂಬಿಬಿಎಸ್ ವಿದ್ಯಾರ್ಥಿ), ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಬ್ಲಡ್ ಶಶಿಕಲಾ, ಹೋರಾಟಗಾರ್ತಿ ಮಮತಾ ಆರ್, ಕಾಡುಗೊಲ್ಲ ಸಮುದಾಯದ ಹೋಬಳಿ ಘಟಕದ ಅಧ್ಯಕ್ಷರಾದ ಕೆ.ಎಸ್. ಸಣ್ಣ ಚಿತ್ತಪ್ಪ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಪಿಎಸ್ನ ತಾಲೂಕು ಅಧ್ಯಕ್ಷರಾದ ಎಚ್. ಡಿ. ಈರಣ್ಣ, ಉಪಾಧ್ಯಕ್ಷರಾದ ನಾರಾಯಣ್, ಕಾನೂನು ಸಲಹೆಗಾರರಾದ ವಕೀಲ ರಘುನಂದನ್, ಕನ್ನಡ ಚಲನಚಿತ್ರ ನಿರ್ದೇಶಕರಾದ ಎಸ್. ಕರ್ಣನ್, ಬಿಪಿಎಸ್ನ ವಿವಿಧ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಂವಿಧಾನದ ಆಶಯಗಳನ್ನು ನೆಲಮಟ್ಟದಲ್ಲಿ ಜಾರಿಗೆ ತರುವ ಸಂಕಲ್ಪದೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು.