ಮಂಗಳೂರು, ಮಾರ್ಚ್ 21, 2026: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸದಸ್ಯರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ದೀಪ ಬೆಳಗಿಸುವ ಮೂಲಕ ಹಾಗೂ ಎಂಟು ಮಾಡ್ಯುಲರ್ ಕೈಗಾರಿಕಾ ಹೈಡ್ರೋಜನ್ ಉತ್ಪಾದನಾ ಸ್ಕಿಡ್ಗಳಿಗೆ ಚಾಲನೆ ನೀಡುವ ಮೂಲಕ ಮಹತ್ವದ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಕಾರ್ಯಕ್ರಮವು ಭಾರತದಲ್ಲಿ ಸ್ಥಳೀಯವಾಗಿ ವಿನ್ಯಾಸಗೊಳಿಸಿ ತಯಾರಿಸಲಾದ ಎಲೆಕ್ಟ್ರೋಲೈಜರ್ ತಂತ್ರಜ್ಞಾನದ ವಾಣಿಜ್ಯ ನಿಯೋಜನೆಗೆ ಮಹತ್ವದ ಮೈಲಿಗಲ್ಲು ಎನ್ನಲಾಗುತ್ತಿದೆ. ದೇಶೀಯ ತಂತ್ರಜ್ಞಾನ ಬಳಸಿ ಹೈಡ್ರೋಜನ್ ಉತ್ಪಾದನೆಗೆ ಮುಂದಾಗಿರುವ ಈ ಯೋಜನೆ, ಶುದ್ಧ ಇಂಧನ ಕ್ಷೇತ್ರದಲ್ಲಿ ಹೊಸ ದಿಕ್ಕನ್ನು ಸೂಚಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು, “ಭಾರತದಲ್ಲಿ ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿ ಮತ್ತು ಹಸಿರು ಇಂಧನ ಉತ್ಪಾದನೆಗೆ ಇದು ಮಹತ್ವದ ಹೆಜ್ಜೆ. ಹೈಡ್ರೋಜನ್ ಶಕ್ತಿ ಭವಿಷ್ಯದ ಶಕ್ತಿಯ ಮೂಲವಾಗಿದ್ದು, ಇಂತಹ ಯೋಜನೆಗಳು ದೇಶದ ಕೈಗಾರಿಕಾ ಬೆಳವಣಿಗೆಗೆ ಸಹಕಾರಿಯಾಗಲಿವೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೈಗಾರಿಕಾ ವಲಯದ ಪ್ರತಿನಿಧಿಗಳು, ತಾಂತ್ರಿಕ ತಜ್ಞರು ಮತ್ತು ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಈ ಯೋಜನೆ ಮೂಲಕ ಸ್ವಚ್ಛ ಶಕ್ತಿ ಉತ್ಪಾದನೆಗೆ ಉತ್ತೇಜನ ಸಿಗುವುದರ ಜೊತೆಗೆ ಉದ್ಯೋಗಾವಕಾಶಗಳೂ ಹೆಚ್ಚಲಿವೆ ಎಂದು ತಿಳಿಸಲಾಗಿದೆ.