ಪ್ರತಿವರ್ಷದ ಬೇಸಿಗೆಯ ಬಿರುಬಿಸಿಲ ಮಾಸಗಳಾದ ಮಾರ್ಚ್, ಏಪ್ರಿಲ್, ಮೇ ಈ ಮೂರು ತಿಂಗಳುಗಳು ಈ ದೇಶದ ಬಹುಜನರಿಗೆ ಬಹಳ ಮಹತ್ವಪೂರ್ಣವಾದವು.
ಬೆಂಕಿ ಉಗುಳುವ ಈ ಮಾಸಗಳಲ್ಲಿ ಜನುಮ ತಳೆದ ನಮ್ಮ ಮಹಾಪೂರ್ವಿಕರು ಬಹುಜನರ ಬಾಳನ್ನು ತಂಪಾಗಿಸಿದರು.! ಮೇ ತಿಂಗಳಲ್ಲಿ ಗೌತಮ ಬುದ್ಧರು ಮತ್ತು ಬಸವಣ್ಣನವರು, ಏಪ್ರಿಲ್ ತಿಂಗಳಲ್ಲಿ ಬಾಬಾಸಾಹೇಬ್ ಅಂಬೇಡ್ಕರರು ಮತ್ತು ಮಹಾತ್ಮ ಜ್ಯೋತಿ ಬಾಫುಲೆಯವರು, ಮಾರ್ಚ್ ತಿಂಗಳಲ್ಲಿ ಸಾಮ್ರಾಟ್ ಅಶೋಕ ಮತ್ತು ದಾದಾಸಾಹೇಬ್ ಕಾನ್ಷಿರಾಂಜಿಯವರು.
ಹೌದು. ಇಂದು ಮಾರ್ಚ್ 15, ಆಧುನಿಕ ಭಾರತದ ಬಹುಜನ ಚಳವಳಿಯ ನೇತಾರರೂ ಬಾಬಾಸಾಹೇಬರ ತತ್ವ ಸಿದ್ದಾಂತವನ್ನು ಗೆಲ್ಲಿಸಿ ತೋರಿಸಿದ ಮಹಾಜ್ಞಾನಿ ವಿಜ್ಞಾನಿಗಳೂ ಹಾಗು ಓಟಿನ ಹಕ್ಕು ಬಂದಾಗಿನಿಂದಲೂ ಅದರ ಮಹತ್ವ ಅರಿಯದೆ ಮನುವಾದಿ ಪಕ್ಷಗಳಿಗೆ ಕೇವಲ ಓಟ್ ಬ್ಯಾಂಕಾಗಿ ‘ಓಟು ಇರುವುದೇ ಚುನಾವಣೆಗಳು ಬಂದಾಗ ಹಣಹೆಂಡಕ್ಕೆ ಮಾರಾಟ ಮಾಡಲಿಕ್ಕೆ’ ಎಂದುಕೊಂಡಿದ್ದ ಶೋಷಿತ ಬಹುಜನ ಸಮಾಜವನ್ನು ಎಚ್ಚರಿಸಿ ಅವರೆದೆಯೊಳಗೆ ಬುದ್ದ ಅಶೋಕ ಫುಲೆ ಶಾಹು ಪೆರಿಯಾರ್ ನಾರಾಯಣಗುರು ನಾಲ್ವಡಿ ಮುಂತಾದ ನಮ್ಮ ಪೂರ್ವಿಕ ಮಹಾಪುರುಷರ ವಿಚಾರಗಳನ್ನು ಬಿತ್ತಿ ಸ್ವಾಭಿಮಾನವನ್ನು ಬೆಳೆದು ಬಾಬಾಸಾಹೇಬರನ್ನು ಮೊದಲ ಬಾರಿಗೆ ಓದಿ ಅರ್ಥೈಸಿಕೊಂಡು ಅವರ ನಾಡಿ ಮಿಡಿತವನ್ನು ಸರಿಯಾಗಿ ಅರ್ಥಮಾಡಿಕೊಂಡು ಅವರ ಗುರಿ ಕನಸುಗಳ ಜಾಡುಹಿಡಿದು ಮನುವಾದಿ ಪಕ್ಷಗಳ ಮರ್ಮವನ್ನು ಬಯಲು ಮಾಡಿ “ಬೇಡುವ ಸಮಾಜವನ್ನು ನೀಡುವ ಸಮಾಜವಾಗಿಸಿದ” ದಾದಾಸಾಹೇಬ್ ಕಾನ್ಷಿರಾಂಜಿಯವರು ಹುಟ್ಟಿದ ದಿನ. ಇಂದು ಬಹುಜನರ ಸ್ವಾಭಿಮಾನ ದಿನ ರಾಜಕೀಯ ಸಾಕ್ಷರ ದಿನ..!
“ನಾವು ನಿತ್ಯ ಮಾತನಾಡುವ ಎಲ್ಲಾ ರೀತಿಯ ಸಾಮಾಜಿಕ ಆರ್ಥಿಕ ರಾಜಕೀಯ ಧಾರ್ಮಿಕ ಸಮಸ್ಯೆಗಳಿಗೂ ಶಾಶ್ವತ ಪರಿಹಾರವು ಬುದ್ಧಧಮ್ಮದಲ್ಲಿದೆ. ಬುದ್ಧಧಮ್ಮದ ಸಾರ ಅಂಬೇಡ್ಕರ್ವಾದದಲ್ಲಿದೆ. ಅಂಬೇಡ್ಕರ್ವಾದವು ಕಾನ್ಷಿರಾಂಜಿ ಮಾರ್ಗದಲ್ಲಿದೆ. ಕಾನ್ಷಿರಾಂಜಿ ಮಾರ್ಗವು ಬಹುಜನ ಸಮಾಜ ಪಕ್ಷವನ್ನು ಕಟ್ಟಿ ಬೆಳೆಸಿ ಅಧಿಕಾರಕ್ಕೆ ತರುವಲ್ಲಿದೆ..”
ಆದರೆ, ಕೆಲವರಿಗೆ ಬುದ್ಧರ ಮೂರ್ತಿ ಫೋಟೋ ಬೇಕು, ಆದರೆ ಬುದ್ಧಿಸಂ ಹಾಗು 22 ಭೀಮಪ್ರತಿಜ್ಞೆ ಪಾಲನೆ ಬೇಡ..! ಕೆಲವರಿಗೆ ಬಾಬಾಸಾಹೇಬ್ ಅಂಬೇಡ್ಕರರ ಹೆಸರು ಫೋಟೋ ಪ್ರತಿಮೆ ಎಲ್ಲವೂ ಬೇಕು; ಆದರೆ ಅವರ ತತ್ವ ಸಿದ್ಧಾಂತದ ಧಾರ್ಮಿಕ ಮತ್ತು ರಾಜಕೀಯ ಮಾರ್ಗ ಬೇಡ..! ಹಾಗೆಯೇ ಕೆಲವರಿಗೆ ಕಾನ್ಷಿರಾಂಜಿಯವರ ಹೆಸರು ಫೋಟೋ ಬೇಕು ಆದರೆ ಅವರು ಕಟ್ಟಿದ ಬಹುಜನ ಸಮಾಜ ಪಕ್ಷ ಬೇಡ..! ಇದು ಹಿಪಾಕ್ರಸಿ.
ಬಾಬಾಸಾಹೇಬರು ಬದುಕಿದ್ದಾಗ ನಮ್ಮ ಬಹುಜನರು ಅವರಿಂದಲೇ ಓಟು ಸೀಟು ಹಕ್ಕು ಎಲ್ಲವನ್ನೂ ಪಡೆದು ಅವರ ಜೊತೆ ನಿಲ್ಲದೆ ಸಮಾಜದ ಹಿತವನ್ನು ಮರೆತು ಸ್ವಾರ್ಥಕ್ಕೆ ಸ್ವಹಿತಕ್ಕೆ ಅಂಬೇಡ್ಕರ್ ವಿರೋಧಿ ಕಾಂಗ್ರೆಸ್ ಪಕ್ಷ ಸೇರಿ ಬಾಬಾಸಾಹೇಬರನ್ನು ಒಂಟಿ ಮಾಡಿದರು..! ಬಾಬಾಸಾಹೇಬರು ಮರಣ ಹೊಂದಿದ ಮೇಲೆ ಅವರನ್ನು ಕಾಂಗ್ರೆಸ್ಸೂ ಒಳಗೊಂಡಂತೆ ಎಲ್ಲಾ ಪಕ್ಷಗಳವರೂ ಚಮಚಾಗಳೂ ಈಗ ಹಾಡಿ ಹೊಗಳುತ್ತಾರೆ ಹೊತ್ತು ಮೆರೆಯುತ್ತಿದ್ದಾರೆ..! ಹಾಗೆಯೇ ದಾದಾಸಾಹೇಬ್ ಕಾನ್ಷಿರಾಮರು ಬದುಕಿದ್ದಾಗ ಸೈಕಲ್ ತುಳಿದು ಪಕ್ಷ ಕಟ್ಟವಾಗ ದಾದಾಸಾಹೇಬರನ್ನು ಬೆಂಬಲಿಸದೆ ಸೋಲಿಸಿ ಟೀಕಿಸಿ ಹಿಯಾಳಿಸಿ ದ್ವೇಷಿಸಿ ಮಾತಾಡುತ್ತಿದ್ದವರೆಲ್ಲಾ ಈಗ ಅವರ ಮರಣಾನಂತರ ಕಾನ್ಷಿರಾಂಜಿಯರ ಫೋಟೋ ಹಾಕಿಕೊಡು ಮಾತಾಡುತ್ತಾರೆ ಬರೆಯುತ್ತಾರೆ ಹೊಗಳುತ್ತಿದ್ದಾರೆ ಎಲ್ಲಾ ಪಕ್ಷ ಸಂಘದವರೂ ಹುಟ್ಟಿಗೊಂದು ಶುಭಾಶಯ ಸಾವಿಗೊಂದು ಸ್ಮರಣೆ ಕೋರುತ್ತಾರೆ. ಓಟಿಗಾಗಿ ನಾಟಕವಾಡುತ್ತಾರೆ..! ಈಗ ಬೆಹೆನ್ಜಿ ಮಾಯಾವತಿಯವರು ವಿರೋಧಿಗಳಿಂದಲೂ ಉಕ್ಕಿನ ಮಹಿಳೆ ಎನಿಸಿಕೊಂಡವರು, ಬಹುಜನ ಚಳವಳಿಗಾಗಿ ತನ್ನ ವಯಕ್ತಿಯ ಬದುಕನ್ನೇ ತ್ಯಾಗ ಮಾಡಿದವರು, ಎಂದಿಗೂ ಬುದ್ಧ ಫುಲೆ ಬಾಬಾಸಾಹೇಬರ ಸಿದ್ಧಾಂತಕ್ಕೆ ರಾಜಿಯಾಗದವರು ಉತ್ತರ ಪ್ರದೇಶಕ್ಕೆ ಮುಖ್ಯಮಂತ್ರಿಯಾಗಿ ಮೊದಲ ದಲಿತ ಮಹಿಳೆಯಾಗಿ ಜಗತ್ತೇ ಮೆಚ್ಚುವಂತೆ ಆಡಳಿತ ಮಾಡಿದವರು ಇಂದಿಗೂ ತನ್ನ ಎಪ್ಪತ್ತನೇ ವಯಸ್ಸಿಗೂ ಬಹುಜನ ಚಳವಳಿಯು ಸರ್ವಜನರ ಹಿತಕ್ಕಾಗಿ ಎಂದು ಬಹುಜನ ಸಮಾಜವನ್ನು ಜೋಡಿಸಲು ಹಗಲಿರುಳು ಶ್ರಮಿಸುತ್ತಿರುವವರು ಕಣ್ಣೆದುರೇ ಬದುಕಿದ್ದಾರೆ ಆದರೆ…. ನಮ್ಮ ಜನವೋ ಅವರನ್ನೂ ಅನುಮಾನಿಸುತ್ತಾ ಟೀಕಿಸುತ್ತಾ ಪರಪಕ್ಷಗಳ ನಾಯಕರನ್ನು ಹೊಗಳುತ್ತಾ ಅನ್ಯಪಕ್ಷಗಳ ಬಾಲಂಗೋಚಿಗಳಾಗಿದ್ದಾರೆ..!
ಬದುಕಿದ್ದಾಗ ಬೆಂಬಲಿಸದೆ ಜೊತೆ ಸೇರದೆ ಅವರು ಕಟ್ಟಿದ ಪಕ್ಷವನ್ನು ಸೇರಿ ಕಟ್ಟದೆ ಸತ್ತಾಗ ಹೊಗಳುವುದು ಶುಭಾಶಯ ಕೋರುವುದು ಅವರ ತತ್ವದ ವಿರುದ್ಧವಾಗಿ ಬದುಕುತ್ತಾ ಅವರು ವಿರೋಧಿಸಿದ ಪಕ್ಷಗಳನ್ನು ಸೇರಿ ಬೆಂಬಲಿಸುತ್ತಾ ಅವರನ್ನು ಸ್ಮರಿಸುವುದು ಇವೆಲ್ಲಾ ಅವರಿಗೆ ಮಾಡುವ ಅವಮಾನ ಮತ್ತು ದ್ರೋಹ..!
ಇರಲಿ, ಈ ಎಲ್ಲಾ ಹಿಪಾಕ್ರಸಿ ಅಜ್ಞಾನ ಸ್ವಾರ್ಥ ಸುಳ್ಳು ವದಂತಿ ಅನುಮಾನ ಅವಮಾನ ಆರೋಪ ನಿರಾಸೆ ಹತಾಷೆ ಸವಾಲುಗಳನ್ನೆಲ್ಲಾ ಮೀರಿ ಇಂದಲ್ಲ ನಾಳೆ ಬಹುಜನ ಸಮಾಜ ಪಕ್ಷವು ಆಳುವ ಪಕ್ಷವಾಗಲಿದೆ. ಬಹುಜನ ಸಮಾಜ ಆಳುವ ಸಮಾಜವಾಗಲಿದೆ. ಬಾಬಾಸಾಹೇಬರ ಸಂವಿಧಾನವನ್ನು ಮುಗಿಸಿಬಿಡಲು ನಿಂತಿರುವ ಮನುವಾದಿ ತತ್ವದ ಕಾಂಗ್ರೆಸ್ ಬಿಜೆಪಿಗೆ ವಿರುದ್ಧವಾಗಿ ನಿಂತು ಎದುರಿಸಿ ಗೆದ್ದು ಸಂವಿಧಾನ ರಕ್ಷಿಸಿ ಜಾರಿಗೆ ತರುವ ತಾಕತ್ತಿರುವ ಅಂಬೇಡ್ಕರ್ವಾದಿ ಬಹುಜನ ತತ್ವದ ಏಕೈಕ ಪಕ್ಷ ಅದು ದಾದಾಸಾಹೇಬರ ಬಿಎಸ್ಪಿ ಮಾತ್ರ..! ನಮ್ಮದು ದೇಶದ ಮೂರನೇಯ ಅತಿದೊಡ್ಡ ರಾಷ್ಟ್ರೀಯ ಪಕ್ಷ. ಭರವಸೆಯಿಂದ ದುಡಿಯುತ್ತಲೇ ಕಟ್ಟುತ್ತಲೇ ಹೋಗೋಣ. ಪರಿವರ್ತಿಸಲು ಪ್ರಯತ್ನಿಸುತ್ತಲೇ ಇರೋಣ. ಖಂಡಿತ ಎಲ್ಲವೂ ಸಾಧ್ಯವಾಗುತ್ತದೆ. ಜೈಭೀಮ್ ನಮೋ ಬುದ್ಧಾಯ ಜೈಕಾನ್ಷಿರಾಂಜಿ
ಸರ್ವರಿಗೂ ಬಹುಜನ ಸಮಾಜ ಪಕ್ಷದ ನಿರ್ಮಾತೃ ದಾದಾಸಾಹೇಬ್ ಕಾನ್ಷಿರಾಂಜಿಯವರ ಜಯಂತಿಯ ಶುಭಾಶಯಗಳು…
ಲೇಖನ: ಡಾ ಹಾ. ರ. ಮಹಿಶ