ಮಂಗಳೂರು: ಧರ್ಮ ಹಾಗೂ ಮಾನವೀಯ ಮೌಲ್ಯಗಳನ್ನು ಸಾರುವ ಕಥಾಹಂದರ ಹೊಂದಿರುವ ‘ಧರ್ಮ ಚಾವಡಿ’ ಎಂಬ ಕನ್ನಡ ಚಲನಚಿತ್ರ ಇದೇ ಮಾರ್ಚ್ 6ರಂದು ಟಾಕೀಸ್ ಆಪ್ OTT ವೇದಿಕೆಯಲ್ಲಿ ಬಿಡುಗಡೆಯಾಗಲಿದೆ.
ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಿತ್ರತಂಡದವರು, ಸಮಾಜದಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ಧ್ವನಿ ಎತ್ತುವ ಹಾಗೂ ಧರ್ಮದ ನಿಜವಾದ ಅರ್ಥವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಈ ಚಿತ್ರವನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು. ಧರ್ಮವು ಕೇವಲ ಆಚರಣೆ ಅಥವಾ ನಂಬಿಕೆಗೆ ಮಾತ್ರ ಸೀಮಿತವಲ್ಲ; ಅದು ಮಾನವೀಯತೆ, ನ್ಯಾಯ ಹಾಗೂ ಸಮಾನತೆಯ ಮೌಲ್ಯಗಳನ್ನು ಪ್ರತಿಬಿಂಬಿಸುವುದಾಗಿದೆ ಎಂಬ ಸಂದೇಶವನ್ನು ಚಿತ್ರದಲ್ಲಿ ನೀಡಲಾಗಿದೆ ಎಂದು ಅವರು ಹೇಳಿದರು.
ಚಿತ್ರವನ್ನು ನಿತಿನ್ ರೈ ಕುಕ್ಕುವಳ್ಳಿ ನಿರ್ದೇಶಿಸಿದ್ದು, ಸಮಾಜಮುಖಿ ಕಥೆಯನ್ನು ಆಧರಿಸಿ ಚಿತ್ರವನ್ನು ರೂಪಿಸಲಾಗಿದೆ. ಚಿತ್ರದಲ್ಲಿ ರಮೇಶ್ ಕುಕ್ಕುವಳ್ಳಿ, ನೇಹಾ ಕೊಟ್ಯಾನ್, ಸುರೇಶ್ ರೈ, ಚೇತನ್ವರ್ ರೈ, ಮಾಣಿ, ರೂಪಾ ಶೆಟ್ಟಿ, ಸುಂದರ್ ಮಂದಾರ, ದೀಪಕ್ ರೈ ಪಾಣಾಜೆ, ದಯಾನಂದ ರೈ ಹಾಗೂ ರಕ್ಷ್ಮಣ್ ಮಾಡೂರು ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.
ಚಿತ್ರಕ್ಕೆ ಪ್ರಸಾದ್ ಕೆ. ಶೆಟ್ಟಿ ಸಂಗೀತ ನೀಡಿದ್ದು, OTT ವೇದಿಕೆಯ ಮೂಲಕ ಈ ಚಿತ್ರವನ್ನು ವಿಶ್ವದಾದ್ಯಂತ ಪ್ರೇಕ್ಷಕರಿಗೆ ತಲುಪಿಸುವ ಉದ್ದೇಶ ಹೊಂದಿರುವುದಾಗಿ ಚಿತ್ರತಂಡ ತಿಳಿಸಿದೆ.