ಬಂಟ್ವಾಳ: ಬಂಟ್ವಾಳ ಕ್ಷೇತ್ರದ ಮಾಜಿ ಸಚಿವ ರಮಾನಾಥ ರೈ ಅವರು ಕರಾವಳಿ ಭಾಗದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ ನಾಯಕರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬಂಟ್ವಾಳದ ಮೂಡುರು–ಪಡೂರು ಜೊಡುಕರೆ ಕಂಬಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಮಾನಾಥ್ ರೈ ಅವರನ್ನು ಜನತೆ ಸೋಲಿಸಿದ್ದು ಅನ್ಯಾಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಕರಾವಳಿ ಭಾಗದ ಅಭಿವೃದ್ಧಿಗೆ ರಮಾನಾಥ್ ರೈ ಅವರು ಸುಮಾರು ₹5000 ಕೋಟಿಗೂ ಹೆಚ್ಚು ಅನುದಾನ ತಂದು ಹಲವು ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಿದ್ದರು. ಅವರ ಅವಧಿಯನ್ನು“ಸುವರ್ಣಯುಗ” ಎಂದೇ ಕರೆಯಲಾಗುತ್ತದೆ ಎಂದು ಸಿಎಂ ಹೇಳಿದರು.
ರಮಾನಾಥ್ ರೈ ಅವರು ಬಂಟ್ವಾಳ ಕ್ಷೇತ್ರಕ್ಕೆ ಅಪಾರ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ರಸ್ತೆ, ಮೂಲಸೌಕರ್ಯ, ಶಿಕ್ಷಣ ಮತ್ತು ಇತರ ಕ್ಷೇತ್ರಗಳಲ್ಲಿ ಹಲವು ಯೋಜನೆಗಳನ್ನು ತಂದಿದ್ದಾರೆ. ಇಂತಹ ನಾಯಕನಿಗೆ ಜನತೆ ನೀಡಿದ ಸೋಲು ನ್ಯಾಯಸಮ್ಮತವಲ್ಲ,” ಎಂದು ಸಿದ್ದರಾಮಯ್ಯ ಹೇಳಿದರು.
ಇದೇ ವೇಳೆ ಅವರು ಮುಂದಿನ 2028ರ ಚುನಾವಣೆಯಲ್ಲಿ ರಮಾನಾಥ್ ರೈ ಮತ್ತೆ ಅಭ್ಯರ್ಥಿಯಾಗಲಿದ್ದಾರೆ ಎಂಬ ಸೂಚನೆಯನ್ನೂ ನೀಡಿದರು. “ಜನರ ಬೆಂಬಲ ಇದ್ದರೆ ಅವರು ಮತ್ತೆ ರಾಜಕೀಯವಾಗಿ ಮುನ್ನಡೆಯುತ್ತಾರೆ,” ಎಂದು ಹೇಳಿದರು.
ಬಂಟ್ವಾಳದ ಸಂಪ್ರದಾಯಿಕ ಕ್ರೀಡೆಯಾದ ಕಂಬಳ ಕರಾವಳಿ ಸಂಸ್ಕೃತಿಯ ಹೆಮ್ಮೆಯ ಸಂಕೇತವಾಗಿದ್ದು, ರಾಜ್ಯ ಸರ್ಕಾರ ಕಂಬಳಕ್ಕೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಸಿಎಂ ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರು, ಜನಪ್ರತಿನಿಧಿಗಳು ಮತ್ತು ಸಾವಿರಾರು ಕಂಬಳಾಭಿಮಾನಿಗಳು ಉಪಸ್ಥಿತರಿದ್ದರು.