ಬೆಳ್ತಂಗಡಿ: ತಾಲ್ಲೂಕಿನ ಗೇರುಕಟ್ಟೆ ಗ್ರಾಮದ ಬರಮೇಲು ಪ್ರದೇಶದಲ್ಲಿ ನಾಪತ್ತೆಯಾಗಿದ್ದ 9ನೇ ತರಗತಿ ವಿದ್ಯಾರ್ಥಿ ಸುಮಂತ್ (15) ಎಂಬ ಬಾಲಕನ ಮೃತದೇಹ ಪತ್ತೆಯಾದ ಘಟನೆ ಗ್ರಾಮದಲ್ಲಿ ಶೋಕ ಹಾಗೂ ಆತಂಕ ಮೂಡಿಸಿದೆ. ಕಳಿಯ ಗ್ರಾಮದ ಸಂಚೋಳ್ಳಿ ನಿವಾಸಿ ಸುಬ್ರಹ್ಮಣ್ಯ ನಾಯರ್ ಪುತ್ರನಾದ ಸುಮಂತ್, ಧನು ಪೂಜೆಯ ಹಿನ್ನೆಲೆಯಲ್ಲಿ ನಾಳ ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ಬುಧವಾರ ಬೆಳಿಗ್ಗೆ ಮನೆಯಿಂದ ಹೊರಟಿದ್ದನು. ಆದರೆ ಆತ ದೇವಸ್ಥಾನಕ್ಕೂ ತಲುಪದೆ ಮನೆಗೂ ಮರಳದೇ ನಾಪತ್ತೆಯಾಗಿದ್ದನು.
ಇದನ್ನು ಓದಿ : ಬೀದರ್ : ಕುತ್ತಿಗೆಗೆ ಗಾಳಿಪಟ ದಾರ ಸಿಲುಕಿ ವ್ಯಕ್ತಿ ಸಾವು!
ಕುಟುಂಬಸ್ಥರು ಹಾಗೂ ಸ್ಥಳೀಯರು ಹುಡುಕಾಟ ನಡೆಸಿದ ವೇಳೆ, ಬಾಲಕನ ಮನೆ ಸಮೀಪದ ತೋಟದ ಕೆರೆಯ ಬಳಿ ರಕ್ತದ ಗುರುತುಗಳು ಪತ್ತೆಯಾಗಿದ್ದವು. ವಿಷಯ ತಿಳಿದ ತಕ್ಷಣ ಬೆಳ್ತಂಗಡಿ ಪೊಲೀಸರು, ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯರ ಸಹಕಾರದಿಂದ ವ್ಯಾಪಕ ಶೋಧ ಕಾರ್ಯ ಆರಂಭಿಸಲಾಯಿತು. ತಡರಾತ್ರಿ ವರೆಗೆ ಮುಂದುವರಿದ ಶೋಧ ಕಾರ್ಯದ ಫಲವಾಗಿ, ಮನೆಯ ಸಮೀಪದ ಕೆರೆಯಲ್ಲಿ ಸುಮಂತ್ನ ಮೃತದೇಹ ಪತ್ತೆಯಾಗಿದೆ.
ಮೃತದೇಹ ಪತ್ತೆಯಾದ ನಂತರ ಪ್ರಕರಣದ ತನಿಖೆಯನ್ನು ಪೊಲೀಸರು ಇನ್ನಷ್ಟು ಚುರುಕುಗೊಳಿಸಿದ್ದಾರೆ. ನವೆಂಬರ್ 14ರ ರಾತ್ರಿ 8.30ರಿಂದ 11.30ರವರೆಗೆ FSL (ವಿಜ್ಞಾನ ಪ್ರಯೋಗಾಲಯ) ತಂಡ ಮತ್ತು ಸುಮಾರು 50ಕ್ಕೂ ಅಧಿಕ ಪೊಲೀಸರ ತಂಡದಿಂದ, ರಕ್ತದ ಕಲೆಗಳು ಕಂಡುಬಂದ ಸ್ಥಳಗಳಲ್ಲಿ ‘ಲೂಮಿನಾಲ್ ಟೆಸ್ಟ್’ ಮೂಲಕ ರಾಸಾಯನಿಕ ಪರೀಕ್ಷೆ ನಡೆಸಲಾಗಿದೆ. ಅಲ್ಲದೆ ತೋಟದ ಕೆರೆಯ ಸುತ್ತಮುತ್ತ ಸಾಕ್ಷ್ಯ ಸಂಗ್ರಹಕ್ಕಾಗಿ ಬೆಳಗ್ಗೆ 7 ಗಂಟೆಯಿಂದ ನಿರಂತರ ಕೂಲಿಂಗ್ ಕಾರ್ಯಾಚರಣೆ ಮುಂದುವರಿದಿದೆ.
ಇದನ್ನು ಓದಿ: ಪ್ರತಿಭಾ ಕಾರಂಜಿಯಲ್ಲಿ ಜಾನಪದ ಗೀತೆ: ರಾಜ್ಯ ಮಟ್ಟಕ್ಕೆ ಭಾಗ್ಯಲಕ್ಷ್ಮೀ ಆಯ್ಕೆ
ಜನವರಿ 15ರ ಬೆಳಿಗ್ಗೆ ಕೆರೆಯ ನೀರನ್ನು ಪಂಪ್ಗಳ ಸಹಾಯದಿಂದ ಹಿಂಗಿಸುವ ಕಾರ್ಯವೂ ಕೈಗೊಳ್ಳಲಾಗಿದೆ. ಈಗಾಗಲೇ ಸುಮಂತ್ನ ಮೃತದೇಹವನ್ನು ಮನೆಗೆ ತಲುಪಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಂಗಳೂರಿನ ವೈದ್ಯರು ನಡೆಸಿದ ಶವಪರೀಕ್ಷೆಯಲ್ಲಿ ಬಾಲಕನ ತಲೆಗೆ ಮೂರು ಬಲವಾದ ಗಾಯಗಳ ಗುರುತುಗಳು ಕಂಡುಬಂದಿದ್ದು, ಶ್ವಾಸಕೋಶದಲ್ಲಿ ನೀರಿನ ಅಂಶವೂ ಪತ್ತೆಯಾಗಿದೆ. ಇದರಿಂದ ಸಾವಿನ ಬಗ್ಗೆ ಹಲವು ಸಂಶಯಗಳು ಹುಟ್ಟಿಕೊಂಡಿವೆ.
ಈ ಪ್ರಕರಣದ ತನಿಖೆಯನ್ನು ಬೆಳ್ತಂಗಡಿ ಉಪ ವಿಭಾಗಾಧಿಕಾರಿ ರೋಹಿಣಿ ಸಿ.ಕೆ. ಅವರ ನೇತೃತ್ವದಲ್ಲಿ, ಬೆಳ್ತಂಗಡಿ ಪೊಲೀಸ್ ಇನ್ಸ್ಪೆಕ್ಟರ್ ಸುಬ್ಬಪುರ್ ಮಠ ಅವರ ಮಾರ್ಗದರ್ಶನದಲ್ಲಿ ವೇಣೂರು, ಬೆಳ್ತಂಗಡಿ, ಪುಂಜಾಲಕಟ್ಟೆ ಮತ್ತು ಧರ್ಮಸ್ಥಳ ಪೊಲೀಸ್ ಠಾಣೆಗಳ ತಂಡಗಳು ವಿವಿಧ ಆಯಾಮಗಳಲ್ಲಿ ಮುಂದುವರಿಸುತ್ತಿವೆ.