Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ಜಾತಿ ಸಂಸ್ಕೃತಿಯೇ? ಮೀಸಲಾತಿ ಅನ್ಯಾಯವೇ?

ಜಾತಿ ಸಂಸ್ಕೃತಿಯೇ? ಮೀಸಲಾತಿ ಅನ್ಯಾಯವೇ?

ಜಾತಿ ಪದ್ಧತಿ ಮತ್ತು ಜಾತೀಯತೆ ಎಂಬುದು ಭಾರತದ ಸಾಮಾಜಿಕ ಇತಿಹಾಸದಲ್ಲಿ ಆಳವಾಗಿ ಬೇರೂರಿರುವ ಸತ್ಯ. ಒಂದು ಕಾಲದಲ್ಲಿ ಭಾರತದಲ್ಲಿ ಮನುಸ್ಮೃತಿ ಎಂಬ ವ್ಯವಸ್ಥೆ ಪ್ರಾಬಲ್ಯದಲ್ಲಿದ್ದಾಗ, ಅದು “ಕಾನೂನು” ಎಂಬ ಅರಿವೇ ಇಲ್ಲದ ಸಾಮಾನ್ಯ ಜನರು ಅದರ ಮಧ್ಯೆಯೇ ತಮ್ಮ ಬದುಕನ್ನು ಸಾಗಿಸಿದ್ದರು. ಮನುಸ್ಮೃತಿ ಎಂದರೇನು, ಅದು ಯಾರಿಗಾಗಿ, ಯಾರ ವಿರುದ್ಧ ಎಂಬ ಜ್ಞಾನವನ್ನು ಪಡೆಯುವ ಅವಕಾಶವೇ ಬಹುಜನರಿಗೆ ಇರಲಿಲ್ಲ. ಕಾರಣ, ಅದೇ ವ್ಯವಸ್ಥೆ ಅವರಿಗೆ ಶಿಕ್ಷಣದ ಹಕ್ಕನ್ನು ಕಿತ್ತುಕೊಂಡಿತ್ತು.

ಮನುಸ್ಮೃತಿ ಕೇವಲ ಧಾರ್ಮಿಕ ಗ್ರಂಥವಲ್ಲ; ಅದು ಸಮಾಜವನ್ನು ಶ್ರೇಣೀಕರಿಸಿ, ಜನರ ಕಸುಬನ್ನು ಜಾತಿಯಾಗಿ ಪರಿವರ್ತಿಸಿ, ಒಂದಾಗಿ ಬದುಕುತ್ತಿದ್ದ ಭಾರತೀಯರನ್ನು ಶಾಶ್ವತವಾಗಿ ವಿಭಜಿಸಿದ ವ್ಯವಸ್ಥೆಯಾಗಿತ್ತು. ಜನ್ಮದ ಆಧಾರದ ಮೇಲೆ ಮಾನವನ ಮೌಲ್ಯ ನಿರ್ಧಾರವಾಗುತ್ತಿತ್ತು. ಇದು ಸಹಜ ಸಾಮಾಜಿಕ ವ್ಯವಸ್ಥೆಯಲ್ಲ, ಒಂದು ನಿರ್ದಿಷ್ಟ ವರ್ಗದ ಅಧಿಕಾರ ಮತ್ತು ಪ್ರಭುತ್ವವನ್ನು ಕಾಪಾಡುವ ವ್ಯವಸ್ಥೆಯಾಗಿತ್ತು ಎಂಬುದು ಐತಿಹಾಸಿಕ ಸತ್ಯ.

ಈ ಜಾತಿ ಪದ್ಧತಿಯಿಂದ ಲಾಭ ಪಡೆದವರು ಯಾರು ಎಂಬುದನ್ನು ಇಲ್ಲಿ ವಿವರಿಸುವ ಅಗತ್ಯವೇ ಇಲ್ಲ. ಇತಿಹಾಸವೇ ಅದಕ್ಕೆ ಸಾಕ್ಷಿ. ಆದರೆ ಅದೇ ಜಾತಿ ಪದ್ಧತಿಯನ್ನು ಒಂದು ಅಸ್ತ್ರವಾಗಿ ಬಳಸಿಕೊಂಡು, ಡಾ. ಬಿ.ಆರ್. ಅಂಬೇಡ್ಕರ್ ಅವರು ಜಾತಿ ಆಧಾರಿತ ಮೀಸಲಾತಿಯನ್ನು ಜಾರಿಗೆ ತಂದು ಸಮಾಜದಲ್ಲಿ ಮಹತ್ವದ ಸುಧಾರಣೆಗೆ ದಾರಿ ಮಾಡಿಕೊಟ್ಟರು. ಅಂಬೇಡ್ಕರ್ ಅವರು ಜಾತಿಯನ್ನು ಸೃಷ್ಟಿಸಲಿಲ್ಲ; ಜಾತಿಯಿಂದ ನೊಂದವರಿಗೆ ನ್ಯಾಯ ಒದಗಿಸುವ ಸಾಧನವಾಗಿ ಜಾತಿಯನ್ನು ಬಳಸಿದರು.

ಇದನ್ನೂ ಓದಿ: ಉದ್ಯಾನವನದ ಜಾಗದ ಮೇಲೆ ಸರ್ಕಾರದ ಹೊಸ ಕಣ್ಣು? ಶೇ.5ರಷ್ಟು ಬಳಕೆಗೆ ಅನುಮತಿ

ಒಂದು ಕಾಲದಲ್ಲಿ ಜಾತಿ ಪದ್ಧತಿ ಒಂದು ವರ್ಗಕ್ಕೆ ಪೂರಕವಾಗಿದ್ದಾಗ, ಅನುಕೂಲಕರವಾಗಿದ್ದಾಗ, ಅದನ್ನೇ ಉಳಿಸಿಕೊಂಡು, ಮೆರೆಸಿಕೊಂಡು, ಪೋಷಿಸಿಕೊಂಡು ಬಂದ ಅದೇ ವರ್ಗ ಇಂದು ಜಾತಿ ಆಧಾರಿತ ಮೀಸಲಾತಿಯನ್ನು ವಿರೋಧಿಸುತ್ತಿರುವುದು ದೊಡ್ಡ ವೈರುಧ್ಯ. ಕಾರಣ ಏನು? ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನವು ಜಾತಿ ಪದ್ಧತಿಯನ್ನು ನಿರ್ಮಿಸಿದವರ ಬೇರುಗಳನ್ನೇ ಪ್ರಶ್ನಿಸಿತು. ಜನ್ಮಸಿದ್ಧ ಅಧಿಕಾರವನ್ನು ಹಕ್ಕು ಎಂದು ಒಪ್ಪಲಿಲ್ಲ. ಅದಕ್ಕಾಗಿಯೇ ಅದು ಕೆಲವರಿಗೆ “ಅಸಹನೀಯ” ಆಯಿತು.

ಇಂದಿನ ಮಾಧ್ಯಮ ಚರ್ಚೆಗಳಲ್ಲಿ ಜಾತಿ ಎಂಬ ಪದವನ್ನು ಉಚ್ಚರಿಸಿದರೆ ಸಾಕು, ಎಲ್ಲರಿಗೂ ಬೆಂಕಿ ಹಚ್ಚಿದಂತೆ ವರ್ತನೆ ಮಾಡಲಾಗುತ್ತದೆ. ಜಾತಿಯನ್ನು ಬೆಳೆಸಬೇಕು ಎಂಬುದೂ ತಪ್ಪೇ, ಅದರಲ್ಲಿ ಸಂಶಯವಿಲ್ಲ. ಆದರೆ ಜಾತಿಯನ್ನು ಹಿಂದುಳಿದ ಸಮುದಾಯಗಳ ಸಾಮಾಜಿಕ–ಆರ್ಥಿಕ ಏಳಿಗೆಗೆ ಬಳಸುವುದು ತಪ್ಪಲ್ಲ; ಅದು ಅಗತ್ಯ. ಇದೇ ಸಂದರ್ಭದಲ್ಲಿ, ಜಾತಿಯನ್ನು ಪ್ರತಿಪಾದಿಸಿಕೊಂಡು ಬಂದವರೇ “ಜಾತಿ ಸರಿಯಲ್ಲ” ಎಂದು ಹೇಳುವುದು ನೈತಿಕವಾಗಿ ತಪ್ಪು.

ಇನ್ನೊಂದು ಗಂಭೀರ ಸಮಸ್ಯೆ ಎಂದರೆ, ಜಾತಿ ಹೆಸರಿನಲ್ಲಿ ಸಂಘಟನೆಗಳನ್ನು ಕಟ್ಟಿಕೊಂಡು, ಆ ಸಮುದಾಯದ ಜನರ ನಿಜವಾದ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಯ ಕಡೆ ಗಮನ ಕೊಡದೆ, ಅವರಿಂದ ವಂತಿಗೆ, ದೇಣಿಗೆ ಸಂಗ್ರಹಿಸಿ ಸ್ವಂತ ಬೆಳವಣಿಗೆಗಾಗಿ ಜಾತಿ ಹೆಸರನ್ನು ಬಳಸಿಕೊಳ್ಳುವುದು. ಇದು ಜಾತಿ ವಿರುದ್ಧದ ಹೋರಾಟವಲ್ಲ; ಜಾತಿಯ ದುರುಪಯೋಗ.

ಮೀಸಲಾತಿ ಎಂದರೆ ಶಾಶ್ವತ ರಾಜಕೀಯ ಅಸ್ತ್ರವಲ್ಲ. ಅದು ತಾತ್ಕಾಲಿಕ ಸಾಮಾಜಿಕ ಚಿಕಿತ್ಸೆ. ಸಮಾಜ ಸಮಾನತೆ ಸಾಧಿಸುವವರೆಗೂ ಅವಶ್ಯಕವಾದ ಒಂದು ಸಂವಿಧಾನಾತ್ಮಕ ಉಪಕರಣ. ಗುರಿ ಜಾತಿಯನ್ನು ಉಳಿಸುವುದಲ್ಲ; ಜಾತಿಯ ಅಗತ್ಯವನ್ನೇ ಕೊನೆಗಾಣಿಸುವುದು.

ಇದನ್ನೂ ಓದಿ: ಕರ್ನಾಟಕದಲ್ಲಿ ಹಸಿರು ವಿದ್ಯುತ್ ಇಂಧನ ಮತ್ತು ಭೌಗೋಳಿಕ ರಾಜಕೀಯದ ಅಡ್ಡಿ

ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನ ಜಾತಿಯನ್ನು ರಕ್ಷಿಸಲು ಬರೆಯಲ್ಪಟ್ಟಿಲ್ಲ. ಅದು ಮಾನವ ಘನತೆಯನ್ನು ರಕ್ಷಿಸಲು, ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತ್ವವನ್ನು ಸ್ಥಾಪಿಸಲು ರೂಪುಗೊಂಡ ಮಹಾ ದಸ್ತಾವೇಜು. ಅದನ್ನು ಅರ್ಥಮಾಡಿಕೊಂಡರೆ, ಜಾತಿಯ ಕುರಿತು ನಡೆಯುವ ಇಂದಿನ ಗದ್ದಲಗಳ ನಿಜವಾದ ಮುಖ ನಮಗೆ ಸ್ಪಷ್ಟವಾಗುತ್ತದೆ.

😀
0
😍
0
😢
0
😡
0
👍
1
👎
0

Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading