Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ನಿಲ್ಲಿಸಿದ ಜನಪರ ಯೋಜನೆಗಳಿಗೆ ಜೀವ ಕೊಡುವರೇ ಮಹದೇವಪ್ಪ?ಐರಾವತ–ಸಮೃದ್ಧಿ ಯೋಜನೆಗಳನ್ನು ನಿಲ್ಲಿಸಿದ್ದಾದರೂ ಯಾಕೆ?

ನಿಲ್ಲಿಸಿದ ಜನಪರ ಯೋಜನೆಗಳಿಗೆ ಜೀವ ಕೊಡುವರೇ ಮಹದೇವಪ್ಪ?ಐರಾವತ–ಸಮೃದ್ಧಿ ಯೋಜನೆಗಳನ್ನು ನಿಲ್ಲಿಸಿದ್ದಾದರೂ ಯಾಕೆ?

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಆರ್ಥಿಕ ಸಬಲೀಕರಣಕ್ಕಾಗಿ ರೂಪಿಸಲಾದ ಐರಾವತ ಹಾಗೂ ಸಮೃದ್ಧಿ ಯೋಜನೆಗಳು ಕೇವಲ ಸರ್ಕಾರಿ ಯೋಜನೆಗಳಷ್ಟೇ ಅಲ್ಲ — ಅವು ಸಾವಿರಾರು ಕುಟುಂಬಗಳ ಬದುಕಿಗೆ ದಾರಿ ತೋರಿದ ಆಶಾಕಿರಣಗಳಾಗಿದ್ದವು. ಸ್ವಯಂ ಉದ್ಯೋಗ, ಸ್ವಾವಲಂಬನೆ ಮತ್ತು ಗೌರವಯುತ ಜೀವನವನ್ನು ನೀಡಿದ ಯೋಜನೆಗಳೆಂಬುದು ನಿರ್ವಿವಾದ ಸತ್ಯ. ಆದರೆ ಇಂದು, ಈ ಯಶಸ್ವಿ ಯೋಜನೆಗಳು ಯಾವ ಕಾರಣಕ್ಕೆ ಮೌನವಾಗಿವೆ? ಎಂಬ ಪ್ರಶ್ನೆ ಸಮಾಜದ ಮುಂದೆ ಗಂಭೀರವಾಗಿ ನಿಂತಿದೆ.

ಪ್ರಿಯಾಂಕ ಖರ್ಗೆಯವರ ದೂರದೃಷ್ಟಿ

ಐರಾವತ ಮತ್ತು ಸಮೃದ್ಧಿ ಯೋಜನೆಗಳು ಜಾರಿಗೆ ಬಂದಾಗ, ಅದರ ಹಿಂದೆ ಇದ್ದದ್ದು ಸ್ಪಷ್ಟವಾದ ಸಾಮಾಜಿಕ ದೃಷ್ಟಿಕೋನ. ಆ ಕಾಲದಲ್ಲಿ ಸಮಾಜ ಕಲ್ಯಾಣ ಇಲಾಖೆಯನ್ನು ಮುನ್ನಡೆಸಿದ ಪ್ರಿಯಾಂಕ ಖರ್ಗೆಯವರು, ಪರಿಶಿಷ್ಟ ಸಮುದಾಯಗಳು ಶಾಶ್ವತವಾಗಿ ಸರ್ಕಾರಿ ಸಹಾಯದ ಮೇಲೆ ಅವಲಂಬಿತರಾಗದೆ, ಸ್ವಂತ ಶ್ರಮದಿಂದ ಬದುಕು ಕಟ್ಟಿಕೊಳ್ಳಬೇಕು ಎಂಬ ದೃಢ ನಿಲುವನ್ನು ಹೊಂದಿದ್ದರು. ಅದರ ಫಲವಾಗಿಯೇ ಈ ಜನಪರ ಯೋಜನೆಗಳು ಜಾರಿಗೆ ಬಂದವು.

ಇದನ್ನೂ ಓದಿ: ಕರ್ನಾಟಕದಲ್ಲಿ ಹಸಿರು ವಿದ್ಯುತ್ ಇಂಧನ ಮತ್ತು ಭೌಗೋಳಿಕ ರಾಜಕೀಯದ ಅಡ್ಡಿ

ಐರಾವತ ಯೋಜನೆ: ನಗರ ಹಾಗೂ ಅರೆನಗರ ಪ್ರದೇಶದ ಪರಿಶಿಷ್ಟ ಜಾತಿಯ ಯುವಕರಿಗೆ ಟ್ಯಾಕ್ಸಿ ಖರೀದಿಸಲು 5 ಲಕ್ಷ ರೂಪಾಯಿವರೆಗೆ ಸಬ್ಸಿಡಿ ನೀಡುವ ಮೂಲಕ, ಓಲಾ–ಉಬರ್‌ನಂತಹ ವೇದಿಕೆಗಳೊಂದಿಗೆ ಸಂಪರ್ಕ ಕಲ್ಪಿಸಲಾಯಿತು. ಇದು ಕೇವಲ ಉದ್ಯೋಗ ನೀಡಿದ ಯೋಜನೆಯಲ್ಲ — ಆತ್ಮಗೌರವದ ಬದುಕು ಕಟ್ಟಿಕೊಳ್ಳುವ ಅವಕಾಶ ನೀಡಿದ ಮಹತ್ವದ ಯೋಜನೆಯಾಗಿತ್ತು.

ಸಮೃದ್ಧಿ ಯೋಜನೆ: ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಪರಿಶಿಷ್ಟ ಜಾತಿಯ ನಿರುದ್ಯೋಗಿ ಯುವಕ-ಯುವತಿಯರನ್ನು ಉದ್ಯಮಶೀಲರನ್ನಾಗಿಸಲು ಸಮೃದ್ಧಿ ಯೋಜನೆ ಪ್ರಮುಖ ಪಾತ್ರ ವಹಿಸಿತು. ಈ ಯೋಜನೆಯಡಿ ಉದ್ಯಮಶೀಲತಾ ತರಬೇತಿ, ವೃತ್ತಿ ಕೌಶಲ್ಯ ಅಭಿವೃದ್ಧಿ ಮತ್ತು ಮಾರುಕಟ್ಟೆ ಸಂಪರ್ಕದೊಂದಿಗೆ ಘಟಕಗಳನ್ನು ಸ್ಥಾಪಿಸಲು  ಸಹಾಯ ನೀಡಲಾಗುತ್ತಿತ್ತು. ಇದರ ಫಲವಾಗಿ ಅನೇಕ ಯುವಕರು ಸಾಲದ ಬಲೆಗೆ ಸಿಲುಕದೇ, ಸ್ವಂತ ಉದ್ಯಮ ಆರಂಭಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾದರು.

ಹಾಗಾದರೆ ಇಂತಹ ಯಶಸ್ವಿ ಯೋಜನೆಗಳನ್ನು ನಿಲ್ಲಿಸಿದ್ದಾದರೂ ಯಾಕೆ?

ಇದನ್ನೂ ಓದಿ: ಉದ್ಯಾನವನದ ಜಾಗದ ಮೇಲೆ ಸರ್ಕಾರದ ಹೊಸ ಕಣ್ಣು? ಶೇ.5ರಷ್ಟು ಬಳಕೆಗೆ ಅನುಮತಿ

ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಆರಂಭವಾದ ಈ ಯೋಜನೆಗಳಿಂದ ಲಾಭ ಪಡೆದ ಫಲಾನುಭವಿಗಳಲ್ಲಿ, ಇಂದಿಗೂ ಪ್ರಿಯಾಂಕ ಖರ್ಗೆಯವರ ಬಗ್ಗೆ ಕೃತಜ್ಞತೆಯ ಭಾವ ಇದೆ. ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಪತನವಾದ ಮೇಲೆ ಈ ಎರಡು ಯೋಜನೆಗಳು ಮೌನವಾದವು. ಆದರೆ ಇಂದು, ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿ ಮಹಾದೇವಪ್ಪನವರು ಇಂತಹ ಜನಪರ ಯೋಜನೆಗಳ ಬಗ್ಗೆ ಯಾಕೆ ನಿರ್ಲಕ್ಷ್ಯ ವಹಿಸಿದ್ದಾರೆ?.

ಮಹಾದೇವಪ್ಪನವರ ರಾಜಕೀಯ ಅನುಭವ, ಸಾಮಾಜಿಕ ಹೋರಾಟಗಳ ಹಿನ್ನೆಲೆ ಮತ್ತು ದಲಿತ ಸಮುದಾಯದ ಮೇಲಿನ ಬದ್ಧತೆ ಎಲ್ಲರಿಗೂ ತಿಳಿದಿರುವ ವಿಷಯಗಳೇ. ಹಾಗಿದ್ದರೂ ಐರಾವತ ಮತ್ತು ಸಮೃದ್ಧಿ ಯೋಜನೆಗಳನ್ನು ಮುಂದುವರಿಸಲು ಯಾಕೆ ಪ್ರಯತ್ನವಾಗಲಿಲ್ಲ?ಇದು ಕೇವಲ ರಾಜಕೀಯ ಪ್ರಶ್ನೆಯಲ್ಲ — ಬದುಕಿನ ಪ್ರಶ್ನೆ. ಈ ಯೋಜನೆಗಳು ನಿಂತ ಪರಿಣಾಮವಾಗಿ, ನಿರುದ್ಯೋಗ ಹೆಚ್ಚಾಗಿದೆ, ಯುವಕರು ಮತ್ತೆ ಅಸಂಘಟಿತ ಕಾರ್ಮಿಕರಾಗಿ ದುಡಿಯಬೇಕಾದ ಸ್ಥಿತಿ ನಿರ್ಮಾಣವಾಗಿದೆ, ಸ್ವಾವಲಂಬನೆಗೆ ಸಿಕ್ಕಿದ್ದ ಅವಕಾಶಗಳು ಮುಚ್ಚಿಕೊಂಡಿವೆ

ಇದನ್ನೂ ಓದಿ: JCI ಬಂಟ್ವಾಳದಿಂದ ಶ್ರೀನಿವಾಸ್ ಅರ್ಬಿಗುಡ್ಡೆ ಅವರಿಗೆ ‘ಸಾಧನಶ್ರೀ’ ಪುರಸ್ಕಾರ

ಇನ್ನಾದರೂ ಸಮಾಜ ಕಲ್ಯಾಣ ಇಲಾಖೆ ಸಚಿವರು ಈ ವಿಷಯದತ್ತ ಗಂಭೀರವಾಗಿ ಗಮನ ಹರಿಸಿ, ಹೊಸ ಕಾಲಕ್ಕೆ ತಕ್ಕಂತೆ ಯೋಜನೆಗಳನ್ನು ಸುಧಾರಿಸಿ, ಫಲಾನುಭವಿಗಳೊಂದಿಗೆ ನೇರ ಸಂವಾದ ನಡೆಸಿ, ಪರಿಶಿಷ್ಟ ಸಮುದಾಯಗಳಲ್ಲಿ ಮತ್ತೆ ಆಶಾಕಿರಣ ಮೂಡಿಸಿದ್ದ ಐರಾವತ ಮತ್ತು ಸಮೃದ್ಧಿ ಯೋಜನೆಗಳನ್ನು ಪುನರಾರಂಭಿಸಬೇಕು ಎಂಬುದು ಜನರ ಒತ್ತಾಯವಾಗಿದೆ.

Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading