ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ‘ಶೆಟ್ಟಿ ಗ್ಯಾಂಗ್’ ಎಂದೇ ಫೇಮಸ್ ಆಗಿರುವ ತಂಡದ ಬಗ್ಗೆ ಇತ್ತೀಚೆಗೆ ಒಂದೇ ಪ್ರಶ್ನೆ ಗಾಳಿಯಲ್ಲಿ ತೇಲಾಡುತ್ತಿದೆ – ಎಲ್ಲವೂ ಸರಿಯೇ ಇದೆಯಾ? ಒಟ್ಟಾಗಿ ಬೆಳೆದ ಗೆಳೆತನದಲ್ಲಿ ಅಜ್ಞಾತ ಅಂತರವೊಂದು ಮೂಡಿದೆಯೇ? ಇದಕ್ಕೆ ಸ್ಪಷ್ಟ ಉತ್ತರ ಯಾರಿಂದಲೂ ಸಿಕ್ಕಿಲ್ಲ. ಆದರೆ ನಡೆದ ಕೆಲವು ಘಟನೆಗಳು ಅನುಮಾನಗಳಿಗೆ ಆಹಾರ ನೀಡುತ್ತಿರುವುದು ಸಿನಿ ಗಾಸಿಪ್ ಗೆ ಪ್ರೇರಣೆ ಎನ್ನಬಹುದು.
‘ಕಾಂತಾರ’ ಸಿನಿಮಾ ದೇಶಾದ್ಯಂತ ಸಂಚಲನ ಮೂಡಿಸಿದಾಗ, ಅದರ ಹಿಂದೆ ನಿಂತಿದ್ದ ತಂಡದ ಒಗ್ಗಟ್ಟು ಎಲ್ಲರ ಗಮನ ಸೆಳೆದಿತ್ತು. ವರಾಹರೂಪಂ ಹಾಡಿನ ಕೊರಿಯೋಗ್ರಫಿ ರಾಜ್ ಬಿ ಶೆಟ್ಟಿ ಅವರದ್ದು ಎಂಬುದನ್ನು ನಿರ್ದೇಶಕ ರಿಷಬ್ ಶೆಟ್ಟಿ ಸಂಭ್ರಮದಿಂದಲೇ ಹೇಳಿಕೊಂಡಿದ್ದರು. ಆದರೆ ‘ಕಾಂತಾರ ಚಾಪ್ಟರ್ 01’ ಬಿಡುಗಡೆಯಾದ ಬಳಿಕ ಚಿತ್ರಕ್ಕೆ ಸಂಬಂಧಿಸಿದ ಸಂಭ್ರಮಗಳಲ್ಲಿ ರಾಜ್ ಬಿ ಶೆಟ್ಟಿ ಕಾಣಿಸಿಕೊಳ್ಳದಿರುವುದು ಹಲವರಿಗೆ ಪ್ರಶ್ನೆಯಾಗಿ ಕಾಡಿತು.
ಈ ನಡುವೆ ಮೊದಲ ‘ಕಾಂತಾರ’ ಯಶಸ್ಸಿನ ವೇಳೆ ರಕ್ಷಿತ್ ಶೆಟ್ಟಿ ತೋರಿಸಿದ್ದ ಸ್ನೇಹ, ಥಿಯೇಟರ್ನಲ್ಲೇ ರಿಷಬ್ ಅವರನ್ನು ಓಡೋಡಿ ಹೋಗಿ ಅಪ್ಪಿಕೊಂಡ ಕ್ಷಣ – ಗೆಳೆತನದ ನಿಜವಾದ ಉದಾಹರಣೆಯಂತಿತ್ತು. ಆದರೆ ‘ಚಾಪ್ಟರ್ 01’ ನಂತರ ರಕ್ಷಿತ್ ಶೆಟ್ಟಿಯೂ ಆ ಸಂಭ್ರಮದ ವಲಯದಲ್ಲಿ ಕಾಣಿಸದಿರುವುದು ಚರ್ಚೆಗೆ ಕಾರಣವಾಯಿತು.
‘ಸು ಫ್ರಂ ಸೋ’ಗೆ ಅದೇ ಕಥೆ , ಈ ವರ್ಷದ ಬಾಕ್ಸಾಫೀಸ್ ಹಿಟ್ ಆಗಿ ಹೊರಹೊಮ್ಮಿದ ‘ಸು ಫ್ರಂ ಸೋ’ ರಾಜ್ ಬಿ ಶೆಟ್ಟಿ ಅವರ ದೊಡ್ಡ ಸಾಧನೆ. ಹಿಂದಿನ ವರ್ಷಗಳಲ್ಲಿ ಗೆಳೆಯರ ಸಿನಿಮಾಗಳನ್ನು ಪ್ರೀತಿಯಿಂದ ಪ್ರಚಾರ ಮಾಡುತ್ತಿದ್ದ ‘ಶೆಟ್ರು ಗ್ಯಾಂಗ್’, ಈ ಬಾರಿ ಒಂದು ಪೋಸ್ಟ್ ಕೂಡಾ ಹಾಕದಿರುವುದು ಅಭಿಮಾನಿಗಳಿಗೆ ಅಚ್ಚರಿ ತಂದಿದೆ.
‘45’ ಚಿತ್ರದ ಪ್ರಮೋಷನ್ ವಿಡಿಯೋದಲ್ಲಿ ಶಿವರಾಜ್ಕುಮಾರ್, ಉಪೇಂದ್ರ, ಅರ್ಜುನ್ ಜನ್ಯ ಹೆಸರುಗಳು ಕೇಳಿಬಂದರೂ, ರಾಜ್ ಬಿ ಶೆಟ್ಟಿ ಹೆಸರು ಉಲ್ಲೇಖವಾಗದೇ ಹೋಗಿದ್ದು ಮತ್ತಷ್ಟು ಅನುಮಾನಗಳನ್ನು ಹುಟ್ಟುಹಾಕಿತು. ಇದು ಉದ್ದೇಶಪೂರ್ವಕವೇ? ಅಥವಾ ಸಹಜವಾದ ಮಿಸ್ವೇ? ಎಂಬ ಪ್ರಶ್ನೆಗಳು ಎದ್ದವು.
ಈ ಎಲ್ಲ ಚರ್ಚೆಗಳ ನಡುವೆ ರಾಜ್ ಬಿ ಶೆಟ್ಟಿ ತಾಳ್ಮೆಯ ಉತ್ತರ ನೀಡಿದ್ದಾರೆ. “ಸಿನಿಮಾ ಬಗ್ಗೆ ಮಾತನಾಡುವಾಗ ಕೆಲವೊಮ್ಮೆ ಫ್ಲೋನಲ್ಲಿ ಹೆಸರುಗಳು ಮಿಸ್ ಆಗಬಹುದು. ಇದನ್ನು ಪರ್ಸನಲ್ ಆಗಿ ತೆಗೆದುಕೊಳ್ಳಬೇಕಾದ ಅವಶ್ಯಕತೆ ಇಲ್ಲ. ನಾವು ಚಿಕ್ಕ ಮಕ್ಕಳಲ್ಲ. ಯಾವುದೇ ಜಗಳವೂ ಇಲ್ಲ. ‘ಕಾಂತಾರ’ದಿಂದ ದೂರ ಉಳಿಯಲು ನನ್ನದೇ ಕಾರಣಗಳಿವೆ. ಅವು ರಿಷಬ್ ಅವರಿಗೆ ಗೊತ್ತು. ಮುಂದಿನ ದಿನಗಳಲ್ಲಿ ಅವಶ್ಯಕತೆ ಬಂದರೆ ಮತ್ತೆ ಒಟ್ಟಿಗೆ ಕೆಲಸ ಮಾಡುತ್ತೇವೆ” ಎಂಬುದಾಗಿ ಹೇಳಿದ್ದಾರೆ, ಚಿತ್ರರಂಗದಲ್ಲಿ ಗೆಳೆತನಗಳು ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತವೆಯೇ? ಅಥವಾ ಮೌನವೇ ದೊಡ್ಡ ತಪ್ಪಾಗಿ ಅರ್ಥೈಸಲ್ಪಡುತ್ತಿದೆಯೇ? ಎಂಬ ಪ್ರಶ್ನೆಗೆ ಸದ್ಯಕ್ಕೆ ಸ್ಪಷ್ಟ ಉತ್ತರ ಇಲ್ಲ. ಆದರೆ ‘ಶೆಟ್ರು ಗ್ಯಾಂಗ್’ ಬಗ್ಗೆ ಕೇಳಿಬರುತ್ತಿರುವ ಈ ಅನುಮಾನಗಳು, ಅಭಿಮಾನಿಗಳ ಕುತೂಹಲವನ್ನು ಮಾತ್ರ ಹೆಚ್ಚಿಸಿವೆ. ಸಮಯವೇ ಎಲ್ಲದಕ್ಕೂ ಉತ್ತರ ನೀಡಬೇಕಿದೆ ಅನ್ನೊದು ಈ ಫಿಲ್ಮೀಮಾತು