ಮೂಡಬಿದ್ರೆ: ಭಾರತೀಯ ಸೇನೆಯ ಅಗ್ನಿವೀರ ನೇಮಕಾತಿ ರ್ಯಾಲಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರಿಯಲ್ಲಿರುವ ಸ್ವರಾಜ್ ಮೈದಾನದಲ್ಲಿ 2026ರ ಜನವರಿ 30ರಿಂದ ಫೆಬ್ರವರಿ 10ರವರೆಗೆ ಆಯೋಜಿಸಲಾಗಿದೆ. ಈ ನೇಮಕಾತಿ ರ್ಯಾಲಿಯನ್ನು ಸೇನೆ ನೇಮಕಾತಿ ಕಚೇರಿ, ಮಂಗಳೂರು ಹಾಗೂ ನಾಗರಿಕ ಆಡಳಿತದ ಸಹಯೋಗದಲ್ಲಿ ನಡೆಸಲಾಗುತ್ತಿದೆ.
ಈ ರ್ಯಾಲಿಯಲ್ಲಿ ಕರ್ನಾಟಕ ರಾಜ್ಯದ 11 ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ “ಆನ್ಲೈನ್ ಕಾಮನ್ ಎಂಟ್ರನ್ಸ್ ಎಗ್ಜಾಂ (CEE)” ನಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ರ್ಯಾಲಿಗೆ ಆಹ್ವಾನಿಸಲಾಗಿದೆ. ಈ ಪರೀಕ್ಷೆ 2025ರ ಜೂನ್ 30ರಿಂದ ಜುಲೈ 10ರವರೆಗೆ ನಡೆದಿತ್ತು.
ನೇಮಕಾತಿ ರ್ಯಾಲಿಯಲ್ಲಿ ಅಗ್ನಿವೀರ ಜನರಲ್ ಡ್ಯೂಟಿ, ಅಗ್ನಿವೀರ ಟೆಕ್ನಿಕಲ್, ಅಗ್ನಿವೀರ ಕ್ಲರ್ಕ್/ಸ್ಟೋರ್ ಕೀಪರ್ ಟೆಕ್ನಿಕಲ್, ಅಗ್ನಿವೀರ ಟ್ರೇಡ್ಸ್ಮ್ಯಾನ್ (10ನೇ ತರಗತಿ) ಹಾಗೂ ಅಗ್ನಿವೀರ ಟ್ರೇಡ್ಸ್ಮ್ಯಾನ್ (8ನೇ ತರಗತಿ) ವಿಭಾಗಗಳಿಗಾಗಿ ನೇಮಕಾತಿ ನಡೆಯಲಿದೆ.
ಅಭ್ಯರ್ಥಿಗಳ ವಯಸ್ಸು, ವಿದ್ಯಾರ್ಹತೆ ಹಾಗೂ ಇತರ ಅರ್ಹತಾ ಮಾನದಂಡಗಳು ಸೇನೆ ನೇಮಕಾತಿ ಕಚೇರಿ, ಮಂಗಳೂರು ವತಿಯಿಂದ 2025ರ ಮಾರ್ಚ್ 11ರಂದು ಪ್ರಕಟಿಸಲಾದ ರ್ಯಾಲಿ ಅಧಿಸೂಚನೆಯಂತೆ ಅನ್ವಯವಾಗುತ್ತವೆ ಎಂದು ತಿಳಿಸಲಾಗಿದೆ.
ಆನ್ಲೈನ್ ಕಾಮನ್ ಎಂಟ್ರನ್ಸ್ ಎಗ್ಜಾಂ ಫಲಿತಾಂಶವನ್ನು www.joinindianarmy.nic.in ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಗೆ ಪ್ರವೇಶ ಪತ್ರಗಳನ್ನು ಈಗಾಗಲೇ ನೀಡಲಾಗಿದೆ. ಅಭ್ಯರ್ಥಿಗಳು ತಮ್ಮ ವೈಯಕ್ತಿಕ ಲಾಗಿನ್ ಮತ್ತು ನೋಂದಾಯಿತ ಇ-ಮೇಲ್ ಐಡಿ ಮೂಲಕವೂ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಸೇನೆ ನೇಮಕಾತಿ ಪ್ರಕ್ರಿಯೆ ಸಂಪೂರ್ಣವಾಗಿ ಪಾರದರ್ಶಕ ಹಾಗೂ ಮೆರಿಟ್ ಆಧಾರಿತವಾಗಿದ್ದು, ಅಭ್ಯರ್ಥಿಗಳು ಯಾವುದೇ ದಲ್ಲಾಳಿಗಳು ಅಥವಾ ಮಧ್ಯವರ್ತಿಗಳ ಮೋಸಕ್ಕೆ ಒಳಗಾಗಬಾರದು ಎಂದು ಸೇನಾ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಆಯ್ಕೆ ಪ್ರಕ್ರಿಯೆ ಆನ್ಲೈನ್ CEE, ನೇಮಕಾತಿ ರ್ಯಾಲಿಯಲ್ಲಿನ ದೈಹಿಕ ಹಾಗೂ ಇತರ ಪರೀಕ್ಷೆಗಳ ಆಧಾರದಲ್ಲಿ ನಡೆಯಲಿದೆ ಎಂದು ಸ್ಪಷ್ಟಪಡಿಸಲಾಗಿದೆ.