ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ಸಂಪ್ರದಾಯದಂತೆ ಸರ್ಕಾರ ತಯಾರಿಸಿದ ಪೂರ್ಣ ಭಾಷಣವನ್ನು ಓದಬೇಕಿದ್ದರೂ, ಕೇವಲ 2–3 ಸಾಲುಗಳಷ್ಟು ಮಾತ್ರ ಭಾಷಣ ಓದಿ ಸಭಾಂಗಣದಿಂದ ಅಚಾನಕ್ ಹೊರನಡೆದಿದ್ದಾರೆ. ಈ ರಾಜಕೀಯ ವಿವಾದದ ಮಧ್ಯೆ, ಇಂದು ಕರ್ನಾಟಕ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ನಡೆದ ಘಟನೆ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವುದಾಗಿ ಹೇಳಲಾಗಿರುವ (V-B-G-Ram-Ji Act) — ಅಂದರೆ ‘ವಿಕಸಿತ್ ಭಾರತ್ – ರೋಜ್ಗಾರ್ ಮತ್ತು ಅಜೀಕಾ ಮಿಷನ್ (ಗ್ರಾಮೀಣ)’ ಕಾಯ್ದೆಯನ್ನು ಕಾಂಗ್ರೆಸ್ ವಿರೋಧಿಸುತ್ತಿದ್ದು ಈ ಕಾಯ್ದೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (ಮನರೇಗಾ) ಯನ್ನು ಬದಲಿಸುವ ಉದ್ದೇಶ ಹೊಂದಿದ್ದು, ಇದರಿಂದ ಗ್ರಾಮೀಣ ಕಾರ್ಮಿಕರ ಹಕ್ಕುಗಳು ದುರ್ಬಲಗೊಳ್ಳುತ್ತವೆ ಎಂದು ಕಾಂಗ್ರೆಸ್, ಸಿಪಿಐ(ಎಂ) ಸೇರಿದಂತೆ ಪಕ್ಷಗಳು ಆರೋಪಿಸಿವೆ ಮನರೇಗಾ ಒಂದು ಹಕ್ಕು ಆಧಾರಿತ ಉದ್ಯೋಗ ಖಾತ್ರಿ ಯೋಜನೆ ಆಗಿದ್ದರೆ, ಹೊಸ ಕಾಯ್ದೆ ಅದನ್ನು ಯೋಜನಾ ಆಧಾರಿತ ವ್ಯವಸ್ಥೆಯಾಗಿ ಪರಿವರ್ತಿಸಿ, ಉದ್ಯೋಗ ಖಾತರಿಯ ಸ್ವರೂಪವನ್ನೇ ಕಿತ್ತುಕೊಳ್ಳುತ್ತದೆ ಎಂದು ಟೀಕೆಗಳನ್ನುಕಾಂಗ್ರೆಸ್ ಮಾಡಿದೆ.ಇದೇ ಕಾರಣವು ಕರ್ನಾಟಕ ವಿಧಾನಮಂಡಲದಲ್ಲಿ ತೀವ್ರ ಗಲಾಟೆಗೂ ಕಾರಣವಾಯಿತು
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ಸುಮಾರು ಮೂರು ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ ಭಾಷಣ ಮುಗಿದಿದ್ದು, ಇದು ಸದನದಲ್ಲಿ ಅಚ್ಚರಿ ಹಾಗೂ ಅಸಮಾಧಾನಕ್ಕೆ ಕಾರಣವಾಯಿತು. ರಾಜ್ಯ ಸರ್ಕಾರದ ಮೂಲಗಳ ಪ್ರಕಾರ, ಸರ್ಕಾರ ತಯಾರಿಸಿದ ಭಾಷಣದಲ್ಲಿ ಇರುವ 11 ಪ್ಯಾರಾಗಳಿಗೆ ರಾಜ್ಯಪಾಲರು ಒಪ್ಪಿಗೆ ನೀಡಿಲ್ಲ ಎನ್ನಲಾಗಿದೆ. ಈ ಪ್ಯಾರಾಗಳಲ್ಲಿ ಕೆಲವು ಕೇಂದ್ರ ಸರ್ಕಾರದ ನೀತಿಗಳ ವಿರುದ್ಧದ ಟೀಕೆಗಳನ್ನು ಒಳಗೊಂಡಿದ್ದು, ವಿಶೇಷವಾಗಿ ಮನರೇಗಾ ಬದಲಾವಣೆ ಹಾಗೂ ‘ವಿ-ಬಿ-ಜಿ-ರಾಮ್-ಜಿ ಕಾಯ್ದೆ’ ಕುರಿತ ಆಕ್ಷೇಪಗಳು ಇದ್ದುದರಿಂದ ರಾಜ್ಯಪಾಲರು ಅವನ್ನು ಓದಲು ನಿರಾಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜ್ಯಪಾಲರ ಈ ನಡೆಗೆ ಆಡಳಿತಾರೂಢ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಸಂವಿಧಾನದ ಪ್ರಕಾರ, ರಾಜ್ಯಪಾಲರು ರಾಜ್ಯ ಸರ್ಕಾರದ ಸಲಹೆಯಂತೆ ಭಾಷಣ ಮಾಡಬೇಕೆಂಬ ನಿಯಮವಿದೆ. ಆದರೆ ಅದನ್ನು ಉಲ್ಲಂಘಿಸಲಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಈ ಘಟನೆಯಿಂದಾಗಿ ರಾಜ್ಯಪಾಲ ಮತ್ತು ರಾಜ್ಯ ಸರ್ಕಾರದ ನಡುವಿನ ಸಂಘರ್ಷ ಮತ್ತಷ್ಟು ಗಂಭೀರಗೊಂಡಿದ್ದು, ಕೇಂದ್ರ–ರಾಜ್ಯ ಸಂಬಂಧಗಳು ಮತ್ತು ರಾಜ್ಯಪಾಲರ ಸಂವಿಧಾನಾತ್ಮಕ ಪಾತ್ರದ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ.