ಬೀದರ್: ಮಾನವನ ಜೀವನದಲ್ಲಿ ದಿನ, ತಿಂಗಳು, ವರ್ಷ ಹಾಗೂ ಸಮಯದ ಪಾಲನೆಯಿಂದ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಸಾಧ್ಯವಾಗುತ್ತದೆ. ಯೋಜಿತ ಹಾಗೂ ಕ್ರಮಬದ್ಧ ಅಧ್ಯಯನಕ್ಕೆ ದಿನದರ್ಶಿಕೆ ಅತ್ಯಂತ ಸಹಾಯಕವಾಗುತ್ತದೆ ಎಂದು ರಾಷ್ಟ್ರೀಯ ಬಸವದಳ ತಾಲೂಕಾಧ್ಯಕ್ಷರಾದ ಶಿವಶರಣಪ್ಪ ವಲ್ಲೆಪುರೆ ಹೇಳಿದರು.
ನಗರದ ಸಂತಪೂರ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಹಾಗೂ ಕಾಲೇಜಿನ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತೀಯ ಬಸವ ಬಳಗದ ಜಿಲ್ಲಾಧ್ಯಕ್ಷರಾದ ಡಾ. ಸಂಜೀವಕುಮಾರ ಜುಮ್ಮಾ ಮಾತನಾಡಿ, ಶಿಕ್ಷಣ ಸಂಸ್ಥೆಗಳಲ್ಲಿ ಪಠ್ಯಶಿಕ್ಷಣದ ಜೊತೆಗೆ ಸಂಸ್ಕಾರಕ್ಕೂ ಹೆಚ್ಚಿನ ಮಹತ್ವವಿದೆ. ವಿದ್ಯಾರ್ಥಿಗಳ ಸಾಧನೆ ಅವರ ಹೆತ್ತವರಿಗೆ ಮಾತ್ರವಲ್ಲದೆ, ಶಿಕ್ಷಣ ಸಂಸ್ಥೆಗಳಿಗೂ ಕೀರ್ತಿಯನ್ನು ತರುತ್ತದೆ. ಶರಣರ ಹಾಗೂ ಸಂತರ ನಾಡಿನಲ್ಲಿ ದಾಸೋಹಕ್ಕೆ ಅಪಾರ ಮಹತ್ವವಿದ್ದು, ವಿದ್ಯಾರ್ಥಿಗಳು ದಾಸೋಹಿಗಳಂತೆ ತಮ್ಮ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಂಶುಪಾಲರಾದ ನವೀಲಕುಮಾರ ಉತ್ಕಾರ್ ಪ್ರಾಸ್ತಾವಿಕ ಭಾಷಣದಲ್ಲಿ, ಕಾಲೇಜಿನ ದಿನದರ್ಶಿಕೆಯನ್ನು ಕಳೆದ 10 ವರ್ಷಗಳಿಂದ ಸತತವಾಗಿ ಮುದ್ರಿಸಿ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರಿಗೆ ವಿತರಿಸಲಾಗುತ್ತಿದೆ ಎಂದು ಹೆಮ್ಮೆಯಿಂದ ತಿಳಿಸಿದರು.
ಈ ಸಂದರ್ಭದಲ್ಲಿ ದಾಸೋಹಿಗಳಾದ ರೇಣುಕಾ ಚಂದ್ರಕಾಂತ ಸಜ್ಜನಶೆಟ್ಟಿ, ಸಂತೋಷ ಮೋಹಿತೆ, ಧನರಾಜ ಜಮನಿ, ಡಾ. ಡಿ.ಜಿ. ದೇಶಮುಖ, ಅವಿನಾಶ ಖಾನಾಪುರೆ, ಕಿರಣಕುಮಾರ ಬಿರಾದರ್ ಹಾಗೂ ಪ್ರಕಾಶ್ ಜೀರಿಗೆ ಅವರನ್ನು ಸನ್ಮಾನಿಸಿ ಕಾಲೇಜಿನ ದಿನದರ್ಶಿಕೆಯನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಗುರ್ಪ್ರೀತ್ ಕೌರ್, ಮುಖ್ಯಗುರುಗಳಾದ ಶಿವಕುಮಾರ ಹಿರೇಮಠ, ಗಿರಿಜಾ ಸ್ವಾಮಿ ಹಾಗೂ ಕಾಲೇಜಿನ ಉಪನ್ಯಾಸಕ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲೀಗೆ