Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
ಸಂಡೇ ಬಜಾರ್ ವ್ಯಾಪಾರಿಗಳಿಗೆ ಮುಕ್ತ ಅವಕಾಶ ನೀಡದಿದ್ದರೆ ಹೋರಾಟ ತೀವ್ರ: ಮುನೀರ್ ಕಾಟಿಪಳ್ಳ ಎಚ್ಚರಿಕೆಎಳೆಯ ಮನಸುಗಳಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿದಾಗ ಮಾತ್ರ ಸ್ವಚ್ಛ ಪರಿಸರ ನಿರ್ಮಾಣ ಸಾಧ್ಯ: ಸಿ. ಅರ್ಪಿತಾಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಸಂಚಲನ: ಉದ್ಧವ್ ಠಾಕ್ರೆ ಬಣಕ್ಕೆ ಮತ್ತೊಂದು ಆಘಾತ?ಸರ್ಕಾರಿ ನೌಕರರಿಗೆ ಸೌಲಭ್ಯಗಳು ಹೆಚ್ಚುತ್ತಿವೆ; ಆದರೆ ಸರ್ಕಾರಿ ಸಂಸ್ಥೆಗಳ ಭವಿಷ್ಯ ಏನು?ರೈತರಿಗೆ, ಜಾಗೃತಿಯೇ ಅಂತಿಮ ಗುರಾಣಿಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವ ಒಪ್ಪಂದ ರದ್ದುಪಡಿಸಿ: ಸಿಪಿಐಎಂ ಆಗ್ರಹಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಪೋಸ್ಟ್: ಮಂಗಳೂರಿನಲ್ಲಿ FIR ದಾಖಲುಮೋದಿ ಸರ್ಕಾರದ ನೀತಿಗಳಿಂದ ಕಾರ್ಮಿಕ ವರ್ಗದ ಬದುಕು ವಿನಾಶದತ್ತ: ಸುಕುಮಾರ್ ತೊಕ್ಕೋಟು • 🔥
Advertisement

ಲ್ಯಾಂಡ್‌ಲಾರ್ಡ್‌ಗೆ ಪ್ರೇಕ್ಷಕರ ಶ್ಲಾಘನೆ

ಲ್ಯಾಂಡ್‌ಲಾರ್ಡ್‌ಗೆ ಪ್ರೇಕ್ಷಕರ ಶ್ಲಾಘನೆ

ಇಲ್ಲಿ ಯಾರು ಮುಖ್ಯರಲ್ಲ, ಯಾರು ಅಮುಖ್ಯರಲ್ಲ ಎನ್ನುವುದನ್ನೇ ಹೇಳುವ ಸಿನಿಮಾ

ಬೆಂಗಳೂರು:ಕನ್ನಡ ಚಿತ್ರರಂಗದಲ್ಲಿ ಕೆಲವೊಮ್ಮೆ ಮಾತ್ರ ಇಂಥ ಸಿನಿಮಾಗಳು ಬರುತ್ತವೆ. ಹೀರೋ ಮಾತ್ರವೇ ಕಥೆಯ ಕೇಂದ್ರವಾಗದೆ, ಕಥೆಯೇ ಹೀರೋ ಆಗಿ ನಿಲ್ಲುವ ಚಿತ್ರಗಳು. ನಿರ್ದೇಶಕ–ಬರಹಗಾರ ಜಡೇಶ್ ಕೆ ಹಂಪಿ ಅವರ ‘ಲ್ಯಾಂಡ್‌ಲಾರ್ಡ್’ ಅಂಥದೇ ಒಂದು ಪ್ರಯತ್ನ. ಬಿಡುಗಡೆಯಾದ ದಿನದಿಂದಲೇ ಈ ಸಿನಿಮಾ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದು, “ರೊಚ್ಚಿಗೆದ್ದ ಸಿನಿಮಾ” ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಜಡೇಶ್ ಕೆ ಹಂಪಿ ಅವರ ಸಿನಿ ಪಯಣವನ್ನು ನೋಡಿದರೆ ಈ ಯಶಸ್ಸು ಅಚ್ಚರಿಯಲ್ಲ. ‘ಜಂಟಲ್‌ಮ್ಯಾನ್’ ಮೂಲಕ ಆರಂಭವಾದ ಅವರ ಕಥಾ ಪಯಣ ‘ಗುರುಶಿಷ್ಯರು’, ‘ಕಾಟೇರ’ ಮೂಲಕ ಗಟ್ಟಿಯಾಗುತ್ತಾ ಬಂದಿದೆ. ಈಗ ‘ಲ್ಯಾಂಡ್‌ಲಾರ್ಡ್’ ಮೂಲಕ ಅವರು ಕಥೆ ಹೇಳುವ ತಮ್ಮದೇ ಶೈಲಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಪ್ರೇಕ್ಷಕರನ್ನು ಹಿಡಿದುಕೊಳ್ಳುವ ಬಿಗಿಯಾದ ಕಥೆ, ಸ್ಪಷ್ಟ ದೃಷ್ಟಿಕೋನ ಮತ್ತು ವಾಸ್ತವದ ನೆಲೆಯಲ್ಲೇ ನಿಲ್ಲುವ ನಿರೂಪಣೆ – ಈ ಮೂರು ಅಂಶಗಳೇ ಚಿತ್ರದ ಬಲ.

ಇದನ್ನೂ ಓದಿ: ಸಂಡೇ ಬಜಾರ್ ವ್ಯಾಪಾರಿಗಳಿಗೆ ಮುಕ್ತ ಅವಕಾಶ ನೀಡದಿದ್ದರೆ ಹೋರಾಟ ತೀವ್ರ: ಮುನೀರ್ ಕಾಟಿಪಳ್ಳ ಎಚ್ಚರಿಕೆ

ಮಾಸ್ ಅಂದ್ರೆ ಕೇವಲ ಡೈಲಾಗ್ ಅಲ್ಲ
ಸಾಮಾನ್ಯವಾಗಿ ಮಾಸ್ ಸಿನಿಮಾಗಳು ಅಂದ್ರೆ ಜೋರಾದ ಡೈಲಾಗ್, ಎತ್ತರದ ಪಂಚ್‌ಗಳು ಎಂದುಕೊಳ್ಳಲಾಗುತ್ತದೆ. ಆದರೆ ‘ಲ್ಯಾಂಡ್‌ಲಾರ್ಡ್’ ಆ ಕಲ್ಪನೆಗೆ ಪ್ರಶ್ನೆ ಹಾಕುತ್ತದೆ. ಸಮಾಜದೊಳಗೆ ಮೌನವಾಗಿ ಬೆಳೆದು ಬಂದ ಅಸಮತೆ, ಶೋಷಣೆ, ನೋವುಗಳ ಬಗ್ಗೆ ನೇರವಾಗಿ ಮಾತನಾಡುವ ಸಂಭಾಷಣೆಗಳಿಗೆ ಚಿತ್ರಮಂದಿರಗಳಲ್ಲಿ ಸಿಗುತ್ತಿರುವ ಚಪ್ಪಾಳೆ, ವಿಷಲ್‌ಗಳೇ ಚಿತ್ರದ ದೊಡ್ಡ ಗೆಲುವು.
ಈ ಸಂಭಾಷಣೆಗಳಿಗೆ ಜೀವ ತುಂಬಿರುವವರು ಮಾಸ್ತಿ ಉಪ್ಪರಹಳ್ಳಿ.
“ಹುಲಿ ಸನ್ಯಾಸಿಯಾಗಿದೆ ಅಂದ್ರೆ
ಬೇಟೆಯಾಡೋದನ್ನ ಮರೆತಿದೆ ಅಂತಲ್ಲ…”
“ನೀರಿಗೆ ಪಾಚಿಯೇ ವೈರಿ ಇದ್ದಂಗೆ”
ಬಸವಿ–ಇಸವಿ, ಸಂಧಾನ–ಸಂವಿಧಾನ ಹೀಗೆ ಸ್ಥಳೀಯ ಸೊಗಡಿನ ಪದಗಳ ಬಳಕೆ ಸಿನಿಮಾಕ್ಕೆ ನೈಜತೆಯನ್ನು ತಂದಿದೆ.

ದುನಿಯಾ ವಿಜಯ್ – ಟೀಕೆಗಳಿಗೆ ಉತ್ತರ
‘ಸಲಗ’, ‘ಭೀಮ’ ಬಳಿಕ ದುನಿಯಾ ವಿಜಯ್ ಅವರ ಪಾತ್ರ ಆಯ್ಕೆ ಬಗ್ಗೆ ಕೇಳಿಬಂದ ಟೀಕೆಗಳಿಗೆ ‘ಲ್ಯಾಂಡ್‌ಲಾರ್ಡ್’ ಸ್ಪಷ್ಟ ಉತ್ತರ ನೀಡುತ್ತದೆ. ರೌಡಿ ಜಗತ್ತಿನ ಗಡಿಯಾಚೆ ನಿಂತು, ಸಂಪೂರ್ಣ ವಿಭಿನ್ನ ಸ್ವರೂಪದ ಪಾತ್ರವನ್ನು ಅವರು ಇಲ್ಲಿ ಹೊತ್ತುಕೊಂಡಿದ್ದಾರೆ.
ಚಪ್ಪಲಿಯ ಹಾರವನ್ನು ಕುತ್ತಿಗೆಗೆ ಹಾಕಿಕೊಂಡು ಅಭಿನಯಿಸುವ ದೃಶ್ಯಗಳು, ಅವರ ನಟನೆಯ ತೂಕವನ್ನು ಮತ್ತಷ್ಟು ಹೆಚ್ಚಿಸಿವೆ. ಇದು ದುನಿಯಾ ವಿಜಯ್ ತಮ್ಮನ್ನು ತಾವು ಕೇವಲ ಮಾಸ್ ಹೀರೋ ಎಂದು ಸೀಮಿತಗೊಳಿಸಿಕೊಳ್ಳದಿರುವುದರ ಸಾಕ್ಷಿ.

ಕಥೆ ಬಿದ್ದುಹೋಗದ ನಿರೂಪಣೆ
ಒಮ್ಮೆ ಕಥೆ ಶುರುವಾದರೆ ಅದು ಎಲ್ಲಿ ನಿಲ್ಲುತ್ತದೆ ಎಂಬ ಕುತೂಹಲ ಕೊನೆವರೆಗೂ ಉಳಿಯುತ್ತದೆ. ಒಂದು ದೃಶ್ಯ ಕೊಟ್ಟ ರೋಮಾಂಚನ ಮುಗಿಯುವ ಮೊದಲೇ ಮತ್ತೊಂದು ತಿರುವು ಎದುರಾಗುತ್ತದೆ. ಈ ಬಿಗಿತದ ಕಥನ ಶೈಲಿ ‘ಕಾಟೇರ’ ನೆನಪಿಸಿದರೂ, ಇಲ್ಲಿ ಅದೇ ಮಾದರಿಯನ್ನು ಮತ್ತಷ್ಟು ಪಕ್ವವಾಗಿ ಬಳಸಲಾಗಿದೆ.
ಅಸುರನ್, ಕರ್ಣನ್ ತರಹದ ಸಿನಿಮಾಗಳ ಛಾಯೆ ಕಂಡರೂ, ಅದು ಕಥೆಯ ಶಕ್ತಿಗೆ ಸಿಗುವ ಪ್ರಶಂಸೆಯಂತೆಯೇ ಕಾಣುತ್ತದೆ.

ಕೋಲಾರ–ಚಿಂತಾಮಣಿ ಭಾಷೆಯ ಜೀವಂತಿಕೆ
ಚಿತ್ರದ ಮತ್ತೊಂದು ದೊಡ್ಡ ಶಕ್ತಿ ಅಂದರೆ ಕೋಲಾರ–ಚಿಂತಾಮಣಿ ಭಾಗದ ಕನ್ನಡದ ಸೊಗಡು. ಎಲ್ಲ ಪಾತ್ರಗಳೂ ಒಂದೇ ಭಾಷಾ ಲಹರಿಯಲ್ಲಿ ಮಾತನಾಡುವುದರಿಂದ, ಪ್ರೇಕ್ಷಕರು ಕಥೆಯೊಳಗೆ ತಾವೇ ಸೇರಿಕೊಂಡಂತೆ ಭಾಸವಾಗುತ್ತದೆ. ಇದು ಸಿನಿಮಾವನ್ನು ಇನ್ನಷ್ಟು ನೆಲಮಟ್ಟದ ಅನುಭವವಾಗಿಸುತ್ತದೆ.

ಎಲ್ಲರಿಗೂ ತೂಕವಿರುವ ಪಾತ್ರಗಳು
ದುನಿಯಾ ವಿಜಯ್, ರಚಿತಾ ರಾಮ್, ರಾಜ್ ಬಿ ಶೆಟ್ಟಿ, ರಾಕೇಶ್ ಅಡಿಗ, ಶಿಶಿರ್ ಬೈಕಾಡಿ, ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಉಮಾಶ್ರೀ, ಭಾವನಾ, ಶರತ್ ಲೋಹಿತಾಶ್ವ, ಮಿತ್ರ, ಬಿ.ಎಂ. ಗಿರಿರಾಜ್, ಅವಿನಾಶ್ – ದೊಡ್ಡ ತಾರಾಬಳಗ ಇದ್ದರೂ ಇಲ್ಲಿ ಯಾರೂ ಅಮುಖ್ಯರಲ್ಲ.ಪ್ರತಿಯೊಬ್ಬ ಪಾತ್ರಕ್ಕೂ ಕಥೆಯಲ್ಲಿ ಕಾರಣವಿದೆ, ಅರ್ಥವಿದೆ. ದುನಿಯಾ ವಿಜಯ್ ಅವರ ಪುತ್ರಿ ರಿತನ್ಯಾ ಮೊದಲ ಸಿನಿಮಾದಲ್ಲೇ ಗಮನ ಸೆಳೆದಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ಚಿತ್ರಕ್ಕೆ ಸೂಕ್ತ ಬೆಂಬಲ ನೀಡಿದೆ.
ಮನರಂಜನೆ ಮಾತ್ರವಲ್ಲ, ವಿಚಾರವೂ ಇದೆ ಕೆಲವು ಸಿನಿಮಾಗಳು ಕೇವಲ ಮನರಂಜನೆಗಾಗಿ. ಕೆಲವು ಸಂದೇಶ ಹೇಳಲು. ಇನ್ನೂ ಕೆಲವು ನಮ್ಮ ಅರಿವನ್ನು ವಿಸ್ತರಿಸಲು. ಆದರೆ ಈ ಎಲ್ಲವನ್ನೂ ಒಂದೇ ಸಿನಿಮಾದಲ್ಲಿ ಸಮತೋಲನದಿಂದ ನೀಡುವುದು ಸುಲಭದ ಕೆಲಸವಲ್ಲ. ‘ಲ್ಯಾಂಡ್‌ಲಾರ್ಡ್’ ಅದನ್ನು ಸಾಧ್ಯವಾಗಿಸಿದೆ.
ಬಾಕ್ಸ್ ಆಫೀಸ್ ಸಂಖ್ಯೆಗಳಿಗಿಂತ ಸಿನಿಮಾ ಮುಗಿದ ಮೇಲೆ ಉಳಿಯುವ ಅನುಭವವೇ ಮುಖ್ಯ ಎನ್ನುವವರಿಗೆ ಇದು ಖಂಡಿತಾ ನೋಡಲೇಬೇಕಾದ ಸಿನಿಮಾ.

ಕನ್ನಡಕ್ಕೆ ಇಂಥ ಗಟ್ಟಿ, ವಿಚಾರಪೂರ್ಣ ಹಾಗೂ ಮಾಸ್ ಅಪೀಲ್ ಇರುವ ಸಿನಿಮಾ ಕೊಟ್ಟಿದ್ದಕ್ಕಾಗಿ ಸಿನಿಪ್ರೇಮಿಗಳು ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.

😀
0
😍
0
😢
0
😡
0
👍
0
👎
0

Web Add
Prajapara News Kannada