ಇಬ್ಬರ ಮೃತ್ಯು, ಇಬ್ಬರ ಸ್ಥಿತಿ ಗಂಭೀರ
ಉಡುಪಿ: ಉಡುಪಿಯ ಡೆಲ್ಟಾ ಬೀಚ್ ಕೋಡಿಬೆಂಗ್ರೆಯಲ್ಲಿ ಸಂಭವಿಸಿದ ಪ್ರವಾಸಿ ದುರಂತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಇನ್ನಿಬ್ಬರು ಜೀವನ್ಮರಣ ಹೋರಾಟದಲ್ಲಿರುವ ಘಟನೆ ನಡೆದಿದೆ. ಅಲೆಗಳ ಅಬ್ಬರದ ನಡುವೆ ಪ್ರವಾಸಿಗರ ಬೋಟ್ ನಿಯಂತ್ರಣ ತಪ್ಪಿ ಸಮುದ್ರಕ್ಕೆ ಮಗುಚಿದ ಪರಿಣಾಮ ಈ ಅವಘಡ ಸಂಭವಿಸಿದೆ.
ಮೃತರನ್ನು ಶಂಕರಪ್ಪ (22) ಮತ್ತು ಸಿಂಧು (23) ಎಂದು ಗುರುತಿಸಲಾಗಿದೆ. ಇವರು ಮೈಸೂರಿನಿಂದ ಉಡುಪಿಗೆ ಸಮುದ್ರ ವಿಹಾರಕ್ಕೆ ಆಗಮಿಸಿದ್ದ ಪ್ರವಾಸಿಗರ ತಂಡದ ಸದಸ್ಯರಾಗಿದ್ದಾರೆ.
ಮೈಸೂರಿನ ಬಿಪಿಒ ಕಾಲ್ ಸೆಂಟರ್ ಒಂದರಿಂದ 28 ಮಂದಿ ಪ್ರವಾಸಿಗರ ತಂಡ ಉಡುಪಿ ಪ್ರವಾಸಕ್ಕೆ ಆಗಮಿಸಿತ್ತು. ಡೆಲ್ಟಾ ಬೀಚ್ನಲ್ಲಿ ಎರಡು ಪ್ರವಾಸಿ ಬೋಟುಗಳ ಮೂಲಕ 28 ಮಂದಿ ಸಮುದ್ರ ವಿಹಾರಕ್ಕೆ ತೆರಳಿದ್ದರು. ಎಲ್ಲ ಪ್ರವಾಸಿಗರಿಗೆ ಭದ್ರತೆಯ ದೃಷ್ಟಿಯಿಂದ ಲೈಫ್ ಜಾಕೆಟ್ ನೀಡಲಾಗಿತ್ತು. ಆದರೆ ಕೆಲವರು ಲೈಫ್ ಜಾಕೆಟ್ ಧರಿಸದೇ, ಕೆಲವರು ನಿರ್ಲಕ್ಷ್ಯ ವಹಿಸಿ ಬೋಟ್ ಹತ್ತಿದ್ದಾರೆ ಎನ್ನಲಾಗಿದೆ.
ಕಡಲಿನಲ್ಲಿ ಬೋಟ್ ಸಾಗುತ್ತಿದ್ದ ವೇಳೆ ಕೆಲ ಪ್ರವಾಸಿಗರು ಬೋಟ್ನಲ್ಲಿ ಹುಚ್ಚಾಟ ಮಾಡಿ ಕುಣಿಯಲು ಆರಂಭಿಸಿದ ಪರಿಣಾಮ ಬೋಟ್ನ ಸಮತೋಲನ ತಪ್ಪಿದ್ದು, ಅಲೆಗಳ ಅಬ್ಬರಕ್ಕೆ ಬೋಟ್ ಮಗುಚಿಬಿದ್ದಿದೆ.
ಘಟನೆ ನಡೆದ ಕೂಡಲೇ ಸ್ಥಳೀಯರು ಮತ್ತೊಂದು ಬೋಟಿನ ಮೂಲಕ ರಕ್ಷಣೆಗೆ ಧಾವಿಸಿ, ನೀರಿನಲ್ಲಿ ಮುಳುಗಿದವರನ್ನು ಮೇಲಕ್ಕೆತ್ತಿದ್ದಾರೆ. ಲೈಫ್ ಜಾಕೆಟ್ ಧರಿಸಿದ್ದ ಹಲವರನ್ನು ಸುಲಭವಾಗಿ ರಕ್ಷಿಸಿ ಇನ್ನೊಂದು ಬೋಟಿಗೆ ಸ್ಥಳಾಂತರಿಸಲಾಯಿತು.
ಗಂಭೀರ ಸ್ಥಿತಿಯಲ್ಲಿದ್ದ ನಾಲ್ವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಶಂಕರಪ್ಪ ಮತ್ತು ಸಿಂಧು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಉಳಿದ ಇಬ್ಬರು ಮಲ್ಪೆಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಪ್ರಕರಣದಲ್ಲಿ ಪ್ರವಾಸಿಗರ ನಿರ್ಲಕ್ಷ್ಯ ಮತ್ತು ಭದ್ರತಾ ಸೂಚನೆಗಳನ್ನು ಪಾಲಿಸದಿರುವುದೇ ದುರ್ಘಟನೆಗೆ ಕಾರಣ ಎನ್ನಲಾಗುತ್ತಿದೆ. ಘಟನೆ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.