“ನರೇಗಾ ಮರಳಿಸಿ – ಉದ್ಯೋಗದ ಹಕ್ಕು ಉಳಿಸಿ”
ಬಂಟ್ವಾಳ: ನರೇಗಾ ಬಚಾವೋ ಸಂಗ್ರಾಮ – ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ)ಯ ಹೆಸರನ್ನು ಬದಲಾಯಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ, “ನರೇಗಾ ಮರಳಿಸಿ – ಉದ್ಯೋಗದ ಹಕ್ಕು ಉಳಿಸಿ” ಎಂಬ ಘೋಷಣೆಯೊಂದಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಮಣಿಹಳ್ಳದಿಂದ ಕೈಕಂಬದ ವರೆಗೆ ಅಲ್ಲಿಂದ ಮತ್ತೆ ಬಿಸಿರೋಡ್ವರೆಗೆ ಬೃಹತ್ ಪಾದಯಾತ್ರೆ ನಂತರ ಪ್ರತಿಭಟನಾ ಸಭೆ ನಡೆಸಲಾಯಿತು.

ಈ ಪಾದಯಾತ್ರೆಗೆ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ರಮಾನಾಥ್ ರೈ ಅವರು ನೇತೃತ್ವ ವಹಿಸಿದ್ದರು. ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ರಮಾನಾಥ್ ರೈ, ನರೇಗಾ ಯೋಜನೆ ಗ್ರಾಮೀಣ ಜನರ ಬದುಕಿಗೆ ಆಸರೆಯಾದ ಮಹತ್ವದ ಯೋಜನೆ. ಅದರ ಹೆಸರನ್ನು ಬದಲಾಯಿಸುವ ಮೂಲಕ ಮಹಾತ್ಮ ಗಾಂಧೀಜಿಯ ಹೆಸರನ್ನು ಅಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಯೋಜನೆಯ ಫಲಾನುಭವ ಕಡಿತಗೊಳಿಸುವ ಕೇಂದ್ರ ಸರ್ಕಾರದ ನೀತಿಯನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ವಿರೋಧಿಸಲಿದೆ ಎಂದು ಅವರು ಎಚ್ಚರಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಭಂಡಾರಿ, ಬಾಲಚಂದ್ರ ಅಂಚನ್, ಕಾಂಗ್ರೆಸ್ ಮುಖಂಡರಾದ ಬೇಬಿಕುಂದರ್, ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್. ಮೊಹಮ್ಮದ್, ಪದ್ಮಶೇಖರ್ ಜೈನ್, ಸುದರ್ಶನ್ ಜೈನ್, ಅಬ್ಬಾಸ್, ಪಿಯೋಸ್ ಎಲ್. ರೋಡ್ರಿಗಸ್, ಅಶ್ವಿನ್ ಕುಮಾರ್ ರೈ, ಮಮತ ಗಟ್ಟಿ, ಮಲ್ಲಿಕಾ ಶೆಟ್ಟಿ, ಜಯಂತಿ ಪೂಜಾರಿ, ಸದಾಶಿವ ಬಂಗೇರ, ನವಾಸ್ ಬಡಕಬೈಲ್,ಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

