ಬೆಳ್ತಂಗಡಿ, ಫೆ.22: ಸತ್ಯಸಾರಮಾನಿ ಯುವ ವೇದಿಕೆ ಕೇಂದ್ರ ಸಮಿತಿ, ಬೆಳ್ತಂಗಡಿ ತುಳುನಾಡು ಇದರ ವತಿಯಿಂದ ಯುವ ಮುಖಂಡರು, ಪ್ರತಿಭಾವಂತ ಬರಹಗಾರರು ಹಾಗೂ ವಕೀಲರಾದ ಶ್ರೀ ಸುರೇಶ್ ಪಿ.ಬಿ. ರವರು ರಚಿಸಿರುವ ‘ಶ್ರೀ ಸತ್ಯ ಸಾರಮಾನಿ ಕಾನದ ಕಟದರು – ಆದಿದ್ರಾವಿಡ ಸಾರಮಾನಿ ಸಮಾಜ ಕುಲದೈವಗಳು’ ಎಂಬ ಮಹತ್ವದ ಕೃತಿಯ ಬಿಡುಗಡೆ ಮತ್ತು ಪುಸ್ತಕ ಕುರಿತು ಚಿಂತನ ಮಂಥನ ಕಾರ್ಯಕ್ರಮವು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆಯಿತು.
ಕಾರ್ಯಕ್ರಮವನ್ನು ದಿನೇಶ್ ಪಡ್ಡಾಯಾರು ಉದ್ಘಾಟಿಸಿ ಮಾತನಾಡಿ, ಸಮುದಾಯದಲ್ಲಿ ಕಾನದ ಕಟದರು ಕುರಿತ ಸಮಗ್ರ ಮಾಹಿತಿಯ ಕೊರತೆ ಇರುವುದನ್ನು ಉಲ್ಲೇಖಿಸಿದರು. “ಈ ಕೊರತೆಯನ್ನು ನೀಗಿಸುವ ದೃಷ್ಟಿಯಿಂದ ಸುರೇಶ್ ಪಿ.ಬಿ. ಅವರ ಕೃತಿ ಇಂದಿನ ಕಾಲಘಟ್ಟದಲ್ಲಿ ಅತ್ಯಂತ ಅಗತ್ಯವಾಗಿದೆ. ಇತಿಹಾಸವನ್ನು ತಿಳಿದುಕೊಳ್ಳುವುದು ಸಮುದಾಯದ ಸ್ವಾಭಿಮಾನವನ್ನು ಬಲಪಡಿಸುವುದಕ್ಕೆ ಪ್ರಮುಖ ಅಸ್ತ್ರ” ಎಂದು ಅವರು ಹೇಳಿದರು.
ಸಮುದಾಯ ಏಕತೆಗೆ ಟರ್ನಿಂಗ್ ಪಾಯಿಂಟ್
ಕಾರ್ಯಕ್ರಮದಲ್ಲಿ ವಿಚಾರ ಮಂಡನೆ ಮಾಡಿದ ಶ್ರೀ ರಘು ಧರ್ಮಸೇನ, ಅಧ್ಯಕ್ಷರು, ಸತ್ಯಸಾರಮಾನಿ ಯುವ ವೇದಿಕೆ ಕೇಂದ್ರ ಸಮಿತಿ, ಮಾತನಾಡಿ, “ಸಮುದಾಯದೊಳಗೆ ವಿಭಜಿತವಾಗಿದ್ದ ಜನರನ್ನು ಒಂದೇ ವೇದಿಕೆಗೆ ತರುವ ಟರ್ನಿಂಗ್ ಪಾಯಿಂಟ್ ಸತ್ಯಸಾರಮಾನಿ ಯುವ ವೇದಿಕೆಯ ಮೂಲಕ ಪ್ರಾರಂಭವಾಗಿದೆ. ಸಾರಮಾನಿ ಇತಿಹಾಸದ ಕುರಿತು ಮಾತನಾಡಲು ಮತ್ತು ಪುಸ್ತಕ ರಚಿಸಲು ಪ್ರೇರಣೆ ನೀಡಿದ ಮಹಾನ್ ವ್ಯಕ್ತಿ ಅಂಬೇಡ್ಕರ್ ಹೊರತು ಬೇರೆ ಯಾರೂ ಅಲ್ಲ” ಎಂದು ಹೇಳಿದರು.
ಕಾನದ ಕಟದರು ಹೋರಾಟವು ಈ ನೆಲದ ಕೃಷಿ ಹಕ್ಕುಗಳಿಗಾಗಿ ಮತ್ತು ಅಸ್ಪರ್ಶತೆಯ ವಿರುದ್ಧ ನಡೆದ ಹೋರಾಟವಾಗಿದ್ದು, ಅದರ ನಿಜಸ್ವರೂಪವನ್ನು ಇತಿಹಾಸದ ಮೂಲಕ ಅರಿಯಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಸಮುದಾಯದ ಇತಿಹಾಸ, ಸಂಸ್ಕೃತಿ ಹಾಗೂ ಕುಲದೈವಗಳ ಕುರಿತು ಸಮಗ್ರ ಮಾಹಿತಿಯನ್ನು ದಾಖಲಿಸಿರುವ ಈ ಕೃತಿ ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಶಿವಪ್ಪ ಗರ್ಡ್ಯಾಡಿ ಉಸ್ತುವಾರಿ ದಕ ಬಿಎಸ್ ಸ್ಪಿ, ಶ್ರೀನಿವಾಸ್ ಪಿಎಸ್ ಅಧ್ಯಕ್ಷರು ಬಿಎಸ್ಪಿ ಬೆಳ್ತಂಗಡಿ ಕಾರ್ಯಕ್ರಮದ ಅಧ್ಯಕ್ಷತೆ ದಿನೇಶ್ ಧರ್ಮಸ್ಥಳ, ಸಂಚಾಲಕರು, ಸತ್ಯ ಸಾರಮಾನಿ ಯುವ ವೇದಿಕೆ ತುಳುನಾಡು ಬೆಳ್ತಂಗಡಿ, ಪರಮೇಶ್ವರ ಸಾಲ್ಯನ್, ಡಾ. ಸುಜಾತ, ದಿವ್ಯ ಸಾಲ್ಯಾನ್, ರಾಜಾ ಚೆಂಡ್ತಿಮಾರ್, ಸೋಮನಾಥ್ ಉಪ್ಪಿನಂಗಡಿ, ತನಿಯಪ್ಪ ಪಡ್ಡಯಾರ್, ಕಿರಣ್ ಕುಮಾರ್, ಬಾಬು ಪಡ್ರಿರೆ, ಕಾಂತಪ್ಪ ಅಲಂಗಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮವು ಸಮುದಾಯ ಚಿಂತನೆಗೆ ವೇದಿಕೆಯಾಗಿದ್ದು, ಕಾನದ ಕಟದರು ಇತಿಹಾಸ ಮತ್ತು ಆದಿದ್ರಾವಿಡ ಸಾರಮಾನಿ ಸಮಾಜದ ಪರಂಪರೆ ಕುರಿತ ಚರ್ಚೆಗಳು ಗಂಭೀರವಾಗಿ ನಡೆಯುವ ಮೂಲಕ ಯಶಸ್ವಿಯಾಯಿತು.