ನವದೆಹಲಿ: ದೇಶದಲ್ಲಿ ನಕ್ಸಲ್ ಚಟುವಟಿಕೆಗಳು ಬಹುತೇಕ ಅಂತ್ಯಗೊಂಡಿದ್ದು, ಭಾರತ “ನಕ್ಸಲ್ ಮುಕ್ತ” ರಾಷ್ಟ್ರದತ್ತ ಸಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. Lok Sabhaದಲ್ಲಿ ಮಾತನಾಡಿದ ಅವರು, ನಕ್ಸಲ್ ಸಂಘಟನೆಯ ಕೇಂದ್ರ ನಾಯಕತ್ವದ ರಚನೆ ಕುಸಿದಿದ್ದು, ಭದ್ರತಾ ಪಡೆಗಳ ನಿರಂತರ ಕಾರ್ಯಾಚರಣೆಗಳಿಂದ ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ ಎಂದು ತಿಳಿಸಿದರು.
ಅವರು ಮುಂದುವರೆದು, ಕಳೆದ ಕೆಲವು ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಯುಕ್ತ ಕಾರ್ಯಾಚರಣೆಗಳಿಂದ ನಕ್ಸಲ್ ಚಟುವಟಿಕೆಗಳಲ್ಲಿ ಗಣನೀಯ ಕುಸಿತ ಕಂಡುಬಂದಿದೆ. ವಿಶೇಷವಾಗಿ ಛತ್ತೀಸ್ಗಢದ ಬಾಸ್ತರ್ ಪ್ರದೇಶದಲ್ಲಿ ಭದ್ರತಾ ಪಡೆಗಳು ವ್ಯಾಪಕ ಕಾರ್ಯಾಚರಣೆ ನಡೆಸಿದ್ದು, ಪ್ರಮುಖ ನಾಯಕರನ್ನು ಬಂಧಿಸುವುದು ಹಾಗೂ ಶರಣಾಗತಿಗೆ ಪ್ರೇರೇಪಿಸುವ ಕ್ರಮಗಳಿಂದ ಸಂಘಟನೆಯ ಬಲ ಕುಗ್ಗಿದೆ ಎಂದು ಹೇಳಿದರು.
ಇದಲ್ಲದೆ, ನಕ್ಸಲ್ ಪ್ರಭಾವಿತ ಜಿಲ್ಲೆಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು, ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚಿನ ವೇಗ ನೀಡಲಾಗಿದೆ. ರಸ್ತೆ, ಸಂಪರ್ಕ ವ್ಯವಸ್ಥೆ, ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ವಿಸ್ತರಿಸುವ ಮೂಲಕ ಸ್ಥಳೀಯ ಜನರಿಗೆ ಮುಖ್ಯವಾಹಿನಿಗೆ ತರಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಅಮಿತ್ ಶಾ ಹೇಳಿದರು.
“ಹಿಂಸಾಚಾರವನ್ನು ಬಿಟ್ಟು ಶರಣಾಗತಿಯಾದವರಿಗೆ ಪುನರ್ವಸತಿ ಹಾಗೂ ಉದ್ಯೋಗಾವಕಾಶ ನೀಡಲಾಗುತ್ತಿದೆ. ಇದರಿಂದ ಅನೇಕರು ಮುಖ್ಯವಾಹಿನಿಗೆ ಸೇರಿದ್ದಾರೆ. ಉಳಿದಿರುವ ಅಲ್ಪ ಗುಂಪುಗಳನ್ನೂ ಶೀಘ್ರದಲ್ಲಿ ನಿರ್ಮೂಲನೆ ಮಾಡಲಾಗುವುದು,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಕ್ಸಲ್ ಚಟುವಟಿಕೆಗಳಿಂದ ದೀರ್ಘಕಾಲ ಬಾಧಿತ ಪ್ರದೇಶಗಳಲ್ಲಿ ಈಗ ಶಾಂತಿ ಸ್ಥಾಪನೆಯಾಗುತ್ತಿರುವುದರಿಂದ ಅಭಿವೃದ್ಧಿಗೆ ಹೊಸ ದಾರಿ ತೆರೆದಿದೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ.