Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ತಾಣ- “ಮನಸ್ಸಿಗಿಂತ ನೆಮ್ಮದಿಯ ತಾಣ ಬೇರೊಂದಿಲ್ಲ.”

ತಾಣ- “ಮನಸ್ಸಿಗಿಂತ ನೆಮ್ಮದಿಯ ತಾಣ ಬೇರೊಂದಿಲ್ಲ.”

ಝೆನ್ ದೃಷ್ಟಿಯಲ್ಲಿ ಇದು ಪೂರ್ತಿ ಸತ್ಯ, ಆದರೆ ತಿರುಗು-ಮುರುಗು ಸತ್ಯ. ಯಾಕೆಂದರೆ ಮನಸ್ಸೇ ನರಕ, ಮನಸ್ಸೇ ಸ್ವರ್ಗ. ಯಾವ ಮನಸ್ಸು? ಅದೇ ಪ್ರಶ್ನೆ.
1. ಯಾವ ಮನಸ್ಸು ನರಕ? ಯಾವ ಮನಸ್ಸು ನೆಮ್ಮದಿ? ಇಲ್ಲಿ ಎರಡು ಮನಸ್ಸಿಲ್ಲ. ಒಂದೇ ಮನಸ್ಸು. ಕೊಳಕು ಕನ್ನಡಿ, ಸ್ವಚ್ಛ ಕನ್ನಡಿ. ಕೊಳಕು ಮನಸ್ಸು = ಯೋಚನೆಯ ಮನಸ್ಸು, “ನಾನು” ಅನ್ನೋ ಮನಸ್ಸು, ಹೋಲಿಕೆ ಮನಸ್ಸು. “ನನಗೆ ಸಿಗಲಿಲ್ಲ”, “ಅವನಿಗೆ ಸಿಕ್ತು”, “ನಾಳೆ ಏನಾಗುತ್ತೋ”, “ನಿನ್ನೆ ಹಾಗಬಾರದಿತ್ತು”. ಇದು ಹೇನು ತುಂಬಿದ ತಲೆ. ತುರಿಕೆ, ಕಡಿತ, ರಕ್ತ. ಇಲ್ಲೇ ನರಕ. ಹಿಮಾಲಯಕ್ಕೆ ಹೋದರೂ ಈ ತಲೆ ಜೊತೆಗೇ ಬರುತ್ತೆ. ನೆಮ್ಮದಿ ಸಿಗಲ್ಲ. ಸ್ವಚ್ಛ ಮನಸ್ಸು = ನೋಡುವ ಮನಸ್ಸು, “ಇರುವ” ಮನಸ್ಸು, ಈ ಕ್ಷಣದ ಮನಸ್ಸು.
ಗಾಳಿ ಬೀಸಿತು! ತಂಪಾಯ್ತು. ಅಷ್ಟೇ. “ಇನ್ನೂ ಬೀಸಬಾರದಾ” ಅನ್ನೋ ಆಸೆ ಇಲ್ಲ. “ನಿನ್ನೆ ಜಾಸ್ತಿ ಬೀಸಿತ್ತು” ಅನ್ನೋ ಹೋಲಿಕೆ ಇಲ್ಲ. ಇರೋದನ್ನು ಇರೋ ಹಾಗೆ ಕಾಣೋದು. ಇದೇ ನೆಮ್ಮದಿ. ಇದೇ ಬುದ್ಧನ ಮನೆ.

ಝೆನ್ ಕಥೆ: ಗುಡಿ ಎಲ್ಲಿ? : ಶಿಷ್ಯ ಗುರುಗೆ “ಗುರುಗಳೆ, ನೆಮ್ಮದಿಗಾಗಿ ಗುಡಿಗೆ ಹೋಗಲಾ? ಬೆಟ್ಟಕ್ಕೆ ಹೋಗಲಾ?” ಅಂದ.
ಗುರು: “ನಿನ್ನ ತಲೆ ಜೊತೆ ತಗೊಂಡು ಹೋಗ್ತೀಯಾ?”
ಶಿಷ್ಯ: “ಹೌದು.”
ಗುರು ನಕ್ಕು: “ಹಾಗಾದರೆ ಗುಡಿಯಲ್ಲೂ ಗಲಾಟೆ, ಬೆಟ್ಟದಲ್ಲೂ ಗಲಾಟೆ. ನಿನ್ನ ತಲೆಯನ್ನೇ ಗುಡಿ ಮಾಡಿಕೋ. ಅಲ್ಲೇ ದೇವರು. ಅಲ್ಲೇ ನೆಮ್ಮದಿ.”
ಶಿಷ್ಯ: “ಹೇಗೆ?”
ಗುರು: “ಕಣ್ಣು ಮುಚ್ಚು. ಯೋಚನೆ ಬರುತ್ತೆ. ಜಗಳ ಆಡಬೇಡ. ‘ಓಹ್, ಯೋಚನೆ’ ಅಂತ ನೋಡು. ಅದು ಹೋಗುತ್ತೆ. ಮತ್ತೆ ಸುಮ್ಮನಿರು. ಯೋಚನೆ ಇಲ್ಲದ ಜಾಗವೇ ಗುಡಿ. ಅದು ನಿನ್ನ ಒಳಗೇ ಇದೆ. ”ಹೋಟೆಲ್, ಆಶ್ರಮ, ವಿದೇಶ – ಎಲ್ಲ ತಾತ್ಕಾಲಿಕ. ಮನಸ್ಸು ಶಾಂತ ಇದ್ದರೆ ಸ್ಮಶಾನವೂ ಅರಮನೆ. ಮನಸ್ಸು ಗಲಾಟೆ ಇದ್ದರೆ ಅರಮನೆಯೂ ಸ್ಮಶಾನ.

2. ನೆಮ್ಮದಿ ಎಲ್ಲಿದೆ? ಹೊರಗೆ ಹುಡುಕಬೇಡ ಇದೇ ನಾವು ಮಾಡುವ ತಪ್ಪು: “ಪರಿಸ್ಥಿತಿ ಸರಿಯಾದರೆ ನೆಮ್ಮದಿ ಬರುತ್ತೆ” ಅಂತ ಕಾಯ್ತೀವಿ. “ದುಡ್ಡು ಬಂದರೆ”, “ಮದುವೆಯಾದರೆ”, “ಮಕ್ಕಳು ದೊಡ್ಡವರಾದರೆ”, “ರಿಟೈರ್ ಆದರೆ”… ಹೇನು ತುರಿಕೆಗೆ ಮುಲಾಮು ಸವರಿದ ಹಾಗೆ. ಸ್ವಲ್ಪ ಹೊತ್ತು ಹಾಯ್. ಮತ್ತೆ ತುರಿಕೆ. ಝೆನ್ ಹೇಳುತ್ತೆ: ನೆಮ್ಮದಿ ಪರಿಸ್ಥಿತಿಯಲ್ಲಿ ಇಲ್ಲ. ನೋಡುವ ದೃಷ್ಟಿಯಲ್ಲಿ ಇದೆ. ಬೋಧಿಧರ್ಮ ಚಕ್ರವರ್ತಿಯೂ ಹತ್ರ ಮೂರು ವರ್ಷ ಗೋಡೆ ನೋಡುತ್ತಾ ಕೂತ. ಅರಮನೆ ಬೇಡ ಅಂದ. ಗುಹೆ ಬೇಡ ಅಂದ. ಗೋಡೆ ಸಾಕು ಅಂದ. ಯಾಕೆ? ಮನಸ್ಸು ಗೋಡೆ ಆದರೆ ಜಗತ್ತೆಲ್ಲಾ ಅರಮನೆ. ಮನಸ್ಸು ಮಾರುಕಟ್ಟೆ ಆದರೆ ಗುಹೆಯೂ ಮಾರುಕಟ್ಟೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಹಸಿರು ವಿದ್ಯುತ್ ಇಂಧನ ಮತ್ತು ಭೌಗೋಳಿಕ ರಾಜಕೀಯದ ಅಡ್ಡಿ

ಝೆನ್ ಕಥೆ: ಬಿರುಗಾಳಿ: ಇಬ್ಬರು ಸನ್ಯಾಸಿಗಳು ಬಿರುಗಾಳಿಯಲ್ಲಿ ಸಿಕ್ಕಿಬಿದ್ದರು.
ಒಬ್ಬ: “ಅಯ್ಯೋ! ದೇವರೇ! ಈ ಗಾಳಿ ನಿಲ್ಲಲಿ! ನನಗೆ ನೆಮ್ಮದಿ ಬೇಕು!” ಅವನು ನರಕ ಅನುಭವಿಸಿದ.
ಇನ್ನೊಬ್ಬ: ಕಣ್ಣು ಮುಚ್ಚಿ ಗಾಳಿಯ ಶಬ್ದ ಕೇಳಿದ. “ಓಹ್, ಪ್ರಕೃತಿ ಘರ್ಜಿಸುತ್ತಿದೆ” ಅಂದ. ಅವನು ಧ್ಯಾನದಲ್ಲಿದ್ದ.
ಬಿರುಗಾಳಿ ಒಂದೇ. ಮನಸ್ಸು ಎರಡು. ಒಂದರಲ್ಲಿ ನರಕ, ಇನ್ನೊಂದರಲ್ಲಿ ನೆಮ್ಮದಿ. ನೆಮ್ಮದಿ = ಜಗತ್ತು ಬದಲಾಗೋದು ಅಲ್ಲ. “ಜಗತ್ತು ಬದಲಾಗಬೇಕು” ಅನ್ನೋ ಬೇಡಿಕೆ ನಿಲ್ಲೋದು.

3. ಹಾಗಾದರೆ ಮನಸ್ಸನ್ನು ನೆಮ್ಮದಿಯ ತಾಣ ಮಾಡೋದು ಹೇಗೆ?

3 ಕೀಲಿಗಳಿವೆ ಕೀಲಿ 1: ಇರೋದರ ಜೊತೆ ಜಗಳ ಬೇಡ. ಮಳೆ ಬಂತು! “ಛೆ ಮಳೆ” ಅನ್ನಬೇಡ. ಕೊಡೆ ಹಿಡಿ, ಅಥವಾ ನೆನೆ. ಅಷ್ಟೇ.
ನೋವು ಬಂತು! “ಯಾಕೆ ನನಗೆ” ಅನ್ನಬೇಡ. “ಓಹ್, ನೋವು” ಅಂತ ಅನುಭವಿಸು. ಜಗಳವೇ ದೊಡ್ಡ ನೋವು. ಒಪ್ಪಿಕೊಂಡರೆ ಅರ್ಧ ನೋವು ಹೋಯ್ತು. ಇದೇ “ಶಿಕಾಂತಾಜಾ” – ಬರೀ ಕೂರುವುದು.
ಕೀಲಿ 2: ಹಿಂದಕ್ಕೆ-ಮುಂದಕ್ಕೆ ಓಡಬೇಡ. ಮನಸ್ಸು ಯಾವಾಗಲೂ “ನಿನ್ನೆ” ಅಥವಾ “ನಾಳೆ” ಓಡುತ್ತೆ. ನೆಮ್ಮದಿ “ಇವತ್ತು”, “ಈ ಕ್ಷಣ” ಇರುತ್ತೆ.
ಊಟ ಮಾಡುವಾಗ ಊಟ ಮಾಡು. ನಡೆವಾಗ ನಡೆ. ಕುಡಿಯುವಾಗ ನೀರಿನ ರುಚಿ ನೋಡು. ಮನಸ್ಸು ಈ ಕ್ಷಣಕ್ಕೆ ಬಂದರೆ ಸ್ವರ್ಗಕ್ಕೆ ಬಂದಂತೆ. ಬುದ್ಧ “ಅಪ್ಪಮಾದೋ ಅಮತ ಪದಂ” ಅಂದ – ಎಚ್ಚರವೇ ಅಮೃತದ ದಾರಿ.
ಕೀಲಿ 3: “ನಾನು” ಅನ್ನೋನನ್ನು ಕೆಳಗಿಳಿಸು. ಎಲ್ಲ ಗಲಾಟೆ “ನನಗೆ” ಆಗುತ್ತೆ. “ನನ್ನ” ಮರ್ಯಾದೆ, “ನನ್ನ” ಲಾಭ, “ನನ್ನ” ಸೋಲು. ಈ “ನಾನು” ಅನ್ನುವ ಕುರ್ಚಿಯಿಂದ ಇಳಿದರೆ ರಾಜನೂ ಅಲ್ಲ, ಭಿಕ್ಷುಕನೂ ಅಲ್ಲ. ಯಾರಿಗೂ ನೋವಾಗಲ್ಲ.

ಇದನ್ನೂ ಓದಿ: JCI ಬಂಟ್ವಾಳದಿಂದ ಶ್ರೀನಿವಾಸ್ ಅರ್ಬಿಗುಡ್ಡೆ ಅವರಿಗೆ ‘ಸಾಧನಶ್ರೀ’ ಪುರಸ್ಕಾರ

“ಯಾರಿಗೆ ನೆಮ್ಮದಿ ಬೇಕು?” ಅಂತ ಕೇಳು. ಉತ್ತರ ಸಿಗಲ್ಲ. ಕೇಳೋನೇ ಕರಗಿದರೆ ಉಳಿಯೋದು ನೆಮ್ಮದಿ ಮಾತ್ರ. ರಿಂಜಾಯ್ ಕೂಗಿದ: “ಕಟ್ಸ್!” ಶಿಷ್ಯನ ಯೋಚನೆ ಕಟ್ ಆಯಿತು. ಆ ಕ್ಷಣ ಮನಸ್ಸು ಖಾಲಿ. ಖಾಲಿ ಮನಸ್ಸೇ ನೆಮ್ಮದಿ. ಸಾರ | ಮನೆಯ ಸೂತ್ರ ಮನಸ್ಸು = ಮನೆ. ನೀನು ಮನೆಯ ಯಜಮಾನ.

ಯೋಚನೆ = ಅತಿಥಿ. ಬರುತ್ತಾರೆ, ಹೋಗುತ್ತಾರೆ. ಅತಿಥಿಗೆ ಮನೆ ಒಪ್ಪಿಸಬೇಡ. ಜಗಳ ಆಗುತ್ತೆ, ಅಂಟಿಕೊಳ್ಳಬೇಡ. ಮನೆ ಸ್ವಚ್ಛ ಇಟ್ಟರೆ ಸ್ವರ್ಗ. ಕಸ ತುಂಬಿದರೆ ನರಕ. ಗುಡಿಸಿ. ಯಾರು? ನೀವೇ. ಪೊರಕೆ ಯಾವುದು? ಎಚ್ಚರ.

ಕೂನ್: ನೆಮ್ಮದಿ ಹುಡುಕುತ್ತಿರೋ ಮನಸ್ಸು ಎಲ್ಲಿದೆ?
ಅದನ್ನು ನೋಡಿದ ಕ್ಷಣ ಹುಡುಕಾಟ ನಿಲ್ಲುತ್ತೆ. ನೆಲೆ ನಿಲ್ಲೋದೇ ನೆಮ್ಮದಿ. ಹೊರಗೆ ದೇವಸ್ಥಾನ ಬೇಡ. ಒಳಗೆ ಕಣ್ಣು ಮುಚ್ಚು.
ಉಸಿರು ಬರುತ್ತೆ… ಹೋಗುತ್ತೆ… ನಡುವೆ ಜಾಗ ಇದೆ. ಅದೇ ತಾಣ. ಅದೇ ನೀನು. ಬೇರೆ ತಾಣ ಇಲ್ಲ. ಇದೇ ಝೆನ್. ಇದೇ ನೆಮ್ಮದಿ. ಯಾರು ತನ್ನ ಮನಸ್ಸಿನಲ್ಲಿ ತಾಣ = ಸ್ಥಳ ಕಳೆದುಕೊಳ್ಳುತ್ತಾರೋ ಅಂಥವರು ಒಂದು ಕ್ಷಣವೂ ಬದುಕಲಾರರು. ಇಡೀ ದಿನ ಕಾರ್ಯನಿಮಿತ್ತ ಅಂಡೆಲುಯುವ ದುಡಿಯುವವರು ರಾತ್ರಿ ಆಗುತ್ತಿದ್ದಂತೆ ಮನೆ ಎಂಬ ಗೂಡು ಸೇರಿಕೊಳ್ಳಲೇಬೇಕು. ಯಾಕೆ? ಆ ಗೂಡಲ್ಲಿ ನೆಮ್ಮದಿ ಇದೆ ಅಂತ. ಅಲ್ಲೂ ನೆಮ್ಮದಿ ಕಳೆದುಕೊಂಡರೆ ಒಂದು ಮರದ ಬುಡದಲ್ಲಿ ಬದುಕು ಕಟ್ಟಿಕೊಳ್ಳಬಹುದು ಎಂಬ ಭರವಸೆ. ಆ ಭರವಸೆಯೂ ಕಳೆದುಹೋದರೆ ಮಗಿತು. ಅಂದರೆ ಏನೇ ಆದರೂ ನನ್ನ ಜೊತೆ ನಾನಿದ್ದೇನೆ ಇದ್ದೇನೆ ಅನ್ನುವ ಭರವಸೆಯ ಮನಸ್ಸು. ಅದೂ ಕಳೆದು ಹೋದರೆ ಏನು? ಆಗಲೇ ಮನುಷ್ಯ ಅಸುನೀಗೋದು.

ಇದನ್ನೂ ಓದಿ: ಉದ್ಯಾನವನದ ಜಾಗದ ಮೇಲೆ ಸರ್ಕಾರದ ಹೊಸ ಕಣ್ಣು? ಶೇ.5ರಷ್ಟು ಬಳಕೆಗೆ ಅನುಮತಿ

ಕೊನೆ ಮಾತು:
ಅಸು ಇದೆ. ತಾಣ ಕಳೆದುಕೊಂಡು ಅಸುನೀಗಬೇಡ. ನಿನ್ನ ಸ್ಥಳವನ್ನು ಯಾವುದಕ್ಕೂ ಬಿಟ್ಟುಕೊಡಬೇಡ. ನಿನ್ನಲ್ಲಿ ನೀನಿರು.


ಸೋಸಲೆ ಗಂಗಾಧರ್‌ – 9482169330

Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading