ತುಮಕೂರು: ಪಾವಗಡ ತಾಲ್ಲೂಕು ವ್ಯಾಪ್ತಿಯ ವೈ.ಎನ್ ಹೊಸಕೋಟೆ ಹೋಬಳಿಯ ಪೋತಗಾನಹಳ್ಳಿ ಗ್ರಾಮ ಪಂಚಾಯಿತಿಯ ದಳವಾಯಿಹಳ್ಳಿ ಗ್ರಾಮದಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಗ್ರಾಮದಲ್ಲಿ ನೀರಿನ ಸಮಸ್ಯೆ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಪತ್ರ ಸಲ್ಲಿಸಿದ್ದರೂ ಸಮಸ್ಯೆ ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ ಗ್ರಾಮಸ್ಥರಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ವಕೀಲರು ಹಾಗೂ ಭಾರತೀಯ ಪರಿವರ್ತನ ಸಂಘ-BPS ರಾಜ್ಯಾಧ್ಯಕ್ಷರಾದ ಪ್ರೊ. ಹರಿರಾಮ್ ಎ ಅವರು ಮಾನವೀಯತೆ ಮೆರೆದಿದ್ದು, ತಾತ್ಕಾಲಿಕವಾಗಿ ನೀರಿನ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದ್ದಾರೆ. ಗ್ರಾಮದ ಬಿಪಿಎಸ್ ಮುಖಂಡರಾದ ಅಂಜಿ ಹಾಗೂ ಕಾರ್ಯಕರ್ತರ ಸಹಕಾರದೊಂದಿಗೆ ಟ್ಯಾಂಕರ್ ಮೂಲಕ ಗ್ರಾಮಸ್ಥರಿಗೆ ಕುಡಿಯುವ ನೀರನ್ನು ಪೂರೈಸಲಾಯಿತು.
ರಾಜ್ಯದಲ್ಲಿ ಈ ಬಾರಿ ಬೇಸಿಗೆಯ ತೀವ್ರತೆಗೆ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದ್ದು, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬೋರ್ವೆಲ್ಗಳು ಒಣಗಿರುವ ವರದಿಗಳು ಹೊರಬಿದ್ದಿವೆ. ಸರ್ಕಾರ ಹಲವು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿರುವುದಾಗಿ ವರದಿಗಳು ತಿಳಿಸಿವೆ.
ಪಾವಗಡ ಭಾಗದಲ್ಲಿ ನೀರಿನ ಸಮಸ್ಯೆ ಹೊಸದಲ್ಲ. ಈ ಹಿಂದೆ ಕೂಡ ಪಾವಗಡ ತಾಲ್ಲೂಕಿನ ನೀರಿನ ಬಿಕ್ಕಟ್ಟನ್ನು “ಮಾನವೀಯ ಸಮಸ್ಯೆ”ಯಾಗಿ ಪರಿಗಣಿಸಿ ಪರಿಹರಿಸಬೇಕೆಂದು ಹೈಕೋರ್ಟ್ ಸೂಚಿಸಿದ್ದ ಘಟನೆ ನಡೆದಿದೆ.
ದಳವಾಯಿಹಳ್ಳಿ ಗ್ರಾಮಸ್ಥರು ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಡಳಿತ ಹಾಗೂ ಪಂಚಾಯಿತಿ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಈ ನಡುವೆ ಪ್ರೊ ಹರಿರಾಮ್ ಮಾರ್ಗದರ್ಶನದಲ್ಲಿ ನೀರಿನ ಬಿಪಿಎಸ್ ನ ಯುವಕರು ಸಮಸ್ಯೆ ಬಗೆಹರಿಸಲು ಮುಂದಾಗಿರುವುದು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.