ಬೀದರ್: ಜಿಲ್ಲೆಯ ಅಭಿವೃದ್ಧಿ ಸಂಬಂಧಿತ ವಿಚಾರಗಳ ಚರ್ಚೆಗೆಂದು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕೆಡಿಪಿ (KDP) ಸಭೆ ವೇಳೆ ಭಾರೀ ಗಲಾಟೆ ಉಂಟಾಗಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿದೆ. ಸಭೆಯ ಮಧ್ಯೆಯೇ ಬಿಜೆಪಿ ಶಾಸಕ ಹಾಗೂ ಕಾಂಗ್ರೆಸ್ ಎಂಎಲ್ಸಿ ನಡುವೆ ಮಾತಿನ ಚಕಮಕಿ ಕೈಕೈ ಮಿಲಾಯಿಸುವ ಮಟ್ಟಕ್ಕೆ ತಲುಪಿದ್ದು, ಕೆಲಕಾಲ ಸಭಾಂಗಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ಘಟನೆಯ ವಿಶೇಷವೆಂದರೆ, ಬೀದರ್ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರ ಸಮ್ಮುಖದಲ್ಲೇ ಈ ಹೈಡ್ರಾಮಾ ನಡೆದಿದ್ದು, ಅಧಿಕಾರಿಗಳು ಹಾಗೂ ಇತರ ಜನಪ್ರತಿನಿಧಿಗಳು ಮಧ್ಯ ಪ್ರವೇಶಿಸಿ ಇಬ್ಬರನ್ನೂ ಶಾಂತಗೊಳಿಸುವ ಪ್ರಯತ್ನ ನಡೆಸಿದರು. ಬಳಿಕ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಸಾರ್ವಜನಿಕ ವೇದಿಕೆಯಲ್ಲಿ ಇಂತಹ ವರ್ತನೆ ಶೋಭೆ ತರುವುದಿಲ್ಲ ಎಂದು ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಿದರು ಎನ್ನಲಾಗಿದೆ.
ಕೆಡಿಪಿ ಸಭೆ ಜಿಲ್ಲೆಯ ಅಭಿವೃದ್ಧಿ, ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕೆಂದೇ ಆಯೋಜಿಸಲಾಗುತ್ತದೆ. ಆದರೆ ರಾಜಕೀಯ ಗಲಾಟೆಯಿಂದ ಸಭೆಯ ಉದ್ದೇಶವೇ ಹಿಂಜರಿಯುತ್ತಿದೆ ಎಂಬ ಆಕ್ಷೇಪಗಳು ಕೇಳಿಬಂದಿವೆ.
ವರದಿ: ಅರವಿಂದ ಮಲ್ಲೀಗೆ