ಬೆಂಗಳೂರು / ಮುಂಬೈ: ಭಗವಾನ್ ಬುದ್ಧರ ಜೀವನ, ತತ್ವ ಹಾಗೂ ಮಾನವೀಯ ಸಂದೇಶವನ್ನು ಸಂಗೀತದ ಮೂಲಕ ಸಾರುವ ‘ಸಿದ್ಧಾರ್ಥ ಗೌತಮನು ಈ ಭೂಮಿ ಬೆಳಗಿದನು’ ಎಂಬ ವಿಶೇಷ ಗೀತಾಗಾನ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಖ್ಯಾತ ಹಿನ್ನೆಲೆ ಗಾಯಕ ಕುನಾಲ್ ಗಂಜಾವಾಲಾ ಅವರ ಮನಮೋಹಕ ಧ್ವನಿಯಲ್ಲಿ ಈ ಹಾಡು ರೂಪುಗೊಂಡಿದ್ದು, ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿದೆ.
ಈ ಹಾಡಿನ ರೆಕಾರ್ಡಿಂಗ್ ಕಾರ್ಯ ಇತ್ತೀಚೆಗೆ ಮುಂಬೈನಲ್ಲಿ ಯಶಸ್ವಿಯಾಗಿ ನಡೆಯಿತು. ಸಮಾಜಮುಖಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಬಿವಿಎಸ್ನ ಮಾರ್ಗದರ್ಶಕರು ಹಾಗೂ ಅಕ್ಕ ಐಎಎಸ್ ಅಕಾಡಮಿಯ ಮುಖ್ಯಸ್ಥರಾದ ಡಾ. ಶಿವಕುಮಾರ್ ಅವರ ಸಾರಥ್ಯದಲ್ಲಿ , ಭಾರತೀಯ ವಿದ್ಯಾರ್ಥಿ ಸಂಘ (ಬಿವಿಎಸ್)ದ ಸಹಯೋಗದಲ್ಲಿ ಈ ಗೀತಾಗಾನವನ್ನು ಬಿಡುಗಡೆಗೊಳಿಸಲಾಗುತ್ತಿದೆ. ಡಾ. ಶಿವಕುಮಾರ್ ಅವರೇ ಈ ಹಾಡಿನ ಸಾಹಿತ್ಯ ರಚನೆ ಮಾಡಿದ್ದು, ಬುದ್ಧನ ಅಹಿಂಸೆ, ಶಾಂತಿ, ಕರುಣೆ ಮತ್ತು ಸಮಾನತೆಯ ಸಂದೇಶಗಳನ್ನು ಆಳವಾಗಿ ಪ್ರತಿಬಿಂಬಿಸಿದ್ದಾರೆ.

ಹಾಡಿಗೆ ಸಂಗೀತ ಸಂಯೋಜನೆ ನೀಡಿರುವವರು ಸಿದ್ದೇಶ್ ಬದನವಾಳು. ಅವರ ಸಂಗೀತ ಸಂಯೋಜನೆ ಬುದ್ಧನ ಜೀವನಯಾತ್ರೆಯ ಭಾವನಾತ್ಮಕತೆ ಮತ್ತು ತಾತ್ವಿಕತೆಯನ್ನು ಶ್ರೋತೃಗಳ ಮನಸ್ಸಿಗೆ ತಲುಪಿಸುವಂತೆ ರೂಪುಗೊಂಡಿದೆ ಎಂದು ಹೇಳಲಾಗುತ್ತಿದೆ.
ಈ ಗೀತಾಗಾನವನ್ನು ಸದ್ಯ ‘ಪದ್ಮಪಾಣಿ’ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆಗೊಳಿಸಲಾಗಲಿದ್ದು, ಬುದ್ಧ ಅನುಯಾಯಿಗಳು, ಸಂಗೀತಾಸಕ್ತರು ಹಾಗೂ ಸಮಾಜಚಿಂತಕರು ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಬುದ್ಧನ ಸಂದೇಶಗಳನ್ನು ಹೊಸ ತಲೆಮಾರಿಗೆ ತಲುಪಿಸುವ ಉದ್ದೇಶದಿಂದ ಕೈಗೊಂಡಿರುವ ಈ ಸಂಗೀತ ಪ್ರಯತ್ನವು ಸಾಂಸ್ಕೃತಿಕವಾಗಿ ಮಹತ್ವ ಪಡೆದುಕೊಳ್ಳಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಭಗವಾನ್ ಬುದ್ಧರ ತತ್ವಗಳನ್ನು ಸಂಗೀತದ ಮೂಲಕ ಸಮಾಜಕ್ಕೆ ತಲುಪಿಸುವ ಈ ಗೀತಾಗಾನ ಕೇವಲ ಹಾಡಾಗಿಯೇ ಅಲ್ಲದೆ, ಶಾಂತಿ, ಸಹಾನುಭೂತಿ ಮತ್ತು ಮಾನವೀಯತೆಯ ಸಂದೇಶವಾಗಿ ಮೂಡಿಬರುವ ನಿರೀಕ್ಷೆಯಿದೆ.

