ಧರ್ಮಸ್ಥಳ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಅರ್ಕ ರೆಸಾರ್ಟ್ & ಕನ್ವೆನ್ಸನ್ ಹಾಲ್ ವಸತಿ ಗೃಹದಲ್ಲಿ ಅತಿಥಿಯೊಬ್ಬರು ಅಸಹಜವಾಗಿ ಮೃತಪಟ್ಟ ಘಟನೆ ವರದಿಯಾಗಿದೆ.
ಮೃತ ವ್ಯಕ್ತಿಯನ್ನು ಶೈಲ ಸುನಾಗಾರ್ ಎಂದು ಗುರುತಿಸಲಾಗಿದ್ದು, ಅವರು ದಿನಾಂಕ 03-01-2026 ರಂದು ಅರ್ಕ ರೆಸಾರ್ಟ್ಗೆ ಆಗಮಿಸಿ ಎರಡು ದಿನಗಳ ಅವಧಿಗೆ ರೂಮ್ ಬುಕ್ ಮಾಡಿಕೊಂಡಿದ್ದರು. ಅವರಿಗೆ ರೂಮ್ ನಂಬರ್ 12 ಅನ್ನು ನೀಡಲಾಗಿತ್ತು.
ಈ ಕುರಿತು ರೆಸಾರ್ಟ್ನ ಮ್ಯಾನೇಜರ್ ಆಗಿರುವ ಪ್ರದೀಪ ಕುಮಾರ್ (39), ತಂದೆ ಕೃಷ್ಣ ನಾಯ್ಕ, ವಾಸ: ಪಾದೆ ಮನೆ, ಕಜೆ ಕಾರ್ಕಳ, ಮಿಯಾರು, ಬೋರ್ ಕಟ್ಟೆ, ಉಡುಪಿ ಜಿಲ್ಲೆ ಎಂಬವರು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಪ್ರಕಾರ, ದಿನಾಂಕ 05-01-2026 ರಂದು ಬೆಳಿಗ್ಗೆ ಸುಮಾರು 8.00 ಗಂಟೆಗೆ ಶೈಲ ಸುನಾಗಾರ್ ಅವರು ತಮ್ಮ ರೂಮಿಗೆ ಟೀ ತರಿಸಿಕೊಂಡು ಕುಡಿದಿದ್ದರು. ನಿಗದಿತ ಸಮಯವಾದ ಮದ್ಯಾಹ್ನ 12.00 ಗಂಟೆಯಾದರೂ ಅವರು ರೂಮ್ ಖಾಲಿ ಮಾಡದೇ ಇದ್ದ ಕಾರಣ ಮ್ಯಾನೇಜರ್ ಅವರು 12.30 ಗಂಟೆಗೆ ಅವರ ಮೊಬೈಲ್ಗೆ ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ.
ಅನುಮಾನಗೊಂಡ ಮ್ಯಾನೇಜರ್ ಅವರು ರೂಮ್ ಬಾಯ್ ಜೊತೆಗೆ 13.00 ಗಂಟೆಗೆ ರೂಮ್ ಬಳಿ ತೆರಳಿ ಪರಿಶೀಲಿಸಿದಾಗ, ರೂಮ್ ಒಳಗಿನಿಂದ ಚಿಲಕ ಹಾಕಿರುವುದು ಕಂಡುಬಂದಿತು. ಹಿಂಬದಿ ಬಾತ್ರೂಮ್ ಕಿಟಕಿಯಿಂದ ನೋಡಿದಾಗ ಶೈಲ ಸುನಾಗಾರ್ ಅವರು ಬಾತ್ರೂಮಿನಲ್ಲಿ ಬಿದ್ದಿರುವುದು ಗೋಚರಿಸಿತು.
ತಕ್ಷಣ ಬಾಗಿಲು ತೆರೆದು ಒಳಗೆ ಹೋಗಿ ಪರಿಶೀಲಿಸಿದಾಗ, ಅವರು ಮೃತಪಟ್ಟಿರುವುದು ದೃಢಪಟ್ಟಿದೆ. ಪ್ರಾಥಮಿಕವಾಗಿ ಅವರು 05-01-2026 ರಂದು ಬೆಳಿಗ್ಗೆ 8.00 ರಿಂದ ಮಧ್ಯಾಹ್ನ 13.00 ಗಂಟೆಯ ಅವಧಿಯಲ್ಲಿ ಹೃದಯಾಘಾತದಿಂದಲೋ ಅಥವಾ ಇನ್ನಿತರ ಕಾರಣಗಳಿಂದಲೋ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ: 03/2026, ಕಲಂ 194 ಬಿ.ಎನ್.ಎಸ್.ಎಸ್. 2023 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.