ಪುತ್ತೂರು: ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಸರೋಳಿ ಮನೆ ನಿವಾಸಿ ಅಬೂಬಕ್ಕರ್ ರಾಶಿಕ್ (28), ತಂದೆ ಇಸ್ಮಾಯಿಲ್ ಅವರ ದೂರಿನ ಮೇರೆಗೆ ಸಾಲದ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಚಾಕು ಇರಿತ ಪ್ರಕರಣವನ್ನು ಪುತ್ತೂರು ನಗರ ಪೊಲೀಸ್ ಠಾಣೆ ದಾಖಲಿಸಿಕೊಂಡಿದೆ.
ಸೂರಜ್ ಎಂಬವರು ಕೆಎ–15–ಎನ್–0590 ಸಂಖ್ಯೆಯ ವಾಹನದ ಮಾಲೀಕರಾಗಿದ್ದು, ಸಾಲದ ಬಾಕಿ ಹಣವನ್ನು ಪಾವತಿಸದೇ ಇದ್ದ ಹಿನ್ನೆಲೆಯಲ್ಲಿ ಶ್ರೀರಾಮ್ ಫೈನಾನ್ಸ್ ಸಂಸ್ಥೆಯವರು ಆ ವಾಹನವನ್ನು ಜಪ್ತಿ ಮಾಡಿದ್ದರು. ನಂತರ ಅಬೂಬಕ್ಕರ್ ರಾಶಿಕ್ ಅವರು ಬಾಕಿ ಹಣವನ್ನು ಪಾವತಿಸಿ, ಶ್ರೀರಾಮ್ ಫೈನಾನ್ಸ್ ಸಂಸ್ಥೆಯಿಂದ ಆ ವಾಹನವನ್ನು ಬಿಡುಗಡೆ ಮಾಡಿಸಿಕೊಂಡಿದ್ದರು.
ಈ ವಿಚಾರದಿಂದ ಅಸಮಾಧಾನಗೊಂಡ ಸೂರಜ್ ಹಾಗೂ ಇನ್ನಿತರ 7–8 ಮಂದಿ ದಿನಾಂಕ 07-01-2026ರ ಮಧ್ಯರಾತ್ರಿ ಸತ್ತಿಕಲ್ಲು ಭಾರತ್ ಪೆಟ್ರೋಲ್ ಪಂಪ್ ಬಳಿ ಅಕ್ರಮ ಕೂಟವಾಗಿ ಸೇರಿ ಅಬೂಬಕ್ಕರ್ ರಾಶಿಕ್ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಸೂರಜ್ ಅವರು ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಗಾಯಗೊಂಡ ಅಬೂಬಕ್ಕರ್ ರಾಶಿಕ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಅವರ ಜೀವಕ್ಕೆ ಅಪಾಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ 07-01-2026ರಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 04/2026ರಂತೆ ಕಲಂ 189(2), 191(2), 191(3), 115(2), 118, 109 ಹಾಗೂ 190 (BNS–2023) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.