ಬೆಳ್ತಂಗಡಿ : ಕನ್ಯಾಡಿ–1 ಗ್ರಾಮದ ಅಂಡೀರುಮಾರು ನಿವಾಸಿ ಮಂಜಪ್ಪ ನಾಯ್ಕ (62) ಅವರ ಮೇಲೆ ಚಿರತೆಯೊಂದು ದಾಳಿ ನಡೆಸಿದ ಘಟನೆ ಜ.16 ರಂದು ಬೆಳಿಗ್ಗೆ 8.15ರ ಸುಮಾರಿಗೆ ಸಂಭವಿಸಿದೆ.
ಮಂಜಪ್ಪ ನಾಯ್ಕ ಅವರು ಮನೆಯ ಅಂಗಳದ ಪಕ್ಕದಲ್ಲಿರುವ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ, ಅಚಾನಕ್ ಚಿರತೆ ದಾಳಿ ನಡೆಸಿದೆ. ತಕ್ಷಣ ಪ್ರಾಣ ರಕ್ಷಣೆಗಾಗಿ ಹತ್ತಿರದ ಅಡಿಕೆ ಮರಕ್ಕೆ ಏರಿದ ಪರಿಣಾಮ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ದಾಳಿಯ ವೇಳೆ ಅವರ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಮಾಹಿತಿ ಪಡೆದ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಅವರು ಸಿಬ್ಬಂದಿಯೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಆರೋಗ್ಯ ವಿಚಾರಿಸಿದರು. ಬಳಿಕ ದಾಳಿ ನಡೆದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಪರಿಶೀಲನೆ ವೇಳೆ ಅಡಿಕೆ ಮರದಲ್ಲಿ ಚಿರತೆ ಪರಚಿದ ಉಗುರಿನ ಹಲವು ಗುರುತುಗಳು ಪತ್ತೆಯಾಗಿವೆ. ಇವು ಚಿರತೆಯದ್ದೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತಜ್ಞರಿಂದ ವರದಿ ಪಡೆಯಲಾಗುವುದಾಗಿ ಅರಣ್ಯ ಇಲಾಖೆ ತಿಳಿಸಿದೆ.
ಸ್ಥಳೀಯರು ಸೂಚಿಸಿದ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮವಾಗಿ ಚಿರತೆ ಸೆರೆ ಹಿಡಿಯಲು ಬೋನು ಅಳವಡಿಸಲಾಗುವುದು. ಅಲ್ಲದೆ ಕಾಡುಪ್ರಾಣಿಗಳ ಚಲನವಲನ ಕಂಡುಬಂದರೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಡಿ.ಆರ್.ಎಫ್.ಒ ರಾಕೇಶ್, ಅರಣ್ಯ ಸಿಬ್ಬಂದಿಗಳಾದ ರಾಘವೇಂದ್ರ, ಸಂದೀಪ್, ಕಿರಣ್ ಪಾಟೀಲ್, ಗಸ್ತು ಅರಣ್ಯ ಪಾಲಕ ಪ್ರತಾಪ್ ಕುಮಾರ್, ಪರಶುರಾಮ್ ಹಾಗೂ ಚಾಲಕ ದಿವಾಕರ್ ಉಪಸ್ಥಿತರಿದ್ದರು.


