ಮಾಣಿ: ಅನಂತಾಡಿ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ದಲಿತ ಮಹಿಳೆ ಸೇಸಮ್ಮ ಅವರಿಗೆ ಜಾತಿ ನಿಂದನೆ ನಡೆಸಿ, ಕೆಲಸ ನಿರ್ವಹಿಸಲು ಅವಕಾಶ ನೀಡದೇ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂಬ ಆರೋಪ ಕುರಿತು ಪ್ರಜಾಪರ ನ್ಯೂಸ್ ನಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಪ್ರಕರಣಕ್ಕೆ ಮಹತ್ವದ ಬೆಳವಣಿಗೆ ಕಂಡುಬಂದಿದೆ.
ಕಳೆದ ಸುಮಾರು ಒಂದು ತಿಂಗಳಿನಿಂದ ಕಂಪ್ಯೂಟರ್ ಪಾಸ್ವರ್ಡ್ ನೀಡದೇ ಹಾಗೂ ಸ್ಟಾಕ್ ವ್ಯತ್ಯಾಸದ ಗೊಂದಲ ಸೃಷ್ಟಿಸಿ ತಪ್ಪಿಗೆ ಸಿಲುಕುವಂತೆ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿತ್ತು. ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ದಿನೇಶ್ ಮುಳೂರು ಅವರ ನೇತೃತ್ವದಲ್ಲಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿಯ ಸ್ಥಾಪಕಾಧ್ಯಕ್ಷ ಬಿ.ಕೆ. ಸೇಸಪ್ಪ ಬೆದ್ರಕಾಡು ಅವರ ಸಹಯೋಗದೊಂದಿಗೆ ಸಂಘದ ಅಧ್ಯಕ್ಷ ಪುಷ್ಪರಾಜ್ ಚೌಟ ಹಾಗೂ ಕಾರ್ಯನಿರ್ವಹಣಾಧಿಕಾರಿ ಯಶೋಧರ ಅವರೊಂದಿಗೆ ಮಾತುಕತೆ ನಡೆಸಲಾಯಿತು.
ಬಳಿಕ ಅಧಿಕಾರಿಗಳ ಸಮ್ಮುಖದಲ್ಲಿ ದಾಸ್ತಾನು ಲೆಕ್ಕ ಪರಿಶೀಲನೆ ನಡೆಸಿ ಸೇಸಮ್ಮ ಅವರಿಗೆ ಕಂಪ್ಯೂಟರ್ ಪಾಸ್ವರ್ಡ್ ಹಸ್ತಾಂತರಿಸಲಾಯಿತು. ಈ ಮೂಲಕ ಹಲವು ದಿನಗಳಿಂದ ಮುಂದುವರಿದಿದ್ದ ಗೊಂದಲ ಹಾಗೂ ಕೆಲಸ ನಿರ್ವಹಣೆಗೆ ಇದ್ದ ಅಡ್ಡಿ ಸಮಸ್ಯೆಗಳು ಬಗೆಹರಿದಿವೆ ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಫಾಯಿ ಕರ್ಮಚಾರಿ ವಿಭಾಗದ ಅಧ್ಯಕ್ಷ ಪ್ರೇಮ್ ಬಲ್ಲಾಳ್ ಭಾಗ್, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಕಾರ್ಯದರ್ಶಿಗಳಾದ ರವಿ ಸುಂಕದಕಟ್ಟೆ ಹಾಗೂ ಪ್ರೀತಮ್ ಪಲ್ಲಮಜಲು, ಶಶಿಧರ್ ಕಾಡುಮಠ, ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಗೋಪಾಲ್ ಕೆ. ನೇರಳಕಟ್ಟೆ, ಸಂಜೀವ, ಗುರುಪ್ರಸಾದ್ ಮುಳೂರು, ಗೌತಮ್ ಬಾಕ್ರಬೈಲು, ಗೀತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಕರಣವನ್ನು ಬೆಳಕಿಗೆ ತಂದು ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯುವಲ್ಲಿ ಪ್ರಜಾಪರ ನ್ಯೂಸ್ ವರದಿ ಪ್ರಮುಖ ಪಾತ್ರ ವಹಿಸಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ನೇರಳಕಟ್ಟೆಯಲ್ಲೊಂದು ಅಮಾನವೀಯ ಘಟನೆ..| ದಲಿತ ಕ್ಲರ್ಕ್ ಸೇಸಮ್ಮನನ್ನು ಪೀಡಿಸುತ್ತಿರುವ ಸೊಸೈಟಿ ಆಡಳಿತ ವರ್ಗ