‘ವೆಕ್ಸನ್’ ಹಾಗೂ ಬಿಎಂಪಿ ಕಂಪೆನಿಗಳ ಹೆಸರಿನಲ್ಲಿ ನಡೆಯುತ್ತಿದ್ದ ಈ ದಂಧೆಗೆ ನೂರಾರು ವಿದ್ಯಾರ್ಥಿಗಳು ಬಲಿಯಾಗಿದ್ದಾರೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಮಂಗಳೂರು: ಉದ್ಯೋಗದ ಆಮಿಷವೊಡ್ಡಿ ವಿದ್ಯಾರ್ಥಿಗಳಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ ಪ್ರಕರಣ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಕುದ್ರೋಳಿ ಅಳಕೆ ಪ್ರದೇಶದಲ್ಲಿರುವ ಶ್ರೇಯಾ ಸ್ವೀಟ್ಸ್ ಎದುರಿನ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಾರಾಷ್ಟ್ರ ಮೂಲದ ‘ವೆಕ್ಸನ್’ ಹಾಗೂ ಬಿಎಂಪಿ ಎಂಬ ಹೆಸರಿನ ನೆಟ್ವರ್ಕಿಂಗ್ ಸಂಸ್ಥೆಯು ಇಂಟರ್ನ್ಶಿಪ್ ಹೆಸರಿನಲ್ಲಿ ನೂರಾರು ವಿದ್ಯಾರ್ಥಿಗಳನ್ನು ಬಲೆಗೆ ಬೀಳಿಸಿಕೊಂಡು ಹಣ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.
ಈ ಕುರಿತು ಮಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಸ್ವಸ್ತಿಕ ಕಾಲೇಜಿನ ವಿದ್ಯಾರ್ಥಿಗಳು ಪತ್ರಿಕಾಗೋಷ್ಠಿ ನಡೆಸಿ ಸಂಸ್ಥೆಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಚೈನ್ ಲಿಂಕ್ ಕಂಪೆನಿಯ ಅವ್ಯವಹಾರ ಕುರಿತು ಮಾತನಾಡಿದ ಎಬಿವಿಪಿ ಬೆಂಬಲಿತ ಸರ್ವ ಕಾಲೇಜು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಮುಳಿಯ ಸಾತ್ವಿಕ್ ಅವರು, “ಪದವಿ ಓದುತ್ತಿರುವ ಅಥವಾ ಪದವಿ ಪೂರ್ಣಗೊಳಿಸಿರುವ ಯುವಕರಿಗೆ ಮಾಸಿಕ ₹30,000 ವೇತನದ ಆಮಿಷವೊಡ್ಡಿ ಸಂಸ್ಥೆ ಉದ್ಯೋಗಕ್ಕೆ ಆಹ್ವಾನಿಸುತ್ತಿತ್ತು. ಆದರೆ ಉದ್ಯೋಗದ ನಿರೀಕ್ಷೆಯೊಂದಿಗೆ ಬಂದ ಪ್ರತಿಯೊಬ್ಬ ವಿದ್ಯಾರ್ಥಿಯಿಂದ ಇಂಟರ್ನ್ಶಿಪ್ ಶುಲ್ಕದ ಹೆಸರಿನಲ್ಲಿ ಸುಮಾರು ₹51,000 ವರೆಗೆ ಹಣ ವಸೂಲಿ ಮಾಡಲಾಗಿದೆ” ಎಂದು ಆರೋಪಿಸಿದರು.
‘ವೆಕ್ಸನ್’ ಹಾಗೂ ಬಿಎಂಪಿ ಕಂಪೆನಿಗಳ ಹೆಸರಿನಲ್ಲಿ ನಡೆಯುತ್ತಿದ್ದ ಈ ದಂಧೆಗೆ ನೂರಾರು ವಿದ್ಯಾರ್ಥಿಗಳು ಬಲಿಯಾಗಿದ್ದಾರೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಮಂಗಳೂರಿನಂತಹ ಪ್ರಬುದ್ಧ ನಗರದಲ್ಲಿ ಹೊರರಾಜ್ಯದ ಕಂಪನಿಯೊಂದು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಇಂತಹ ಚೈನ್ ಲಿಂಕ್ ಮಾದರಿಯ ವಂಚನೆ ನಡೆಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದರು.
ಈ ಸಂಬಂಧ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ವಂಚನೆಗೊಳಗಾದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕೃಷ್ಣ, ಪ್ರೀತೇಶ್, ಸಿಂಚನ, ಸಿಂಧು ಹಾಗೂ ಎನ್ಎಸ್ಯುಐ ಸಂಘಟನೆಯ ಕ್ರಿಸ್ಟನ್ ಮಿನೆಜಸ್ ಉಪಸ್ಥಿತರಿದ್ದರು.