ಲೇಖನ: ಹರಿರಾಮ್. ಎ – ವಕೀಲರು
ಭಾರತದಲ್ಲಿ ವಂಶಪಾರಂಪರ್ಯ ರಾಜಕಾರಣ ಮತ್ತು ಪ್ರಜಾಪ್ರಭುತ್ವದ ಆರೋಗ್ಯದ ನಡುವಿನ ಸಂಬಂಧವು ರಾಜಕೀಯ ವಿಶ್ಲೇಷಕರಲ್ಲಿ ಮತ್ತು ನಾಗರಿಕರಲ್ಲಿ ತೀವ್ರ ಚರ್ಚೆಯ ವಿಷಯವಾಗಿದೆ. ರಾಜಕೀಯ ಮನೆತನಗಳು ಸ್ಥಿರತೆಯನ್ನು ನೀಡುತ್ತವೆ ಎಂದು ಕೆಲವರು ವಾದಿಸಿದರೆ, ಇನ್ನು ಕೆಲವರು ಇದು ಪ್ರಜಾಪ್ರಭುತ್ವದ ಮೂಲತತ್ವವಾದ ‘ಅರ್ಹತೆ’ಯನ್ನು (Meritocracy) ಕುಂದಿಸುತ್ತದೆ ಎಂದು ಅಭಿಪ್ರಾಯಪಡುತ್ತಾರೆ.
ವಂಶಪಾರಂಪರ್ಯ ರಾಜಕಾರಣದ ಪ್ರಾಬಲ್ಯ ಭಾರತದ ರಾಜಕಾರಣದಲ್ಲಿ ಕೇವಲ ಒಂದು ಪಕ್ಷ ಅಥವಾ ಪ್ರದೇಶಕ್ಕೆ ಸೀಮಿತವಾಗಿಲ್ಲ; ಇದು ರಾಜಕೀಯ ವ್ಯವಸ್ಥೆಯ ಒಂದು ಭಾಗವೇ ಆಗಿಬಿಟ್ಟಿದೆ. ಸಂಸತ್ತಿನ (MP) ಮತ್ತು ವಿಧಾನಸಭೆಯ (MLA) ಗಣನೀಯ ಪ್ರಮಾಣದ ಸದಸ್ಯರು ರಾಜಕೀಯ ಹಿನ್ನೆಲೆಯುಳ್ಳ ಕುಟುಂಬಗಳಿಂದ ಬಂದವರಾಗಿದ್ದಾರೆ. ಸ್ವಾತಂತ್ರ ಭಾರತವನ್ನು ನೆಹರು ಕುಟುಂಬದ ಮೂವರು ನಾಯಕರು ಒಟ್ಟಾರೆಯಾಗಿ 37 ವರ್ಷಗಳು ಮತ್ತು 303 ದಿನಗಳ ಕಾಲ ಆಳ್ವಿಕೆ ಮಾಡಿದರೆ. ಬಹುತೇಕ ಪ್ರಾದೇಶಿಕ ರಾಜಕೀಯ ಪಕ್ಷಗಳು ಅನೇಕ ವರ್ಷಗಳು ಆಯಾ ರಾಜ್ಯದ ಅಧಿಕಾರದ ಚುಕ್ಕಾಣಿಯನ್ನು ವಂಶ ಪಾರಂಪರ್ಯವಾಗಿ ತಮ್ಮ ಹಿಡಿತದಲ್ಲೇ ಇಟ್ಟುಕೊಂಡಿರುವುದು ಇಂದಿಗೂ ನೋಡುತ್ತಿದ್ದೇವೆ. ಅಂದು ಹಾಕಿದ ಬುನಾದಿ ಇಂದು ಒಂದು ವ್ಯವಸ್ಥೆಯಾಗಿ ರೂಪಗೊಂಡು ಎಲ್ಲಾ ರಾಷ್ಟ್ರೀಯ ಹಾಗೂ ಪ್ರಾಂತೀಯ ಪಕ್ಷಗಳನ್ನು ಈ ವಂಶಪಾರಂಪರ್ಯತೆಯು ಆವರಿಸಿಕೊಂಡಿದೆ.
ಬ್ರ್ಯಾಂಡ್ ಮೌಲ್ಯ: ಕಾರ್ಪೊರೇಟ್ ಬ್ರ್ಯಾಂಡ್ನಂತೆ, ರಾಜಕೀಯ ಉಪನಾಮವು ರಾಜಕೀಯ ಪ್ರವೇಶದ ಹಾದಿಯನ್ನು ಸುಲಭಗೊಳಿಸುತ್ತದೆ. ಇದು ತಕ್ಷಣದ ಗುರುತಿಸುವಿಕೆ ಮತ್ತು ಸ್ಥಾಪಿತ ಸಂಪರ್ಕಗಳ ಬೆಂಬಲವನ್ನು ನೀಡುತ್ತದೆ, ಹಾಗಾಗಿ ಇದನ್ನೆ ಬಂಡವಾಳವನ್ನಾಗಿಸಿಕೊಂಡ ಎಲ್ಲಾ ರಾಜಕೀಯ ಪಕ್ಷಗಳು ಹಾಗು ಅಲ್ಲಿನ ಸ್ಥಾಪಿತ ನಾಯಕರು ತಮ್ಮ ಕುಟುಂಬಸ್ಥರನ್ನು ಅಥವಾ ಅವರ ಕುಡಿಗಳನ್ನು ತಮ್ಮ ರಾಜಕೀಯ ವಾರಸುದಾರರನ್ನಾಗಿಸಿ ಸತ್ತು ಹೋಗಿರುವ ರಾಜಪ್ರಭುತ್ವ ಹಾಗೂ ಪಾಳೇಗಾರಿಕೆಗೆ ಮತ್ತೆ ಜೀವವನ್ನು ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ.
ಉತ್ತರಾಧಿಕಾರ ಯೋಜನೆ: ಅನೇಕ ಪ್ರಾದೇಶಿಕ ಪಕ್ಷಗಳಲ್ಲಿ, ಪಕ್ಷದ ರಚನೆಯು ಒಬ್ಬ ಪ್ರಭಾವಿ ನಾಯಕನ ಸುತ್ತ ಸುತ್ತುತ್ತದೆ. ಪಕ್ಷದ ಒಳಜಗಳವನ್ನು ತಡೆಯಲು ಮತ್ತು ನಿರಂತರತೆಯನ್ನು ಕಾಪಾಡಿಕೊಳ್ಳಲು ಅಧಿಕಾರವನ್ನು ಕುಟುಂಬದ ಸದಸ್ಯರಿಗೇ ಹಸ್ತಾಂತರಿಸಲಾಗುತ್ತದೆ. ಪಕ್ಷ ರಾಜಕಾರಣದಿಂದ ದೊರೆಯುವ ಅಧಿಕಾರ ಮತ್ತು ಹಣಬಲವನ್ನು ಅನುಭವಿಸಿ ಅದರ ರುಚಿಯನ್ನು ಕಂಡವರು ಮತ್ತೆ ಅಧಿಕಾರ ಮತ್ತು ಹಣ ಬೇರೊಬ್ಬರ ಪಾಲಾಗಬಾರದು ಅದು ವಂಶಪಾರಂಪರ್ಯವಾಗಿ ಹೇಗೆ ರಾಜಮನೆತನದಲ್ಲಿ ಪಾಲುದಾರಿಕೆಯಾಗಿ ಹೋಗುತ್ತಿತ್ತು ಹಾಗೆಯೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಂದುವರಿಸುವ ಪ್ರಯತ್ನವು ಸಾಗಿದೆ.
ವಂಶಪಾರಂಪರ್ಯ ಆಡಳಿತದಿಂದ ಉಂಟಾಗುವ “ವೈಫಲ್ಯ” ಸಾಮಾನ್ಯವಾಗಿ ಪಕ್ಷದ ಆಂತರಿಕ ಪ್ರಜಾಪ್ರಭುತ್ವದ ಸವೆತ ಮತ್ತು ರಾಜಕೀಯ ಪ್ರತಿಭೆಗಳ ಅವಕಾಶಗಳ ಕಿರಿದಾಗುವಿಕೆಯನ್ನು ಸೂಚಿಸುತ್ತದೆ.
ಆಂತರಿಕ ಪಕ್ಷದ ಪ್ರಜಾಪ್ರಭುತ್ವ :
ವಂಶಪಾರಂಪರ್ಯ ಪಕ್ಷಗಳಲ್ಲಿ ನಾಯಕತ್ವದ ಆಯ್ಕೆಗಾಗಿ ಪಾರದರ್ಶಕ ವ್ಯವಸ್ಥೆ ಇರುವುದಿಲ್ಲ. ಉನ್ನತ ಸ್ಥಾನವು ಒಂದು ನಿರ್ದಿಷ್ಟ ಕುಟುಂಬಕ್ಕೆ ಮೀಸಲಾದಾಗ, ಸಾಮಾನ್ಯ ಕಾರ್ಯಕರ್ತರು ತಮ್ಮ ಸಾಮರ್ಥ್ಯದ ಆಧಾರದ ಮೇಲೆ ಮೇಲೆ ಬರಲು ಸಾಧ್ಯವಾಗುವುದಿಲ್ಲ. ಕಾರ್ಯಕರ್ತರು ಕೇವಲ ಸಿದ್ದಾಂತ ಸಾರುವ ವಾಹಿನಿಗಳಾಗಿ ಹಾಗೂ ಪಕ್ಷದ ಬಾವುಟಗಳನ್ನು ಕಟ್ಟುವ ಆಳುಗಳಾಗಿ, ನಾಯಕರ ಹೆಸರನ್ನು ಹಾಗೂ ಘೋಷಣೆಗಳನ್ನು ಕೂಗುವ ದ್ವನಿವರ್ಧಕಗಳಾಗಿ ಉಳಿದು ನಾಯಕನ ಕುಡಿಗಳನ್ನು ಅಧಿಕಾರಕ್ಕೆ ಏರಿಸುವ ಏಣಿಗಳಾಗಿ ಉಳಿಯ ಬೇಕಾಗುತ್ತದೆ. ನಾಯಕರು ಹೊರಗೆ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಿ ಒಳಗೆ ಮಾತ್ರ ಪಾಳೆಗಾರಿಕೆಯನ್ನು ಪಾಲಿಸುತ್ತಿರುತ್ತಾರೆ!.
ಪರಿಣಾಮ: ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವ ಸಂಸ್ಥೆಗಳಿಗಿಂತ ಹೆಚ್ಚಾಗಿ ಖಾಸಗಿ ಸಂಸ್ಥೆಗಳಂತೆ ಅಥವಾ ಸಾಮಂತಶಾಹಿ ಎಸ್ಟೇಟ್ಗಳಂತೆ ಕಾರ್ಯನಿರ್ವಹಿಸುತ್ತಿವೆ.
ಹೊಸಬರ ಪ್ರವೇಶಕ್ಕೆ ಅಡೆತಡೆಗಳು :
ವಂಶಪಾರಂಪರ್ಯ ರಾಜಕಾರಣವು ರಾಜಕೀಯ ಹಿನ್ನೆಲೆ ಇಲ್ಲದ ‘ಹೊರಗಿನವರಿಗೆ’ ದೊಡ್ಡ ಅಡೆತಡೆಯನ್ನು ಉಂಟುಮಾಡುತ್ತದೆ. ಇದರಿಂದಾಗಿ ಸಮರ್ಥ ವ್ಯಕ್ತಿಗಳು ಆಡಳಿತದಿಂದ ಹೊರಗುಳಿಯುವಂತಾಗುತ್ತದೆ, ಇದು ದೇಶದ ಪ್ರತಿಭೆಯ ಕೊರತೆಗೆ ಕಾರಣವಾಗಬಹುದು.
ಪ್ರಜಾಪ್ರಭುತ್ವದ ರಕ್ಷಣೆ ಎಂಬುದು ಒಂದು ಸ್ಥಿರ ಸಾಧನೆಯಲ್ಲ; ಅದು ನಿರಂತರ ನವೀಕರಣಗೊಳ್ಳಬೇಕಾದ ಪ್ರಕ್ರಿಯೆ. ಸಮಾಜವು ವಿಕಸನಗೊಂಡಂತೆ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಲು ಬಳಸುವ ಪರಿಕರಗಳು ಮತ್ತು ಸಿದ್ಧಾಂತಗಳು ಕೂಡ ಬದಲಾಗಬೇಕು. ಹಳೆಯ ವ್ಯವಸ್ಥೆಗಳನ್ನೇ ಅವಲಂಬಿಸುವುದು ಸಾಂಸ್ಥಿಕ ಜಡತ್ವಕ್ಕೆ ಕಾರಣವಾಗಬಹುದು, ವಂಶಪಾರಂಪರ್ಯ ರಾಜಕಾರಣವು ಪ್ರಜಾಪ್ರಭುತ್ವವನ್ನು ವ್ಯಕ್ತಿಗಳ ಅಥವಾ ಮನೆತನಗಳ ಸ್ಪರ್ಧೆಯನ್ನಾಗಿ ಬದಲಿಸಿ ಅರ್ಹತೆ, ಸಾಮರ್ಥ್ಯ ಮತ್ತು ಫಲಿತಾಂಶಗಳನ್ನು ಹಿಂದಕ್ಕೆ ತಳ್ಳಿ ಸಮಾಜ, ದೇಶ ಹಾಗೂ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ನಾಶ ಮಾಡುತ್ತದೆ.ಪ್ರಭಾವ ಮತ್ತು ಆಮಿಷದ ರಾಜಕಾರಣವು ಇಂತಹ ಮನೆತನಗಳನ್ನು ಹೆಚ್ಚಾಗಿಸಿ ತಮ್ಮದೇ ಆದ ಪ್ರಭಾವದ ಜಾಲಗಳನ್ನು ಅವಲಂಬಿಸುವಂತೆ ಮಾಡಿ ಸಂಪನ್ಮೂಲಗಳು ಮತ್ತು ನೀತಿ ನಿರ್ಧಾರಗಳು ವಸ್ತುನಿಷ್ಠ ಅಭಿವೃದ್ಧಿ ಗುರಿಗಳಿಗಿಂತ ಹೆಚ್ಚಾಗಿ ತಮ್ಮ ನಿಷ್ಠಾವಂತ ಮತದಾರರನ್ನು ಉಳಿಸಿಕೊಳ್ಳುವತ್ತ ಗುರಿಯಾಗಿಸುತ್ತದೆ, ಇದು ಆಡಳಿತದ ಅಸಮರ್ಥತೆಗೆ ಕಾರಣವಾಗಿ ಇಡೀ ವ್ಯವಸ್ಥೆಯನ್ನು ಅಸ್ತವ್ಯಸ್ಥ ವಾಗುವಂತೆ ಮಾಡುತ್ತದೆ.ಆದ್ದರಿಂದ ಹೊಸ ಆಲೋಚನೆಗಳು ಮತ್ತು ಯುವ ನಾಯಕತ್ವದ ಸೇರ್ಪಡೆ ಕೇವಲ ಆಯ್ಕೆಯಲ್ಲ, ಅದು ಅತ್ಯಗತ್ಯವಾಗಿದೆ.
ಹೊಸ ಪೀಳಿಗೆಯ ಪ್ರಾಮುಖ್ಯತೆ :
ಹೊಸ ಆಲೋಚನೆಗಳು ಕೇವಲ ಮತದಾನಕ್ಕೆ ಸೀಮಿತವಾಗದೆ, ನೀತಿ ನಿರೂಪಣೆಯಲ್ಲಿ ನಾಗರಿಕರಿಗೆ ನೇರ ಪಾತ್ರ ನೀಡುವ ‘ಸಮಾಲೋಚನಾ ಪ್ರಜಾಪ್ರಭುತ್ವ’ (Deliberative Democracy) ಮತ್ತು ‘ಭಾಗವಹಿಸುವಿಕೆಯ ಬಜೆಟ್’ನಂತಹ ಪರಿಕಲ್ಪನೆಗಳು ಸಾರ್ವಜನಿಕರನ್ನು ಮತ್ತೆ ಸಕ್ರಿಯಗೊಳಿಸುತ್ತದೆ.
ಹೊಸ ಪೀಳಿಗೆಯ ಯುವಜನರು ಹೊಸ ತುಡಿತ ಮತ್ತು ‘ತಾರ್ಕಿಕ ಅಸಮಾಧಾನ’ದೊಂದಿಗೆ ಬರುತ್ತಾರೆ. ಇದು ಪ್ರಸ್ತುತ ಸ್ಥಿತಿಯನ್ನು ಪ್ರಶ್ನಿಸಲು ಮತ್ತು ಸಾರ್ವಜನಿಕ ಚರ್ಚೆಗಳಿಗೆ ಹೊಸ ಚೈತನ್ಯ ನೀಡಲು ಸಹಕಾರಿಯಾಗುತ್ತದೆ.
”ಹೊಸ ಪೀಳಿಗೆ” ಎಂದರೆ ಕೇವಲ ವಯಸ್ಸಲ್ಲ, ಬದಲಿಗೆ ಅದು ಹೊಸ ಆಲೋಚನೆ ಹಾಗು ಮೌಢ್ಯಕ್ಕಿಂತ ಪ್ರಾಯೋಗಿಕತೆಗೆ (Pragmatism over dogma) ಬೆಲೆ ನೀಡುವ ಮನೋಭಾವ. ಹಳೆಯ ವ್ಯವಸ್ಥೆಗಳು ವಿಫಲವಾಗುತ್ತಿರುವುದನ್ನು ಮೊದಲು ಗುರುತಿಸುವವರು ಮತ್ತು ಅವುಗಳನ್ನು ಸರಿಪಡಿಸಲು ಹೆಚ್ಚು ಪ್ರೇರಿತರಾಗಿರುವವರು ಇವರೇ ಆಗಿರುತ್ತಾರೆ. ಹೊಸ ಪೀಳಿಗೆಯು ಹೆಚ್ಚಾಗಿ ‘ಫಲಿತಾಂಶ ಆಧಾರಿತ ರಾಜಕಾರಣ’ಕ್ಕೆ (Outcome-based politics) ಒತ್ತು ನೀಡುತ್ತದೆ. ಸಾಂಪ್ರದಾಯಿಕ ಕುಟುಂಬ ನಿಷ್ಠೆಗಿಂತ ಸಾಮಾಜಿಕ ಬದಲಾವಣೆ, ಆರ್ಥಿಕ ಸಮಾನತೆ ಮತ್ತು ಶಿಕ್ಷಣಕ್ಕೆ ಆದ್ಯತೆಯನ್ನು ನೀಡುತ್ತಾರೆ, ಆದುದರಿಂದ ಇದು ಸಮಾಜವನ್ನು, ದೇಶವನ್ನು ಅಭಿವೃದ್ಧಿಪಡಿಸುವ ಜೊತೆಗೆ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುತ್ತದೆ.ಪ್ರಜಾಪ್ರಭುತ್ವವು ತನ್ನ ಅಸ್ತಿತ್ವವನ್ನು (ಮುಕ್ತ ಮತ್ತು ನ್ಯಾಯಯುತವಾಗಿ) ಉಳಿಸಿಕೊಳ್ಳಲು, ತನ್ನ ಆತ್ಮರಕ್ಷಣೆಯ ಮಾರ್ಗಗಳನ್ನು ನಿರಂತರವಾಗಿ ಬದಲಾಯಿಸಿಕೊಳ್ಳುತ್ತಿರಬೇಕು. ಇಲ್ಲದಿದ್ದರೆ ಪ್ರಜಾಪ್ರಭುತ್ವವೆ ಅಪಾಯಕ್ಕೆ ಸಿಲುಕುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.
ಇದು ಪ್ರಜಾಪ್ರಭುತ್ವದ “ವೈಫಲ್ಯ”ವೇ?
ಒಂದು ವ್ಯವಸ್ಥೆಯ “ದೋಷ” ಮತ್ತು “ವೈಫಲ್ಯ”ದ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ವಂಶಪಾರಂಪರ್ಯವು ಪ್ರಜಾಪ್ರಭುತ್ವದ ಆದರ್ಶಗಳಿಗೆ ಸವಾಲಾಗಿದ್ದರೂ, ಅವು ಪ್ರಜಾಪ್ರಭುತ್ವದ ಚೌಕಟ್ಟಿನಲ್ಲೇ ಕಾರ್ಯನಿರ್ವಹಿಸುತ್ತವೆ, ಅಂತಿಮವಾಗಿ, ವಂಶಪಾರಂಪರ್ಯ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲ್ಲಲೇಬೇಕು. ಹಾಗಾಗಿ ಚುನಾವಣೆಗಳಲ್ಲಿ ಅವರು ಎಲ್ಲಾ ತರಹದ ಆಮಿಷಗಳನ್ನು ಮತದಾರರಿಗೆ ಒಡ್ಡಿ ತಮ್ಮಿಂದಲೇ ಆಯ್ಕೆಯಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಡೆಸುವ ನಾಯಕರಾಗುತ್ತಾರೆ, ಆದರೆ ಪ್ರಭಾವಿ ಮನೆತನಗಳನ್ನು ಮತದಾರರು ತಿರಸ್ಕರಿಸಿದ ಹಲವಾರು ಉದಾಹರಣೆಗಳು ಭಾರತದ ಇತಿಹಾಸದಲ್ಲಿವೆ (ಉದಾಹರಣೆಗೆ 1977 ರ ತುರ್ತು ಪರಿಸ್ಥಿತಿಯ ನಂತರದ ಚುನಾವಣೆ). ಹಾಗೂ ಅನೇಕ ರಾಜ್ಯಗಳಲ್ಲಿ ಅನೇಕ ನಾಯಕರುಗಳ ಸೋಲು.
ಇಂದಿನ ತಮಿಳು ನಾಡಿನ ಚುನಾವಣಾ ಪಲಿತಾಂಶವು ಕೂಡ ಸಿದ್ದಾಂತದ ಹೆಸರಿನಲ್ಲಿ ನೆಡೆಯುತಿದ್ದ ವಂಶ ಪಾರಂಪರ್ಯ ರಾಜಕಾರಣಕ್ಕೆ ತಿಳಾಂಜಲಿ ಹಾಡಿ. ಯುವ ಪೀಳಿಗೆಯು ಹೊಸ ಭರವಸೆ ಮತ್ತು ಆಶ್ವಾಸನೆಗಳಿಗೆ ಒಬ್ಬ ಸಿನಿಮಾ ನಟನಿಗೆ ಮತವನ್ನು ನೀಡಿ ಆತನಿಗೆ ವಿಜಯವನ್ನು ತಂದುಕೊಟ್ಟಿದ್ದಾರೆ, ತಮಿಳುನಾಡಿನಲ್ಲಿ ಈ ಬಾರಿ ಸುಮಾರು 14.5 ಲಕ್ಷ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ ಎಂಬುದನ್ನು ನಾವು ಗಮನಿಸಿ ಬೇಕು, ಹಾಗೆಯೇ ತಾನು ಜನರಲ್ಲಿ ಮೂಡಿಸಿದ್ದ ಭರವಸೆ ಮತ್ತು ನಂಬಿಕೆಯನ್ನು ತಾನು ಉಳಿಸಿಕೊಳ್ಳುತ್ತಾನೆಯೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ, ಯಾವುದೇ ಸಿದ್ಧಾಂತಕ್ಕೆ ಜೋತು ಬೀಳದೆ ಜನರನ್ನು ಕೇವಲ ಭರವಸೆಗಳ ಮುಖಾಂತರವೇ ತಮ್ಮೆಡೆಗೆ ಸೆಳದು ಒಂದು ಹೊಸ ರಾಜಕೀಯ ಇತಿಹಾಸವನ್ನು ಬರೆದಿದ್ದಾರೆ, ಹಾಗಾಗಿ ಇದು ಹೊಸ ಪೀಳಿಗೆಯಲ್ಲಿ ಬದಲಾಗುತ್ತಿರುವ ರಾಜಕೀಯ ಪ್ರಜ್ಞೆಯ ಪ್ರತಿಕವೆಂದು ಭಾವಿಸಬಹುದು. It ia Miracle of democracy.
ಭಾರತೀಯ ಪ್ರಜಾಪ್ರಭುತ್ವಕ್ಕೆ ಇರುವ ಸವಾಲು ಕೇವಲ ರಾಜಕೀಯ ಕುಟುಂಬಗಳ ಅಸ್ತಿತ್ವವಲ್ಲ, ಬದಲಿಗೆ ಪಕ್ಷದ ಪಾರದರ್ಶಕತೆಯನ್ನು ಬಲಿಗೊಟ್ಟು ಆ ಕುಟುಂಬಗಳೇ ಸಂಸ್ಥೆಯಾಗಿ ಬದಲಾಗುತ್ತಿರುವುದು. ಚುನಾವಣಾ ಆಯೋಗವು ಪಕ್ಷದ ಆಂತರಿಕ ವ್ಯವಹಾರಗಳ ಮೇಲೆ ಹೆಚ್ಚಿನ ನಿಗಾ ಇಡುವುದು ಮತ್ತು ಮತದಾರರು ಕೇವಲ ಮನೆತನವನ್ನು ನೋಡದೆ ಅಭ್ಯರ್ಥಿಯ ಕಾರ್ಯಕ್ಷಮತೆಯ ಆಧಾರದ ಮೇಲೆ ಮತ ಚಲಾಯಿಸುವ ಅರಿವು ಮೂಡಿಸುವುದು ಸದೃಢ ಪ್ರಜಾಪ್ರಭುತ್ವಕ್ಕೆ ಅಗತ್ಯವಾಗಿದೆ. ಚುಳವಳಿಗಳು ಮತ್ತು ಸಂಘಟನೆಗಳು ಸಮಾಜದ ಧ್ವನಿಯಾಗಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿ ಪ್ರಜಾಪ್ರಭುತ್ವಕ್ಕೆ ಅಪಾಯವಾಗುವ ಎಲ್ಲಾ ಅಂಶಗಳನ್ನು ತೊಡೆದು ಹಾಕುವ ಸಲುವಾಗಿಯೇ ಹುಟ್ಟಿಕೊಳ್ಳುತ್ತವೆ ಆದರೆ ಇಂದು ಬಹುತೇಕ ಚಳವಳಿಗಳು ಮತ್ತು ಸಂಘಟನೆಗಳು ರಾಜಕೀಯ ಪಕ್ಷಗಳ ಹಾಗೂ ನಾಯಕರ ಬಾಲಂಗೋಚಿಗಳಾಗಿ ಕೆಲಸ ಮಾಡುತ್ತಿರುವುದರಿಂದ ವಂಶ ಪಾರಂಪರ್ಯ ರಾಜಕಾರಣವು ಗಟ್ಟಿಯಾಗುವ ಜೊತೆಗೆ ಪ್ರಜಾಪ್ರಭುತ್ವವು ನಾಶವಾಗುವ ಹಂಚಿಗೆ ತಲುಪುತ್ತಿದೆ. ಪ್ರಜಾಪ್ರಭುತ್ವವೆಂದರೆ “ಪ್ರಜೆಗಳಿಂದ, ಪ್ರಜೆಗಳಿಗಾಗಿ,ಪ್ರಜೆಗಳಿಗೋಸ್ಕರ ಇರುವ ರಾಜಕೀಯ ವ್ಯವಸ್ಥೆ ಆಗಿರುವುದರಿಂದ ಇಂದು ನಮ್ಮ ಪೂರ್ವಿಕರ ತ್ಯಾಗ ಬಲಿದಾನಗಳ ಪ್ರತೀಕವಾಗಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪ್ರಜೆಗಳೇ ರಕ್ಷಿಸಬೇಕಿದೆ ಇಲ್ಲವಾದಲ್ಲಿ ವಂಶಪಾರಂಪರ್ಯ ರಾಜಕಾರಣವು ಪ್ರಜಾಪ್ರಭುತ್ವದ ಹೆಸರಿನಲ್ಲಿ ಪ್ರಜೆಗಳ ಜೊತೆಗೆ ದೇಶವನ್ನೂ ಬಕ್ಷಿಸುತ್ತದೆ.