ಬೆಂಗಳೂರು: ಇತ್ತೀಚೆಗೆ ಬಿಡುಗಡೆಯಾದ ‘ಟಾಕ್ಸಿಕ್’ ಚಿತ್ರದ ಟ್ರೈಲರ್ ಸಿನಿಪ್ರೇಕ್ಷಕರಲ್ಲಿ ಮಾತ್ರವಲ್ಲ, ಸಮಾಜದಲ್ಲೂ ವಿಭಿನ್ನ ಚರ್ಚೆಗೆ ಕಾರಣವಾಗಿದೆ. ವಿಶೇಷವಾಗಿ ಪ್ರಣಯ ಮತ್ತು ಆಕ್ಷನ್ ದೃಶ್ಯಗಳ ಚಿತ್ರಣ ಕುರಿತು ಹಳೆಯದು–ಹೊಸದು ಎಂಬ ಹೋಲಿಕೆ ಮತ್ತೆ ಮುನ್ನೆಲೆಗೆ ಬಂದಿದೆ.
ಒಂದು ಕಾಲದಲ್ಲಿ ನಮ್ಮ ಸಿನಿಮಾಗಳಲ್ಲಿ ಪ್ರಣಯದ ಸೊಬಗು ಅತ್ಯಂತ ಸೂಕ್ಷ್ಮವಾಗಿತ್ತು. ಗಂಡು–ಹೆಣ್ಣು ಒಟ್ಟಿಗೆ ಮಲಗುತ್ತಿದ್ದಂತೆ ಅವರ ಮೇಲೆ ರಗ್ಗು ಹೊದಿಸಿ, ಕ್ಯಾಮರಾವನ್ನು ಗೋಡೆಯ ಮೇಲಿನ ಚಿತ್ರದತ್ತ ಅಥವಾ ಟೇಬಲ್ ಮೇಲಿನ ಜೋಡಿ ಗೊಂಬೆಗಳತ್ತ ತಿರುಗಿಸಿದರೆ ಸಾಕಾಗುತ್ತಿತ್ತು. ಅಲ್ಲಿ ಎಲ್ಲವೂ ಅರ್ಥವಾಗುತ್ತಿತ್ತು. ಅತ್ಯಾಚಾರಂಥ ಕ್ರೂರ ಘಟನೆಗಳನ್ನೂ ಸಂಕೇತಗಳ ಮೂಲಕವೇ ತೋರಿಸಲಾಗುತ್ತಿತ್ತು – ಬಟ್ಟೆ ಹೊತ್ತಿ ಉರಿಯುವ ದೃಶ್ಯ, ಗಾಜಿನ ಲೋಟ ಬಿದ್ದು ಚೂರುಚೂರಾಗುವುದು… ಈ ಸಂಕೇತಗಳ ಮೂಲಕ ‘ಅವಳನ್ನು ಕೆಡಿಸಿಬಿಟ್ಟ’ ಎಂಬ ಮಾತಿನಲ್ಲಿ ಕೇವಲ ಲೈಂಗಿಕ ಕ್ರಿಯೆಯಲ್ಲ, ಆಕೆಗೆ ಆಗಿರುವ ಅಳಿಸಲಾಗದ ಗಾಯದ ನೋವೂ ಅಡಗಿರುತ್ತಿತ್ತು.
ಇಂದಿನ ಕಾಲದಲ್ಲಿ ಪಾಶ್ಚಿಮಾತ್ಯ ಸಿನಿಮಾ ಶೈಲಿಯ ಪ್ರಭಾವ ಹೆಚ್ಚಾಗಿದೆ. ಪ್ರಣಯದ ಹಾಗೂ ಮೊದಲ ರಾತ್ರಿಯ ದೃಶ್ಯಗಳು ಮಂಚ ಅಲುಗಾಡುವುದರಿಂದಲೇ ಆರಂಭವಾಗುತ್ತವೆ. ‘ಪಿಕೆ’ ಚಿತ್ರದಂತ ಸಿನಿಮಾಗಳಲ್ಲಿ ಕಾರೊಂದು ಅಲುಗಾಡುವ ದೃಶ್ಯ ಬಂದಾಗ, “ಕಾರು ಯಾಕೆ ಹೀಗೆ ಕುಣಿಯುತ್ತಿದೆ?” ಎಂದು ಮಕ್ಕಳು ಕೇಳಿದರೆ ಪೋಷಕರು ಉತ್ತರಿಸಲು ಮುಜುಗರ ಅನುಭವಿಸುವ ಸ್ಥಿತಿ ನಿರ್ಮಾಣವಾಗುತ್ತದೆ. ಇಂತಹ ದೃಶ್ಯಗಳು ನಿಜಕ್ಕೂ ಅವಶ್ಯವೇ? ಅವು ಪುಳಕ ಕೊಡುತ್ತವೆಯೇ, ರೋಮಾಂಚನ ತರಿಸುತ್ತವೆಯೇ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.
ಹಾಲಿವುಡ್ ಸಿನಿಮಾಗಳಲ್ಲಿನ ತಾಂತ್ರಿಕ ಪ್ರಗತಿಯನ್ನು ನಾವು ಸ್ವೀಕರಿಸಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದಕ್ಕೆ ನಮ್ಮತನವನ್ನು ಬೆರೆಸಿ, ನಮ್ಮ ನೆಲದ ಕಥೆಗಳಿಗೆ ಆ ತಂತ್ರಜ್ಞಾನವನ್ನು ಬಳಸಿದಾಗಲೇ ಅದು ಅರ್ಥಪೂರ್ಣವಾಗುತ್ತದೆ. ಈ ನಡುವೆ ಹಸಿಬಿಸಿ ಎನಿಸುವ ದೃಶ್ಯಗಳ ಅಗತ್ಯವಿದೆಯೇ ಎಂಬ ಪ್ರಶ್ನೆ ಮತ್ತೆ ಮತ್ತೆ ಎದುರಾಗುತ್ತಿದೆ.
ಇಂದು ಯಶ್ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಎತ್ತರಕ್ಕೆ ಬೆಳೆದ ನಟ. ಅವರ ಮಾರ್ಕೆಟ್ ದೊಡ್ಡದಾಗಿರುವುದರಿಂದ, ಇಂತಹ ದೃಶ್ಯಗಳ ಮೂಲಕ ಅದನ್ನು ಇನ್ನಷ್ಟು ವಿಸ್ತರಿಸಿಕೊಳ್ಳಬೇಕಾದ ಅವಶ್ಯಕತೆಯೇ ಇಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ‘ಕೆಜಿಎಫ್’ ಚಿತ್ರದ ಟೀಸರ್ವೇ ಯಾವುದೇ ಹಸಿಬಿಸಿ ದೃಶ್ಯಗಳಿಲ್ಲದೆ ರೋಮಾಂಚನ ಉಂಟುಮಾಡಿತ್ತು ಎಂಬುದನ್ನು ಪ್ರೇಕ್ಷಕರು ಇನ್ನೂ ನೆನಪಿಸಿಕೊಳ್ಳುತ್ತಾರೆ.
ಇರಲಿ, ‘ಟಾಕ್ಸಿಕ್’ ನಮ್ಮ ನೆಲದ ಹೆಮ್ಮೆ. ಅದರ ಕಥೆಯೂ ನಮ್ಮ ಮಣ್ಣಿನದ್ದಾಗಿದ್ದರೆ ಇನ್ನಷ್ಟು ಚಂದ. ನಮ್ಮದೇ ಕಥೆಗಳು ವಿಶ್ವಮಟ್ಟದಲ್ಲಿ ಹರಡಿದರೆ ಅದಕ್ಕಿಂತ ದೊಡ್ಡ ಸಂತೋಷವೇನು? ಆದರೆ ಟ್ರೈಲರ್ ನೋಡಿದ ನಂತರ, ಈ ಸಿನಿಮಾ ಮನೆ ಮಂದಿಯೊಂದಿಗೆ ಕೂತು ನೋಡಲು ಇರುಸುಮುರುಸಾಗಬಹುದು ಎಂಬ ಅಭಿಪ್ರಾಯವೂ ಕೆಲ ಕಡೆ ಕೇಳಿಬರುತ್ತಿದೆ.
ಹಾಲಿವುಡ್ ಸಿನಿಮಾ ಮಾಡಲು ಯಶ್ ಅವರಿಗೆ ಅಗತ್ಯವಿಲ್ಲ; ಅಲ್ಲಿ ಅದಕ್ಕೆ ಬೇಕಾದಷ್ಟು ಮಂದಿ ಇದ್ದಾರೆ. ನಮಗೆ ಬೇಕಿರುವುದು ನಮ್ಮ ನೆಲದ ಕಥೆಯನ್ನು ಹಾಲಿವುಡ್ ಮಟ್ಟದಲ್ಲಿ ಸಿನಿಮಾ ಮಾಡುವವರು. ಅದು ಯಶ್ ಅವರಿಂದ ಸಾಧ್ಯವಿದೆ ಎಂಬ ನಂಬಿಕೆ ಕನ್ನಡ ಸಿನಿಪ್ರೇಕ್ಷಕರದು.
ಈ ಚರ್ಚೆಯ ನಡುವೆ ಒಂದು ಪ್ರಶ್ನೆ ಮಾತ್ರ ಉಳಿಯುತ್ತದೆ – ಸಂವೇದನೆಯಿಂದ ಕಥೆ ಹೇಳಬೇಕೇ, ಸಂಚಲನದಿಂದ ಪ್ರೇಕ್ಷಕರನ್ನು ಸೆಳೆಯಬೇಕೇ? ಉತ್ತರವನ್ನು ಕಾಲ ಮತ್ತು ಪ್ರೇಕ್ಷಕರೇ ನಿರ್ಧರಿಸಲಿದೆ ಅನ್ನೊದೆ ಫಿಲ್ಮೀಮಾತು.