ಮಂಗಳೂರು:ಕರ್ನಾಟಕ ರಾಜ್ಯ ಆದಿದ್ರಾವಿಡ ಸಂಘ ಮಂಗಳೂರು ಇದರ ರಾಜ್ಯ ಗೌರವಾಧ್ಯಕ್ಷರು ಹಾಗೂ ಸ್ಥಾಪಕಾಧ್ಯಕ್ಷರಾಗಿದ್ದ ಶ್ರೀ ಶಿವಾನಂದ್ ಬಲ್ಲಾಳ್ ಬಾಗ್ ಅವರು ವಿಧಿವಶರಾಗಿದ್ದಾರೆ ಎಂಬ ದುಃಖದ ಸುದ್ದಿ ಸಮುದಾಯವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಸಮುದಾಯದ ಒಳಿತಿಗಾಗಿ ತಮ್ಮ ಜೀವವನ್ನೇ ಸವೆಸಿದ ಸವ್ಯಸಾಚಿ ನಾಯಕನಾಗಿ ಗುರುತಿಸಿಕೊಂಡಿದ್ದ ಅವರು, ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಸಂಘಟನೆಯ ಶಕ್ತಿಗೆ ಸದಾ ಧ್ವನಿಯಾಗಿದ್ದರು.
ಶ್ರೀ ಶಿವಾನಂದ್ ಬಲ್ಲಾಳ್ ಬಾಗ್ ಅವರು ಕರ್ನಾಟಕ ರಾಜ್ಯ ಆದಿದ್ರಾವಿಡ ಸಂಘದ ಸ್ಥಾಪನೆ ಮತ್ತು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ನಡೆಸಿದ ಹೋರಾಟಗಳು, ಶೈಕ್ಷಣಿಕ ಮತ್ತು ಸಾಮಾಜಿಕ ಜಾಗೃತಿಗೆ ನೀಡಿದ ಕೊಡುಗೆಗಳು ಅನೇಕ ಯುವ ನಾಯಕರಿಗೆ ಪ್ರೇರಣೆಯಾಗಿ ಉಳಿದಿವೆ. ಅವರ ಸರಳ ಜೀವನಶೈಲಿ, ನಿಸ್ವಾರ್ಥ ಸೇವಾಭಾವ ಮತ್ತು ದೃಢ ನಾಯಕತ್ವ ಸದಾ ಸ್ಮರಣೀಯವಾಗಿದೆ. ಅವರ ಅಗಲಿಕೆಯಿಂದ ಸಂಘಕ್ಕೂ ಸಮುದಾಯಕ್ಕೂ ತುಂಬಲಾರದ ನಷ್ಟ ಉಂಟಾಗಿದೆ. ಅವರ ಆದರ್ಶಗಳು, ಹೋರಾಟದ ಹಾದಿ ಮತ್ತು ಸಮಾಜಮುಖಿ ಚಿಂತನೆಗಳು ಮುಂದಿನ ಪೀಳಿಗೆಗೆ ದಾರಿ ದೀಪವಾಗಲಿವೆ ಎಂದು ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ 11-01-2026 (ಭಾನುವಾರ) ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಮಂಗಳೂರು ಬಳ್ಳಾಲ್ ಬಾಗ್, ಡಾ. ಬಿ.ಆರ್. ಅಂಬೇಡ್ಕರ್ ಭವನದ ಎದುರುಗಡೆ ಸಮುದಾಯದ ನಾಯಕನಿಗೆ ಅಂತಿಮ ನಮನ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.