ಮಂಗಳೂರು: ವಾಮಂಜೂರಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ನಂತರ ಕತ್ತು ಹಿಸುಕಿ ಹತ್ಯೆಗೈದ ದಾರುಣ ಪ್ರಕರಣದಲ್ಲಿ ಆರೋಪಿಗಳಾದ ಮೂವರಿಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಹೈಕೋರ್ಟ್ ದೃಢೀಕರಿಸಿದೆ. ಶಿಕ್ಷೆಯನ್ನು ಕಡಿಮೆ ಮಾಡಿದರೆ ಇಂತಹ ಅಮಾನುಷ ಕೃತ್ಯಗಳಿಗೆ ಉತ್ತೇಜನ ದೊರಕುವ ಸಾಧ್ಯತೆಯಿದ್ದು, ಅದು ಸಮಾಜಕ್ಕೆ ತಪ್ಪು ಸಂದೇಶ ನೀಡುವಂತಾಗುತ್ತದೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ತಿಳಿಸಿದೆ.
ರಾಜ್ಯ ಸರ್ಕಾರವು ವಿಚಾರಣ ನ್ಯಾಯಾಲಯದ ಗಲ್ಲು ಶಿಕ್ಷೆಯನ್ನು ದೃಢೀಕರಿಸುವಂತೆ ಸಲ್ಲಿಸಿದ್ದ ಅರ್ಜಿಯ ಜೊತೆಗೆ, ಶಿಕ್ಷೆಯನ್ನು ರದ್ದುಪಡಿಸಬೇಕೆಂದು ಮಧ್ಯಪ್ರದೇಶ ಮೂಲದ ಜೈಬನ್ ಆದಿವಾಸಿ, ಮುಕೇಶ್ ಸಿಂಗ್ ಹಾಗೂ ಝಾರ್ಖಂಡ್ ಮೂಲದ ಮನೀಶ್ ತಿರ್ಕಿ ಸಲ್ಲಿಸಿದ್ದ ಮೇಲ್ಮನವಿಗಳನ್ನು ಹೈಕೋರ್ಟ್ ತಿರಸ್ಕರಿಸಿದೆ.
ನ್ಯಾಯಪೀಠದ ಅಭಿಪ್ರಾಯದಂತೆ, ಸಂತ್ರಸ್ತೆಯ ಜೀವದ ಮೌಲ್ಯವನ್ನು ಲೆಕ್ಕಿಸದೇ ಆರೋಪಿಗಳು ಕ್ರಮವಾಗಿ ಅತ್ಯಾಚಾರ ಎಸಗಿರುವುದು ಕೇವಲ ಅಪರಾಧವಲ್ಲ; ಇದು ಸಮಾಜದ ನೈತಿಕ ಮೌಲ್ಯಗಳಿಗೆ ದೊಡ್ಡ ಆಘಾತ ಉಂಟು ಮಾಡಿದ ಕೃತ್ಯವಾಗಿದೆ. ಇಂತಹ ಕ್ರೂರ ಅಪರಾಧಗಳಲ್ಲಿ ಗಲ್ಲು ಶಿಕ್ಷೆ ವಿಧಿಸುವುದು ನ್ಯಾಯಸಮ್ಮತ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಕೇವಲ 7ರಿಂದ 8 ವರ್ಷದ ಬಾಲಕಿಯಾಗಿದ್ದ ಸಂತ್ರಸ್ತೆ ಆರೋಪಿಗಳ ಮೇಲೆ ನಂಬಿಕೆ ಇಟ್ಟಿದ್ದಳು. ತಿಂಡಿ ಕೊಡಿಸುವ ನೆಪದಲ್ಲಿ ಆಕೆಯನ್ನು ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿ ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಕತ್ತು ಹಿಸುಕಿ ಕೊಲೆ ಮಾಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ವೈದ್ಯಕೀಯ ವರದಿ ಪ್ರಕಾರ ಬಾಲಕಿಯ ಖಾಸಗಿ ಅಂಗಗಳಿಗೆ ಗಂಭೀರ ಗಾಯಗಳಾಗಿದ್ದು, ಭಾರೀ ರಕ್ತಸ್ರಾವವಾಗಿರುವುದು ದೃಢಪಟ್ಟಿದೆ.
2021ರ ನವೆಂಬರ್ 21ರಂದು ಮಂಗಳೂರು ಸಮೀಪದ ವಾಮಂಜೂರು ಬಳಿಯ ಟೈಲ್ಸ್ ಕಾರ್ಖಾನೆಯಲ್ಲಿ ಈ ಘಟನೆ ನಡೆದಿತ್ತು. ಆರೋಪಿಗಳು ಅದೇ ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಮೃತದೇಹ ಪತ್ತೆಯಾದ ಬಳಿಕ ಸಂತ್ರಸ್ತೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಸಿಸಿ ಕ್ಯಾಮೆರಾ ದೃಶ್ಯಗಳು ಹಾಗೂ ಎಫ್ಎಸ್ಎಲ್ ವರದಿ ಸೇರಿದಂತೆ ಪ್ರಮುಖ ಸಾಕ್ಷ್ಯಾಧಾರಗಳ ಆಧಾರದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿತ್ತು.
ವಿಚಾರಣ ನ್ಯಾಯಾಲಯವು ಆರೋಪಿಗಳ ಅಪರಾಧ ಸಾಬೀತಾಗಿರುವುದಾಗಿ ಘೋಷಿಸಿ ಮೂವರಿಗೆ ಗಲ್ಲು ಶಿಕ್ಷೆಯೊಂದಿಗೆ ತಲಾ ₹40,000 ದಂಡ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ಆರೋಪಿಗಳಿಗೆ ಹೈಕೋರ್ಟ್ ಯಾವುದೇ ರಿಯಾಯಿತಿ ನೀಡದೆ ಶಿಕ್ಷೆಯನ್ನು ಸಂಪೂರ್ಣವಾಗಿ ಖಾಯಂಗೊಳಿಸಿದೆ.
ಈ ದಾರುಣ ಘಟನೆ ನ್ಯಾಯಾಂಗ ವ್ಯವಸ್ಥೆಯಷ್ಟೇ ಅಲ್ಲದೆ ಸಮಗ್ರ ಸಮಾಜದ ಮನಸ್ಸಿಗೆ ಆಘಾತ ಉಂಟು ಮಾಡಿದದ್ದು ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.