ನವದೆಹಲಿ/ಚೆನ್ನೈ, ಮೇ 6: ತಮಿಳುನಾಡಿನ ರಾಜಕೀಯ ಬೆಳವಣಿಗೆಗಳ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಟಿವಿಕೆ (ತಮಿಳಗ ವೆತ್ರಿ ಕಳಗಂ) ಪಕ್ಷಕ್ಕೆ ಬೆಂಬಲ ಘೋಷಿಸಿರುವ ಕ್ರಮ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇಂಡಿಯಾ ಕೂಟದ ಅಂಗಪಕ್ಷಗಳೊಂದಿಗೆ ಸಮಾಲೋಚನೆ ನಡೆಸದೇ ತೆಗೆದುಕೊಳ್ಳಲಾದ ಈ ನಿರ್ಧಾರವು ವಿಶ್ವಾಸಾರ್ಹ ರಾಜಕೀಯ ನಡೆ ಅಲ್ಲ ಎಂದು ಹಲವು ರಾಜಕೀಯ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
ತಮಿಳುನಾಡಿನಲ್ಲಿ ಬಿಜೆಪಿಗೆ ಸದ್ಯ ಅತ್ಯಲ್ಪ ರಾಜಕೀಯ ಬಲವಿದ್ದು, ಅಲ್ಲಿ ಸರ್ಕಾರ ರಚಿಸುವ ಅಥವಾ ಪ್ರಭಾವ ಬೀರುವ ಸಾಧ್ಯತೆಗಳು ಕಡಿಮೆಯೇ ಇವೆ. ಇಂತಹ ಸಂದರ್ಭದಲ್ಲಿ, ಈಗಾಗಲೇ ಒಕ್ಕೂಟದ ಭಾಗವಾಗಿರುವ ಕಾಂಗ್ರೆಸ್ ಪಕ್ಷವು ಯಾವುದೇ ತುರ್ತು ರಾಜಕೀಯ ಪರಿಸ್ಥಿತಿ ಇಲ್ಲದೇ ವಿರೋಧ ಪಕ್ಷದತ್ತ ಬೆಂಬಲ ಸೂಚಿಸಿರುವುದು “ಅಧಿಕಾರ ದಾಹ ಮತ್ತು ಅವಕಾಶವಾದಿತನ” ಎಂಬ ಟೀಕೆಗೆ ಕಾರಣವಾಗಿದೆ.
ಈ ನಡುವೆ, ಟಿವಿಕೆ ಪಕ್ಷವು ಸಿಪಿಐಎಂ ಬೆಂಬಲವನ್ನೂ ಕೋರಿದೆ. ಆದರೆ ಈ ಕುರಿತು ಪ್ರತಿಕ್ರಿಯಿಸಿರುವ ಸಿಪಿಐಎಂ ನಾಯಕತ್ವ, ರಾಜ್ಯ ಸಮಿತಿ ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದೆ. ಜೊತೆಗೆ, ಕೇಂದ್ರ ನಾಯಕತ್ವದ ಮಾರ್ಗದರ್ಶನ ಪಡೆದು ರಾಜ್ಯದ ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದೆ.
ರಾಜಕೀಯ ವಲಯದಲ್ಲಿ ರಾಹುಲ್ ಗಾಂಧಿ ಅವರ ನಾಯಕತ್ವ ಶೈಲಿಯ ಮೇಲೂ ಪ್ರಶ್ನೆಗಳು ಕೇಳಿಬರುತ್ತಿವೆ. ವಿರೋಧ ಪಕ್ಷದ ನಾಯಕನಾಗಿಯೂ, ಇಂಡಿಯಾ ಕೂಟದ ಪ್ರಮುಖ ಮುಖಂಡನಾಗಿಯೂ ಇತರೆ ಜಾತ್ಯಾತೀತ ಪಕ್ಷಗಳನ್ನು ಒಗ್ಗೂಡಿಸುವಲ್ಲಿ ಅವರು ಪದೇಪದೆ ವಿಫಲರಾಗುತ್ತಿದ್ದಾರೆ ಎಂಬ ಟೀಕೆ ಕೇಳಿಬರುತ್ತಿದೆ. ಇದರಿಂದ ಮೈತ್ರಿ ಪಕ್ಷಗಳ ವಿಶ್ವಾಸವೂ ಕುಸಿಯುತ್ತಿರುವ ಆತಂಕ ವ್ಯಕ್ತವಾಗುತ್ತಿದೆ.
ಮುಂದಿನ ದಿನಗಳಲ್ಲಿ ಈ ಬೆಳವಣಿಗೆಗಳು ಇಂಡಿಯಾ ಕೂಟದ ಒಳರಾಜಕೀಯ ಸಮೀಕರಣಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.