ಮಾಣಿ: ಅನಂತಾಡಿ ಕೃಷಿ ಪತ್ತಿನ ಸಹಕಾರಿ ಸಂಘ ನಲ್ಲಿ ದಲಿತ ಮಹಿಳೆ ಸೇಸಮ್ಮ ಅವರಿಗೆ ಜಾತಿ ನಿಂದನೆ ನಡೆಸಿ, ಕೆಲಸ ನಿರ್ವಹಿಸಲು ಅವಕಾಶ ನೀಡಲಾಗುತ್ತಿಲ್ಲ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಿನಯ ಕುಮಾರಿ ಸಂಘಕ್ಕೆ ಭೇಟಿ ನೀಡಿ ಸೇಸಮ್ಮ ಅವರೊಂದಿಗೆ ಘಟನೆ ಕುರಿತು ಚರ್ಚೆ ನಡೆಸಿದ್ದಾರೆ.
ಈ ನಡುವೆ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಸೇಸಮ್ಮ ಅವರು ಕೆಲಸ ನಿರ್ವಹಿಸಬೇಕಾದರೆ ಸಂಘದ ನಿಯಮಾವಳಿಗಳ ಪ್ರಕಾರ ಸ್ಟಾಕ್ ಡಾಕ್ಯುಮೆಂಟ್ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ದಾಸ್ತಾನು ಪರಿಶೀಲನೆ ನಡೆಸಿ ಎಲ್ಲ ಸರಿಯಾಗಿಸಿ ಕೆಲಸ ಮಾಡಲು ಅನುವುಮಾಡಿಕೊಡುವುದು ಸರಿಯಾದ ಕ್ರಮ. ಆದರೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ದಾಸ್ತಾನು ಪರಿಶೀಲನೆ ಕುರಿತು ಕೇವಲ ಸಂಘದ ಅಧಿಕಾರಿಗಳಿಂದ ಮೌಖಿಕ ಮಾಹಿತಿ ಪಡೆದು “ಸ್ಟಾಕ್ ಸರಿಯಿದೆ” ಎಂಬ ನಿರ್ಣಯಕ್ಕೆ ಬಂದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ನೇರಳಕಟ್ಟೆಯಲ್ಲೊಂದು ಅಮಾನವೀಯ ಘಟನೆ..| ದಲಿತ ಕ್ಲರ್ಕ್ ಶೇಷಮ್ಮನನ್ನು ಪೀಡಿಸುತ್ತಿರುವ ಸೊಸೈಟಿ ಆಡಳಿತ ವರ್ಗ
ಇದರಿಂದ ಸಂಘದಲ್ಲಿ ಯಾವುದೇ ಅವ್ಯವಹಾರ ನಡೆದಿದೆಯೇ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಸಂಘದ ಸಿಬ್ಬಂದಿ ಹಾಗೂ ಅಧಿಕಾರಿಗಳು ಇನ್ನೂ ಸೇಸಮ್ಮ ಅವರಿಗೆ ಪಾಸ್ವರ್ಡ್ ನೀಡದೇ ಇರುವುದು, ಸ್ಟಾಕ್ ವ್ಯತ್ಯಾಸವನ್ನು ಸರಿಪಡಿಸಲು ಸಮಯ ಪಡೆಯುವ ಪ್ರಯತ್ನವೇ ಎಂಬ ಪ್ರಶ್ನೆಯೂ ಉದ್ಭವಿಸಿದೆ.
ಸೇಸಮ್ಮ ಅವರಿಗೆ ಪಾಸ್ವರ್ಡ್ ನೀಡಿದರೂ, ಸಂಪೂರ್ಣ ದಾಸ್ತಾನು ಪರಿಶೀಲನೆ ಮಾಡದೆ ಅಧಿಕಾರ ಸ್ವೀಕರಿಸಿದಲ್ಲಿ ಮುಂದಿನ ದಿನಗಳಲ್ಲಿ ಇತರರು ಮಾಡಿದ ತಪ್ಪಿಗೆ ಅವರು ಬಲಿಯಾಗುವ ಸಾಧ್ಯತೆ ಇಲ್ಲವೇ ಎಂಬ ಆತಂಕ ವ್ಯಕ್ತವಾಗಿದೆ.
ದಲಿತ ಸಮುದಾಯದ ಮಹಿಳೆಗೆ ಜಾತಿ ನಿಂದನೆ ಜೊತೆಗೆ ಇಷ್ಟು ದಿನಗಳ ಕಾಲ ಕೆಲಸಮಾಡದಂತೆ ಸತಾಯಿಸಿರುವುದು ಅಪರಾಧವೇ ಸರಿ. ಕುರಿತಾಗಿ ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.