ಮಂಗಳೂರು:ಮೈತುಂಬ ಕೆಜಿಗಟ್ಟಲೆ ಬಂಗಾರ, ಸುತ್ತಲೂ 10-12 ಜನರ ಬೌನ್ಸರ್ಗಳ ಕಾವಲು, ಸಿನಿಮಾ ಪ್ರಮೋಷನ್, ಅದ್ದೂರಿ ಉದ್ಘಾಟನೆಗಳು ಹಾಗೂ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ‘ಮಹಾದಾನಿ’ಯಂತೆ ಮೆರೆಯುತ್ತಿದ್ದ ಲಾಂಚು ಲಾಲ್ ಕೊನೆಗೂ ಕೈ ಎತ್ತಿದ್ದಾರೆ!
ಜನರನ್ನು ಆಕರ್ಷಿಸಲು ರೂಪಿಸಿದ್ದ ‘ಅಸ್ತ್ರ ಲಕ್ಕಿ ಸ್ಕೀಮ್’ ನಂಬಿ ಹಣ ಹೂಡಿಕೆ ಮಾಡಿದ ಸಾವಿರಾರು ಸದಸ್ಯರಿಗೆ ಈಗ ಲಕ್ ಅಲ್ಲ, ‘ಬ್ಯಾಡ್ ಲಕ್’ ಶುರುವಾಗಿದೆ. ಬಣ್ಣ ಬಣ್ಣದ ಮಾತುಗಳನ್ನು ನಂಬಿ ಹಣ ತೊಡಗಿಸಿದ ಬಡ ಮತ್ತು ಮಧ್ಯಮ ವರ್ಗದ ಗ್ರಾಹಕರು ಈಗ ಬೀದಿಗೆ ಬೀಳುವಂತಾಗಿದೆ.
ದೋಣಿ ಮುಳುಗುವ ದಿನ ಬಂದೇ ಬಿಡ್ತು!
ಇಂಥ ಅನಧಿಕೃತ ಹಾಗೂ ಅತಿಯಾದ ಆಸೆ ತೋರಿಸುವ ‘ಲಕ್ಕಿ ಸ್ಕೀಮ್’ಗಳು ಒಂದಲ್ಲ ಒಂದು ದಿನ ಮುಳುಗುವುದು ಖಚಿತ ಎಂಬ ಮಾತಿತ್ತು. ಈ ‘ಅಸ್ತ್ರ’ದ ದೋಣಿ ಯಾವಾಗ ಮುಳುಗುತ್ತದೆ ಎಂದು ಕಾಯುತ್ತಿದ್ದವರಿಗೆ ಆ ಕ್ಷಣ ಕೊನೆಗೂ ಬಂದೇ ಬಿಟ್ಟಿದೆ. ಸ್ಕೀಮ್ನ ಅವಧಿ ಮುಗಿದರೂ ಹಣ ವಾಪಸ್ ನೀಡದೆ ಸತಾಯಿಸುತ್ತಿದ್ದ ಹಿನ್ನೆಲೆಯಲ್ಲಿ, ತಾಳ್ಮೆ ಕಳೆದುಕೊಂಡ ಗ್ರಾಹಕರು ಅಸ್ತ್ರ ಗ್ರೂಪ್ ಕಚೇರಿಗೆ ದಿಢೀರ್ ಮುತ್ತಿಗೆ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರಿ ಪ್ರಚಾರ, ಅದ್ದೂರಿ ಶೋಕಿ: ಗ್ರಾಹಕರು ಮರುಳಾಗಿದ್ದು ಹೇಗೆ?
- ಆಕರ್ಷಕ ಕೊಡುಗೆಗಳ ಆಮಿಷ: ತಿಂಗಳಿಗೆ ಇಂತಿಷ್ಟು ಹಣ ಕಟ್ಟಿದರೆ ಬಂಪರ್ ಬಹುಮಾನ, ಚಿನ್ನದ ನಾಣ್ಯ ಹಾಗೂ ಬಡ್ಡಿ ಸಹಿತ ಹಣ ವಾಪಸ್ ನೀಡುವ ಆಸೆ ತೋರಿಸಲಾಗಿತ್ತು.
- ಅದ್ದೂರಿ ಲೈಫ್ಸ್ಟೈಲ್ ಪ್ರದರ್ಶನ: ಕುತ್ತಿಗೆ-ಕೈಗಳಲ್ಲಿ ಕೆಜಿಗಟ್ಟಲೆ ಚಿನ್ನದ ಆಭರಣ ಧರಿಸಿ, ಬೌನ್ಸರ್ಗಳ ಪಟಾಲಂ ಜೊತೆಗೆ ಬಂದು ಜಂಬ ಕೊಚ್ಚಿಕೊಳ್ಳುತ್ತಿದ್ದ ಲಂಚು ಲಾಲ್, ಜನರಲ್ಲಿ ತಾನು ಮಹಾ ಶ್ರೀಮಂತನೆಂಬ ಹುಸಿ ನಂಬಿಕೆ ಹುಟ್ಟಿಸಿದ್ದ.
- ಸಿನಿಮಾ ಹಾಗೂ ಕ್ರಿಕೆಟ್ ಪ್ರಮೋಷನ್: ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಕ್ರಿಕೆಟ್ ಟೂರ್ನಿಗಳಿಗೆ ಭಾರಿ ಪ್ರಾಯೋಜಕತ್ವ (Sponsorship) ನೀಡಿ ‘ದಾನಿ’ಯಂತೆ ಬಿಂಬಿಸಿಕೊಂಡಿದ್ದ.
ಸಂತ್ರಸ್ತರ ಅಳಲು:
“ನಾವು ಕೂಲಿ-ನಾಲಿ ಮಾಡಿ, ದಿನಗೂಡಿ ದುಡಿದ ಹಣವನ್ನು ಅಸ್ತ್ರ ಗ್ರೂಪ್ನಲ್ಲಿ ಹೂಡಿಕೆ ಮಾಡಿದ್ದೆವು. ಅವಧಿ ಮುಗಿದು ತಿಂಗಳುಗಳೇ ಕಳೆದರೂ ಹಣ ನೀಡದೆ ನೆಪ ಹೇಳುತ್ತಾ ಸತಾಯಿಸುತ್ತಿದ್ದಾರೆ. ಈಗ ಕಚೇರಿಯಲ್ಲಿ ಕೇಳಿದರೆ ಸರಿಯಾದ ಉತ್ತರ ಸಿಗುತ್ತಿಲ್ಲ. ನಮ್ಮ ರಕ್ತ ಹಿಂಡಿ ಇವನು ಶೋಕಿ ಮಾಡುತ್ತಿದ್ದಾನೆ,” ಎಂದು ವಂಚನೆಗೊಳಗಾದ ಸಂತ್ರಸ್ತರು ಆಕ್ರೋಶ ಹೊರಹಾಕಿದ್ದಾರೆ.