ಮೂಡಿಗೆರೆ: ತಾಲೂಕಿನ ಬಿದರಳ್ಳಿ ಗ್ರಾಮದ ಬಾಳೆಹಳ್ಳಿಯಲ್ಲಿ ಕಾರ್ಮಿಕರು ಮತ್ತು ತೋಟದ ಮಾಲೀಕರ ನಡುವೆ ಕೂಲಿ ವಿಚಾರವಾಗಿ ನಡೆದ ಜಟಾಪಟಿಯ ವೇಳೆ ಗುಂಡು ಸಿಡಿದು ಮಗುವೊಂದು ಗಂಭೀರವಾಗಿ ಗಾಯಗೊಂಡಿರುವ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಕೂಡಲೇ ಬಂಧಿಸಿ, ಗಾಯಗೊಂಡ ಮಗುವಿಗೆ ಸೂಕ್ತ ಚಿಕಿತ್ಸೆ ಹಾಗೂ ಪರಿಹಾರವನ್ನು ನೀಡಬೇಕು ಎಂದು ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ (TUCI) ಜಿಲ್ಲಾ ಅಧ್ಯಕ್ಷ ಕೃಷ್ಣಪ್ಪ ಕೆ.ಕೆ. ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸ್ವಾತಂತ್ರ್ಯ ದೊರೆತು 79 ವರ್ಷಗಳು ಕಳೆದರೂ ಮಲೆನಾಡಿನ ತೋಟ ಕಾರ್ಮಿಕರಿಗೆ ಇನ್ನೂ ನಿಜವಾದ ಸ್ವಾತಂತ್ರ್ಯ ಸಿಕ್ಕಿಲ್ಲ ಎಂಬುದು ವಿಪರ್ಯಾಸವಾಗಿದೆ ಎಂದು ಹೇಳಿದ್ದಾರೆ. ಈ ದುರ್ಘಟನೆಗೆ ಸರ್ಕಾರವೇ ನೇರ ಹೊಣೆಗಾರವಾಗಿದ್ದು, ಪ್ರಕರಣದಲ್ಲಿ ತೋಟದ ಮಾಲೀಕ ಜಗದೀಶ್ ಗೌಡ ಹಾಗೂ ಅವರ ಸಹಚರರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
12 ಎಕರೆಗಿಂತ ಹೆಚ್ಚು ಭೂಮಿ ಹೊಂದಿರುವ ತೋಟದ ಮಾಲೀಕರು ಕಾರ್ಮಿಕ ಇಲಾಖೆಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಂಡು ಪರವಾನಗಿ ಪಡೆಯಬೇಕೆಂಬ ನಿಯಮವಿದ್ದರೂ, ಕಾರ್ಮಿಕ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಭ್ರಷ್ಟಾಚಾರದಿಂದ ಈ ನಿಯಮಗಳು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. ಮಲೆನಾಡಿನ ಅನೇಕ ಕಾಫಿ ಬೆಳೆಗಾರರಿಗೆ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನದ ಬಗ್ಗೆ ಅರಿವೇ ಇಲ್ಲದಂತಾಗಿದೆ ಎಂದು ದೂರಿದ್ದಾರೆ.
ಹೊರ ರಾಜ್ಯಗಳಿಂದ ಆಗಮಿಸುವ ವಲಸೆ ಕಾರ್ಮಿಕರನ್ನು ಸರ್ಕಾರದ ನಿಯಮಾನುಸಾರ ನೋಂದಣಿ ಮಾಡಿ, ಅವರಿಗೆ ಕಾನೂನುಬದ್ಧ ಭದ್ರತೆ ಹಾಗೂ ಮೂಲ ಕಾರ್ಮಿಕರಿಗಿಂತ ಹೆಚ್ಚಿನ ವೇತನ ನೀಡಬೇಕಾಗಿದ್ದರೂ, ಕಡಿಮೆ ಸಂಬಳ ನೀಡಿ ಹೆಚ್ಚು ದುಡಿಸಿಕೊಳ್ಳಲಾಗುತ್ತಿದೆ. ಇದಕ್ಕೆ ಕಾರ್ಮಿಕ ಇಲಾಖೆಯ ಮೌನ ಬೆಂಬಲವೂ ಇದೆ ಎಂದು ಕೃಷ್ಣಪ್ಪ ಆರೋಪಿಸಿದ್ದಾರೆ.
1991ರ ಹೊಸ ಆರ್ಥಿಕ ನೀತಿಯ ನಂತರ ಕಾಫಿ ಬೆಳೆ ಮುಕ್ತ ಮಾರುಕಟ್ಟೆಗೆ ಒಳಪಟ್ಟಿದ್ದು, ಅಂದಿನಿಂದ ತೋಟ ಕಾರ್ಮಿಕರ ಮೇಲೆ ನಿರಂತರ ದಬ್ಬಾಳಿಕೆ, ದೌರ್ಜನ್ಯ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಗಳು ನಡೆಯುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಹಲವಾರು ಕೊಲೆ ಪ್ರಕರಣಗಳು ಆತ್ಮಹತ್ಯೆಗಳೆಂದು ಬಿಂಬಿಸಲ್ಪಟ್ಟಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕಾನೂನು ಜಾರಿಗೊಳಿಸಬೇಕಾದ ಪೊಲೀಸ್ ಇಲಾಖೆ ಮತ್ತು ಕಾರ್ಮಿಕ ಇಲಾಖೆ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾಗಿದ್ದು, ಕಾರ್ಮಿಕರ ಪರ ನಿಲ್ಲಬೇಕಾದ ಕೆಲವು ಕಾರ್ಮಿಕ ಸಂಘಟನೆಗಳೂ ಮಾಲೀಕರ ಪರವಾಗಿವೆ ಎಂದು ಅವರು ಟೀಕಿಸಿದ್ದಾರೆ. ಇದರ ಪರಿಣಾಮವಾಗಿ ಮಲೆನಾಡಿನ ಕಾರ್ಮಿಕರು ತಮ್ಮ ಮೂಲಭೂತ ಹಕ್ಕುಗಳು ಹಾಗೂ ಸ್ವತಂತ್ರವಾಗಿ ಮಾತನಾಡುವ ಹಕ್ಕನ್ನು ಕಳೆದುಕೊಳ್ಳುವಂತಾಗಿದೆ ಎಂದು ತಿಳಿಸಿದ್ದಾರೆ.
ಪ್ರಕರಣದ ಆರೋಪಿಗಳು ಎಲ್ಲಿಯೂ ಪರಾರಿಯಾಗದಿದ್ದರೂ ಅವರನ್ನು ಇನ್ನೂ ಬಂಧಿಸದಿರುವುದು ಖಂಡನೀಯವಾಗಿದೆ ಎಂದು ಹೇಳಿರುವ ಅವರು, ಕೂಡಲೇ ಆರೋಪಿಗಳನ್ನು ಬಂಧಿಸಿ ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 109 (ಕೊಲೆ ಯತ್ನ), ಸೆಕ್ಷನ್ 117 (ಅಪಾಯಕಾರಿ ಆಯುಧಗಳಿಂದ ಗಂಭೀರ ಗಾಯ ಉಂಟುಮಾಡುವುದು) ಸೇರಿದಂತೆ ಅಕ್ರಮವಾಗಿ ಗುಂಡು ಹಾರಿಸಿದ ಹಾಗೂ ಪರವಾನಗಿ ಇಲ್ಲದೆ ಶಸ್ತ್ರಾಸ್ತ್ರ ಹೊಂದಿರುವ ಸಂಬಂಧಿತ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25 ಮತ್ತು ಸೆಕ್ಷನ್ 3/25ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಜೊತೆಗೆ ಗಾಯಗೊಂಡ ಮಗುವಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಮತ್ತು ಉಚಿತ ಚಿಕಿತ್ಸೆಯನ್ನು ಒದಗಿಸಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು TUCI ಎಚ್ಚರಿಕೆ ನೀಡಿದೆ.